ADVERTISEMENT

ನಾಗಪುರದ ಸವಾಲಿಗೆ ನಾವು ಸಿದ್ಧ: ವಿನಯ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 20:36 IST
Last Updated 3 ಡಿಸೆಂಬರ್ 2017, 20:36 IST
ನಾಗಪುರದ ಸವಾಲಿಗೆ ನಾವು ಸಿದ್ಧ: ವಿನಯ್
ನಾಗಪುರದ ಸವಾಲಿಗೆ ನಾವು ಸಿದ್ಧ: ವಿನಯ್   

ಬೆಂಗಳೂರು: ’ನಾಗಪುರದಲ್ಲಿ ನಾನು ಇದೇ ಮೊದಲ ಬಾರಿಗೆ ಆಡಲಿದ್ದೇನೆ. ಇತ್ತೀಚೆಗೆ ಅಲ್ಲಿ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಣ ಪಂದ್ಯದಲ್ಲಿ ಪಿಚ್ ಬ್ಯಾಟ್ಸ್ ಮನ್ ಸ್ನೇಹಿಯಾಗಿತ್ತು. ನಮಗೂ ಅಂತಹದ್ದೇ ಪಿಚ್ ಸಿಗುವ ನಿರೀಕ್ಷೆ ಇದೆ’–

ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಆರ್. ವಿನಯಕುಮಾರ್ ಅವರ ಮಾತುಗಳಿವು. ಡಿಸೆಂಬರ್ 7ರಂದು ನಾಗಪುರದಲ್ಲಿ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕ ತಂಡವು ಮುಂಬೈ ಬಳಗವನ್ನು ಎದುರಿಸಲಿದೆ. ಆ ಪಂದ್ಯಕ್ಕಾಗಿ ವಿನಯ್ ಬಳಗವು ಕಠಿಣ ತಾಲೀಮು ಆರಂಭಿಸಿದೆ. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸದ ನಂತರ ವಿನಯಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾಗಪುರದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ಲಭಿಸಿದರೆ ಉತ್ತಮವಾಗಿ ಆಡುವ ಸಾಮರ್ಥ್ಯ ನಮ್ಮಲ್ಲಿದೆ. ಆರಂಭಿಕ ಜೋಡಿ ಆರ್. ಸಮರ್ಥ್ ಮತ್ತು ಮಯಂಕ್ ಅಗರವಾಲ್ ಅವರು ಉತ್ತಮ ಫಾರ್ಮ್ ನಲ್ಲಿದ್ದಾರೆ. ಕರುಣ್ ನಾಯರ್, ಡಿ. ನಿಶ್ಚಲ್ ಮತ್ತು ಸ್ಟುವರ್ಟ್ ಬಿನ್ನಿ ಕೂಡ ಚೆನ್ನಾಗಿ ಆಡುತ್ತಿದ್ದಾರೆ. ಕೆ.ಎಲ್. ರಾಹುಲ್ ಅವರು ತಂಡಕ್ಕೆ ಮರಳುವ ಬಗ್ಗೆ ಖಚಿತವಿಲ್ಲ. ಅವರು ಬಂದರೆ ತಂಡದ ಬಲ ಹೆಚ್ಚಲಿದೆ’ ಎಂದು ವಿನಯ್ ಹೇಳಿದರು.

ADVERTISEMENT

‘ಮುಂಬೈ ತಂಡದ ವಿರುದ್ಧ 2014–15ರಲ್ಲಿ ಸೆಮಿಫೈನಲ್ ನ ಮೊದಲ ಇನಿಂಗ್ಸ್ ನಲ್ಲಿ ನಮ್ಮ ತಂಡವು 202 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ನಾವು ಮುಂಬೈ ತಂಡವನ್ನು 44 ರನ್‌ಗಳಿಗೆ ಆಲೌಟ್ ಮಾಡಿದ್ದೆವು. ನಾನು ಆರು ವಿಕೆಟ್ ಪಡೆದಿದ್ದನ್ನು ನೆನಪಿಸಿಕೊಂಡರೆ ಹೆಮ್ಮೆಯೆನಿಸುತ್ತದೆ. ಎರಡನೇ ಇನಿಂಗ್ಸ್ ನಲ್ಲಿ ಸಂಘಟಿತ ಹೋರಾಟದ ಮೂಲಕ ತಂಡವು ಜಯಿಸಿ ಫೈನಲ್ ಪ್ರವೇಶಿಸಿತ್ತು’ ಎಂದು ವಿನಯ್ ನೆನಪಿಸಿಕೊಂಡರು.

‘ನಮ್ಮ ತಂಡವು ಸಮತೋಲನವಾಗಿದೆ. ವೇಗದ ಬೌಲಿಂಗ್, ಸ್ಪಿನ್ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಸಮರ್ಥ ಆಟಗಾರರಿದ್ದಾರೆ. ಆಲ್ ರೌಂಡ್ ಆಟದ ಮೂಲಕ ಗೆಲುವು ಗಳಿಸುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.