ADVERTISEMENT

ರಣಜಿಗೂ ಮುನ್ನವೇ ಪ್ರಶಸ್ತಿ ಮೊತ್ತದ ಬಗ್ಗೆ ಕೇಳಿದ್ದ ಪಂಡಿತ್‌

ಪಿಟಿಐ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ವಿದರ್ಭ ಆಟಗಾರರು ಕೋಚ್‌ ಚಂದ್ರಕಾಂತ್ ಪಂಡಿತ್‌ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು
ವಿದರ್ಭ ಆಟಗಾರರು ಕೋಚ್‌ ಚಂದ್ರಕಾಂತ್ ಪಂಡಿತ್‌ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು   

ಇಂದೋರ್‌: ‘ರಣಜಿ ಟ್ರೋಫಿ ಗೆದ್ದರೆ ಸಿಗುವ ಪ್ರಶಸ್ತಿ ಮೊತ್ತವನ್ನು ಏನು ಮಾಡುತ್ತೀರೆಂದು ಟೂರ್ನಿಗೂ ಮುನ್ನವೇ ಕೋಚ್‌ ಚಂದ್ರಕಾಂತ್‌ ಪಂಡಿತ್‌ ನಮ್ಮ ಬಳಿ ಕೇಳಿದ್ದರು’ ಎಂದು ವಿದರ್ಭ ಕ್ರಿಕೆಟ್‌ ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ್‌ ವೈದ್ಯ ತಿಳಿಸಿದ್ದಾರೆ.

‘ಕೋಚ್‌ ಆಗಿ ನೇಮಕವಾದ ನಂತರ ನಮ್ಮನ್ನು ಭೇಟಿ ಮಾಡಿದ್ದ ಚಂದ್ರಕಾಂತ್, ಪ್ರಶಸ್ತಿಯ ಹಣವನ್ನು ಯಾವ ಉದ್ದೇಶಕ್ಕೆ ಬಳಸುತ್ತೀರಿ ಎಂದು ಪ್ರಶ್ನಿಸಿದ್ದರು. ಆ ಕ್ಷಣ ನಾವೆಲ್ಲಾ ಅಚ್ಚರಿಯಿಂದ ಅವರತ್ತ ನೋಡಿ ಯಾವ ಪ್ರಶಸ್ತಿ ಎಂದು ಕೇಳಿದ್ದೆವು. ಅದಕ್ಕೆ ಪ್ರತಿಕ್ರಿಯಿಸಿದ್ದ ಅವರು ಈ ಬಾರಿ ವಿದರ್ಭ ತಂಡ ರಣಜಿ ಟ್ರೋಫಿ ಗೆಲ್ಲುತ್ತದೆಯಲ್ಲ, ಆಗ ಸಿಗುವ ಹಣ ಎಂದಿದ್ದರು. ಚಂದ್ರಕಾಂತ್‌ ಮಾತು ಕೇಳಿ ನಮಗೆ ತುಂಬಾ ಖುಷಿಯಾಗಿತ್ತು. ಅವರು ಹೇಳಿದ್ದನ್ನು ಈಗ ಮಾಡಿ ತೋರಿಸಿದ್ದಾರೆ’ ಎಂದು ವೈದ್ಯ ಸಂತಸ ವ್ಯಕ್ತಪಡಿಸಿದರು.

‘ನನ್ನ ಮನಸ್ಸು ಯಾವಾಗಲೂ ಸಾಧನೆಗಾಗಿ ಹಂಬಲಿಸುತ್ತದೆ. ಮಹತ್ವದ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವುದು ಎಲ್ಲಾ ತಂಡಗಳ ಗುರಿಯಾಗಿರುತ್ತದೆ. ವಿದರ್ಭ ತಂಡದಿಂದ ಮೂಡಿಬಂದಿರುವ ಸಾಧನೆ ವಿಶೇಷವಾದುದು. ಜೊತೆಗೆ ಹೆಮ್ಮೆ ಪಡುವಂತಹದ್ದು’ ಎಂದು ಚಂದ್ರಕಾಂತ್‌ ನುಡಿದಿದ್ದಾರೆ.

ADVERTISEMENT

‘‍ಎಲ್ಲಾ ಪಂದ್ಯಗಳಲ್ಲೂ ಯೋಜನೆಗೆ ಅನುಗುಣವಾಗಿ ಆಡಿದೆವು. ಆಟಗಾರರ ಪರಿಶ್ರಮದಿಂದ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ. ಸಾಧನೆಯ ಎಲ್ಲಾ ಶ್ರೇಯವೂ ಅವರಿಗೆ ಸೇರಬೇಕು. ಸಹಾಯಕ ಸಿಬ್ಬಂದಿಗಳ ನೆರವನ್ನು ನಾನು ಸ್ಮರಿಸುತ್ತೇನೆ’ ಎಂದು ಪಂಡಿತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.