ADVERTISEMENT

ಸಾರ್ವಜನಿಕ ಹಿತಾಸಕ್ತಿ ಅರ್ಜಿ

ನಿಮಗಿದು ತಿಳಿದಿರಲಿ

ಡಾ.ಗೀತಾ ಕೃಷ್ಣಮೂರ್ತಿ ನ್ಯಾಯವಾದಿ
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST

ಭಾರತ ಇಡೀ ವಿಶ್ವದಲ್ಲೇ ಅತ್ಯದ್ಭುತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವಂಥ ದೇಶ. ಭಾರತದ ಸಂವಿಧಾನ ನಮಗೆ ಕೊಡಮಾಡಿರುವ ಮೂಲಭೂತ ಹಕ್ಕುಗಳು ನಮ್ಮ ಸ್ವತಂತ್ರವಾದ ನೆಮ್ಮದಿಯ ಜೀವನಕ್ಕೆ ಕಾರಣ. ಈ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಂವಿಧಾನದಲ್ಲಿಯೇ ಪರಿಹಾರೋಪಾಯ ಮಾರ್ಗಗಳು ಇವೆ ಎಂಬುದು ನಿಜ. ಆದರೆ ಅದರ ಪ್ರಯೋಜನ ಪಡೆಯಲು ಅಶಿಕ್ಷಿತ ಬಡ ಜನ ಸಮುದಾಯ ಅಸಮರ್ಥವಾಗಿತ್ತು.

ಏಕೆಂದರೆ, 1980ಕ್ಕೆ ಮುಂಚೆ ತೊಂದರೆಗೊಳಗಾದ ವ್ಯಕ್ತಿಗಳ ಪರವಾಗಿ ಬೇರೆಯವರು ದಾವೆ ಹೂಡಲು ಅವಕಾಶವಿರಲಿಲ್ಲ. ಆದ್ದರಿಂದ ಸರ್ಕಾರ ಅಥವಾ ಸರ್ಕಾರದ ಅಂಗ ಸಂಸ್ಥೆಗಳು ಕೈಗೊಂಡಿರುವ ಕ್ರಮ ಅಥವಾ ಕೈಗೊಳ್ಳಲಿರುವ ಕ್ರಮ ಯಾರೇ ವ್ಯಕ್ತಿಗೆ ನೇರವಾಗಿ ತೊಂದರೆಯುಂಟು ಮಾಡಿದ್ದರೆ ಅಥವಾ ತೊಂದರೆ ಉಂಟು ಮಾಡುವಂಥದ್ದಾಗಿದ್ದರೆ ಆ ತೊಂದರೆಗೊಳಗಾಗುವ ವ್ಯಕ್ತಿ ಅಥವಾ ತೊಂದರೆಗೆ ಒಳಗಾಗಬಹುದಾದ ವ್ಯಕ್ತಿ ಮಾತ್ರ ದಾವೆ ಹೂಡಿ ತನ್ನ ಹಿತವನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿತ್ತು. ಆದರೆ ಹಾಗೆ ತೊಂದರೆಗೊಳಗಾದವನು ಬಡವ, ಶೋಷಿತ ಅಥವಾ ಅಶಿಕ್ಷಿತನಾಗಿದ್ದರೆ, ಅವನು ಸ್ವತಃ ತಾನೇ ತನ್ನ ಹಿತವನ್ನು ರಕ್ಷಿಸಿಕೊಳ್ಳಲು ಅಸಮರ್ಥನಾಗಿರುತ್ತಿದ್ದ, ಇತರರಿಗೆ ಅವನ ಹಿತರಕ್ಷಣೆ ಮಾಡಲು ಅವಕಾಶವಿರಲಿಲ್ಲ.

ಆದರೆ ಈ ಪರಿಸ್ಥಿತಿ ತುರ್ತು ಪರಿಸ್ಥಿತಿಯ ನಂತರ ನಿಧಾನವಾಗಿ ಬದಲಾಯಿತು. ಆ ಅವಧಿಯಲ್ಲಿ, ಸರ್ಕಾರದ ದಮನ ನೀತಿ, ಕಾನೂನು ಉಲ್ಲಂಘನೆ ಮತ್ತು ಬಂಧಿತರನ್ನು ಹಿಂಸೆಗೆ ಗುರಿಪಡಿಸುತ್ತಿದ್ದುದು ಮುಂತಾದ ಅಂಶಗಳು ಶೋಷಿತರ ಪರವಾಗಿ ಇತರರು ವ್ಯಾಜ್ಯ ಹೂಡಲು ಅವಕಾಶವಿರಬೇಕೆಂಬುದರ ಅಗತ್ಯವನ್ನು ಎತ್ತಿ ತೋರಿಸಿದವು. ಈ ಕಳಕಳಿ ’ಸಾರ್ವಜನಿಕ ಹಿತಾಸಕ್ತಿ ಅರ್ಜಿ’ಯ ಪರಿಕಲ್ಪನೆಗೆ ಕಾರಣವಾಯಿತು. ಈಗ, ನೊಂದವನೇ ನ್ಯಾಯಾಲಯಕ್ಕೆ ಮೊರೆ ಹೋಗಬೇಕು ಎಂಬ ಸಾಂಪ್ರದಾಯಿಕವಾದ ಕಾನೂನಿನ ನಿಯಮವನ್ನು ಸಡಿಲಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿಯಳ್ಳ ಯಾರೇ ವ್ಯಕ್ತಿ ಅಥವಾ ಯಾವುದೇ ಸಂಘಟನೆ ನೊಂದ ವರ್ಗದ ಪರವಾಗಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು.

ಪಟ್ಟಭದ್ರ ಹಿತಾಸಕ್ತಿಗಳಿಂದ ರಾಷ್ಟ್ರದ ಸಂಪನ್ಮೂಲ ಲೂಟಿಯಾಗಿ ಸಾರ್ವಜನಿಕ ಹಿತರಕ್ಷಣೆಗೆ ಧಕ್ಕೆಯಾದಾಗ ಅಥವಾ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಯಾರೇ ವ್ಯಕ್ತಿ ಕೇವಲ ಒಂದು ಪತ್ರ ಬರೆಯುವ ಮೂಲಕ ಅಥವಾ ಒಂದು ತಂತಿ ಸಂದೇಶ ಕಳುಹಿಸುವ ಮೂಲಕ ಅತಿ ಕಡಿಮೆ ವೆಚ್ಚದಲ್ಲಿ ನ್ಯಾಯಾಲಯದ ಗಮನ ಸೆಳೆಯಬಹುದು ಎನ್ನುವುದೇ ಈ ಅರ್ಜಿಯ ವೈಶಿಷ್ಟ್ಯ. ಭಾರತದ ಸಂವಿಧಾನ ವ್ಯವಸ್ಥೆಯಲ್ಲಿ ಜನ ಸಾಮಾನ್ಯನ ಕೈಗೆಟುಕಿರುವ ಒಂದು ಅಪೂರ್ವ ಕಾನೂನು ಸೌಲಭ್ಯ ಇದು. ಸಾರ್ವಜನಿಕ ಕ್ಷೇತ್ರದಲ್ಲಿ ಇದು ಬರೀ ಸಂಚಲನವನ್ನಷ್ಟೇ ಅಲ್ಲದೆ ಸುಂಟರ ಗಾಳಿಯನ್ನೂ ಸೃಷ್ಟಿಸಿದೆ. 

ಇದರ ಮೂಲ ಉದ್ದೇಶ ಸಾರ್ವಜನಿಕ ಹಿತವನ್ನು ಕಾಪಾಡುವುದು ಅಥವಾ ಸಾರ್ವಜನಿಕ ಹಿತಕ್ಕೆ ಉಂಟಾಗುವ ಹಾನಿಯನ್ನು ತಡೆಗಟ್ಟುವುದು. ಈ ಪ್ರಯತ್ನದಲ್ಲಿ, ನಾಗರಿಕರ ದೂರು ತುಂಬ ಪ್ರಮುಖವಾಗಿದ್ದರೆ, ಅರ್ಜಿಯ ಇತ್ಯರ್ಥಮಾಡುವಾಗ ನ್ಯಾಯಾಲಯಗಳು ಅದಕ್ಕೆ ಸಂಬಂಧಪಟ್ಟ ಮತ್ತು ಅದಕ್ಕೆ ಜವಾಬ್ದಾರರಾಗಿರುವ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತರುವ ಸಂಸ್ಥೆಯಾಗಿ, ಮಧ್ಯಂತರ ಪರಿಹಾರ ನೀಡುವ ವೇದಿಕೆಯಾಗಿ, ಒಪ್ಪಂದಕ್ಕೆ ಬರುವಂತೆ ಮಾಡುವ ಮಧ್ಯಸ್ಥಿಕೆದಾರನಾಗಿ ವಿವಿಧ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸುತ್ತಿದೆ. ಇಂಥ ಒಂದು ಅರ್ಜಿಯಿಂದ ಅನೇಕಾನೇಕ ಉದ್ಯೋಗಸ್ಥ ಮಹಿಳೆಯರ ಜೀವನವನ್ನು ಸಹನೀಯವನ್ನಾಗಿ ಮಾಡಲು ಸಾಧ್ಯವಾಯಿತು ಎಂದರೆ ಈ ಕಾನೂನು ಸೌಲಭ್ಯದ ಮಹತ್ವ ಅರಿವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.