ಮೆಲ್ಬರ್ನ್ (ಪಿಟಿಐ): ‘ಭಾರತ ತಂಡ ತವರಿನಲ್ಲಿ ಸರಣಿ ಸೋಲುವ ಭೀತಿಗೊಳಗಾಗಿದೆ. ಹೀಗಾ ಗಿಯೇ ಆ ತಂಡದವರು ಅನಗತ್ಯ ವಿವಾದ ಗಳನ್ನು ಹುಟ್ಟು ಹಾಕಿ ನಮ್ಮ ಆಟಗಾ ರರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆಸ್ಟ್ರೇಲಿಯಾದ ವೇಗಿ ಮಿಷೆಲ್ ಸ್ಟಾರ್ಕ್ ಹೇಳಿದ್ದಾರೆ.
ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದ ಸ್ಟಾರ್ಕ್, ಕಾಲಿಗೆ ಗಾಯವಾಗಿದ್ದರಿಂದ ಸರಣಿಯ ಮೂರು ಮತ್ತು ನಾಲ್ಕನೇ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ‘ಸರಣಿಯ ಆರಂಭಕ್ಕೂ ಮೊದಲೇ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಸಮರ ಶುರುವಾಗಿತ್ತು. ಇದೇ ಕಾರಣದಿಂದಾಗಿ ಎಲ್ಲರೂ ಈ ಸರಣಿ ಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿ ದ್ದಾರೆ. ಅಂಗಳದಲ್ಲಿ ಆಸ್ಟ್ರೇಲಿಯಾದ ಆಟ ಗಾರರಿಗಿಂತಲೂ ಭಾರತದವರೇ ಹೆಚ್ಚು ಅತಿರೇಕದಿಂದ ವರ್ತಿಸುತ್ತಿದ್ದಾರೆ’ ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ತವರಿನಲ್ಲಿ ತಾವು ಎಲ್ಲಿ ಸರಣಿ ಸೋತು ಬಿಡುತ್ತೇವೆಯೋ ಎಂಬ ಭೀತಿ ಭಾರತದ ಆಟಗಾರರಿಗೆ ಆವರಿಸಿದೆ. ಹೀಗಾಗಿಯೇ ಅವರು ಸಣ್ಣ ಘಟನೆಗೂ ವಿವಾದದ ರೂಪ ನೀಡುವ ತಂತ್ರಗಳನ್ನು ಅನುಸರಿಸುತ್ತಿದ್ದಾರೆ’ ಎಂದಿದ್ದಾರೆ.
ಯುವ ಆಟಗಾರ ಮ್ಯಾಟ್ ರೆನ್ಷಾ ಅವರ ಬಗ್ಗೆ ಮಾತನಾಡಿರುವ ಸ್ಟಾರ್ಕ್ ‘ ಮ್ಯಾಟ್ ತನ್ನ ಆಟವನ್ನು ತುಂಬಾ ಪ್ರೀತಿಸುವ ಹುಡುಗ. ಮೊದಲ ಬಾರಿ ಭಾರತ ಪ್ರವಾಸಕ್ಕೆ ಆಯ್ಕೆಯಾಗಿರುವ ಆತ, ಅಲ್ಲಿಯ ಪಿಚ್ಗಳ ಮರ್ಮ ಅರಿತು ಆಡುತ್ತಿರುವ ರೀತಿ ಪ್ರಶಂಸನೀಯ. ಅಲ್ಲಿನ ಆಹಾರ ಪದ್ಧತಿ ಮ್ಯಾಟ್ಗೆ ಇನ್ನೂ ಹೊಂದಿಕೆಯಾಗಿಲ್ಲ. ಹೀಗಾಗಿ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ . 20 ನೇ ವಯಸ್ಸಿನಲ್ಲೇ ಆತ ಪ್ರಬುದ್ಧನಂತೆ ಆಡುತ್ತಿದ್ದಾನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.