ಮುಂಬೈ (ಪಿಟಿಐ): ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಮುಖ್ಯ ಸಲಹೆಗಾರ ಹುದ್ದೆಗೆ ತಕ್ಷಣದಿಂದ ಅನ್ವಯಿಸುವಂತೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ.
ಕನ್ನಡಿಗ ಕುಂಬ್ಳೆ ಅವರು 2013ರ ಜನವರಿಯಲ್ಲಿ ಮುಂಬೈ ಇಂಡಿಯನ್ಸ್ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇದೇ ತಿಂಗಳ ಆರಂಭದಲ್ಲಿ ಬಿಸಿಸಿಐನಲ್ಲಿ ಹಿತಾಸಕ್ತಿ ಸಂಘರ್ಷದ ಕಾರಣಕ್ಕೆ ಭಾರತ ಕ್ರಿಕೆಟ್ ತಂಡದ ನಿರ್ದೇಶಕ ರವಿಶಾಸ್ತ್ರಿ ಅವರನ್ನು ಐಪಿಎಲ್ ಆಡಳಿತ ಮಂಡಳಿಯಿಂದ ಹಾಗೂ ರೋಜರ್ ಬಿನ್ನಿ ಅವರನ್ನು ಆಯ್ಕೆ ಸಮಿತಿಯಿಂದ ಕೈ ಬಿಡಲಾಗಿತ್ತು. ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವುದು ಅದಕ್ಕೆ ಕಾರಣ.
ಅದೇ ಸಮಯದಲ್ಲಿ ಬಿಸಿಸಿಐ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿದ್ದ ಕುಂಬ್ಳೆ ಅವರ ಸ್ಥಾನವನ್ನು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರಿಗೆ ನೀಡಲಾಗಿತ್ತು. ಅದರ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
‘ಮುಂಬೈ ಇಂಡಿಯನ್ಸ್ ಫ್ರಾಂಚೈಸ್ನ್ನು ಬಲಪಡಿಸಿದ್ದಕ್ಕಾಗಿ ಅನಿಲ್ ಕುಂಬ್ಳೆ ಅವರಿಗೆ ಮುಂಬೈ ಇಂಡಿಯನ್ಸ್ ತಂಡ ಆಭಾರಿಯಾಗಿದೆ. ಅವರ ಮೊದಲ ವರ್ಷದ ಅಧಿಕಾರಾವಧಿಯಲ್ಲಿ ತಂಡವು 2013ರಲ್ಲಿ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟೂರ್ನಿಗಳನ್ನು ಜಯಿಸಿತ್ತು. 2015ರಲ್ಲೂ ತಂಡ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು’ ಎಂದು ಮುಂಬೈ ಇಂಡಿಯನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು, ‘ಕ್ರಿಕೆಟ್ ಹಾಗೂ ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಹುದ್ದೆ ತೊರೆದಿರುವೆ. ಕಳೆದ ಮೂರು ವರ್ಷಗಳಲ್ಲಿ ಮೂರು ಅಭೂತಪೂರ್ವ ಜಯ ಸಿಕ್ಕಿವೆ. ಎರಡು ಬಾರಿ ಐಪಿಎಲ್ ಹಾಗೂ ಒಂದು ಬಾರಿ ಚಾಂಪಿಯನ್ಸ್ ಲೀಗ್ನಲ್ಲಿ ಜಯಿಸಿದ್ದೇವೆ. ಒಂದೇ ವರ್ಷದಲ್ಲಿ (2013ರಲ್ಲಿ) ಎರಡು ಟ್ರೋಫಿಗಳನ್ನು ಗೆದ್ದಿದ್ದು ನಮ್ಮ ಹೆಗ್ಗಳಿಕೆ’ ಎಂದು ಕುಂಬ್ಳೆ ನುಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.