ರಾಯಚೂರು: ‘ಎರಡು ತಿಂಗಳಿಗೊಮ್ಮೆ ಜಿಲ್ಲೆಗೆ ಬಂದು ಹೋಗುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅವರು ಜನರ ಮೂಗಿಗೆ ತುಪ್ಪ ಸವರಿ ಹೋಗುತ್ತಿದ್ದಾರೆ. ಜನರು ನೀಡಿದ ದೂರುಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎನ್. ಮಹಾವೀರ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಸಚಿವರು ಬಂದಾಗೊಮ್ಮೆ ಮನವಿ ಕೊಡುವುದಕ್ಕೆ ನಮ್ಮ ಸಂಘದವರು ನಿಂತುಕೊಳ್ಳುತ್ತೇವೆ. ಸಚಿವರು ದೂರದಿಂದಲೇ ನನ್ನ ಹೆಸರು ಕೂಗಿ ಮಾತನಾಡಿಸುತ್ತಾರೆ. ಇದರಿಂದ, ಸಚಿವರು ಮತ್ತು ಮಹಾವೀರ ನಡುವೆ ಒಳಗೊಳಗೆ ಒಳ್ಳೆಯ ಸಂಬಂಧ ಇದೆ ಎಂದು ನೆರೆದ ಜನರು ತಿಳಿದುಕೊಳ್ಳುತ್ತಿದ್ದಾರೆ’ ಎಂದರು.
ಮಾರುಕಟ್ಟೆ ಅಭಿವೃದ್ಧಿ ಮಾಡಿ ವ್ಯಾಪಾರಿಗಳಿಗೆ, ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಕೇಳುತ್ತಿದ್ದೇವೆ. ಆದರೆ ಜನರ ಮುಂದೆಯೇ ನನ್ನ ಮೂಗಿಗೆ ತುಪ್ಪ ಹಚ್ಚಿ ಹೋಗುತ್ತಿದ್ದಾರೆಯೇ ವಿನಾ ಕೆಲಸ ಮಾಡುತ್ತಿಲ್ಲ. ದೂರದ ಮೈಸೂರಿನವರಿಗೆ ಈ ಜಿಲ್ಲೆಯ ಉಸ್ತುವಾರಿ ಕೊಡಬೇಡಿ ಎಂದು ಆರಂಭದಲ್ಲೇ ಜನರು ವಿರೋಧ ಮಾಡಿದ್ದರು. ಸರ್ಕಾರ ಜನರ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಅಳಲು ಹೇಳಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು.
–ನಾಗರಾಜ ಚಿನಗುಂಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.