ನವದೆಹಲಿ: ಸಂವಿಧಾನ ಮತ್ತು ಜಾತ್ಯತೀತರ ಬಗ್ಗೆ ಕೇಂದ್ರದ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ನೀಡಿದ್ದ ಹೇಳಿಕೆಯ ವಿರುದ್ಧ ಕಳೆದ ಬುಧವಾರ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು, ಹೆಗಡೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಘೋಷಣೆ ಕೂಗುತ್ತಿದ್ದರು.
ಸರಿಯಾಗಿ ಅದೇ ವೇಳೆಗೆ, ‘ನಮಗೆ ಪ್ರತ್ಯೇಕ ಹೈಕೋರ್ಟ್ ಬೇಕು’ ಎಂದು ತೆಲಂಗಾಣದ ಸಂಸದರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ಆರಂಭಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬೇಡಿಕೆಗೆ ಆದ್ಯತೆ ನೀಡದ ಸ್ಪೀಕರ್ ಸುಮಿತ್ರಾ ಮಹಾಜನ್, ಹೈಕೋರ್ಟ್ಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದವರ ಮೇಲೇ ಗಮನ ಕೇಂದ್ರೀಕರಿಸಿದ್ದು ಕಂಡುಬಂತು.
ತಮ್ಮ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವ ಸುಳಿವು ದೊರೆತ ಕೂಡಲೇ ಮುಂದೆ ಬಂದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ‘ಅಯ್ಯೋ ಈ ಸರ್ಕಾರದಲ್ಲಿ ಇರುವವರು ಸಂವಿಧಾನವನ್ನು ಲೆಕ್ಕಿಸದೆ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನವನ್ನೇ ಬದಲಿಸಲು ಹೊರಟವರ ಮುಂದೆ ಹೈಕೋರ್ಟ್ ಯಾವ ಲೆಕ್ಕ’ ಎಂದು ಪ್ರಶ್ನಿಸಿದರು.
‘ಸಂವಿಧಾನವೇ ಇಲ್ಲ ಎಂದ ಮೇಲೆ ಅದರ ವ್ಯಾಪ್ತಿಯಡಿ ಬರುವ ಹೈಕೋರ್ಟ್ ಇರುತ್ತದೆಯೇ’ ಎಂದು ತೆಲಂಗಾಣದ ಸಂಸದರನ್ನು ಕೇಳಿದಾಗ, ಪ್ರತಿಭಟನೆಯ ಗದ್ದಲದ ನಡುವೆಯೂ ಕೆಲವು ಸದಸ್ಯರಲ್ಲಿ ನಗೆ ಉಕ್ಕಿತು.
–ಸಿದ್ದಯ್ಯ ಹಿರೇಮಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.