ADVERTISEMENT

ಹವ್ಯಾಸದ ಹಂದರವೇರಿ ಬದುಕಿನ ಬಳ್ಳಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2017, 19:30 IST
Last Updated 4 ಆಗಸ್ಟ್ 2017, 19:30 IST
ಚಿತ್ರ: ದಿನೇಶ್‌ ಹೊಳ್ಳ
ಚಿತ್ರ: ದಿನೇಶ್‌ ಹೊಳ್ಳ   

ಬಾಲ್ಯದಿಂದಲೂ ನನಗೆ ಪ್ರಬಂಧರಚನೆ, ಭಾಷಣ, ಚರ್ಚಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಬಲವಾಗಿತ್ತು. ಶಾಲೆಯಲ್ಲಿ ಪ್ರಬಂಧ ಬರೆಯುವ ಸ್ಪರ್ಧೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆ. ಆದರೆ ವೇದಿಕೆಯ ಮೇಲೆ ನಿಂತು ಮಾತನಾಡಲು ಧೈರ್ಯ ಸಾಲದೆ ಭಾಷಣ ಸ್ಪರ್ಧೆಗಳಿಂದ ದೂರವುಳಿಯುತ್ತಿದ್ದೆ.

ಕಾಲೇಜು ದಿನಗಳಲ್ಲಿ ಒಂದೆರಡು ಬಾರಿ ಸ್ವಾಗತ, ವರದಿ, ವಂದನಾರ್ಪಣೆಗೆಂದು ನಡುಗುತ್ತಲೇ ವೇದಿಕೆಯೇರಿದ್ದಿದೆ. ಪದವಿ ಮುಗಿಯುತ್ತಿದ್ದಂತೆ ಮದುವೆಯಾಗಿ ಸಂಸಾರಸಾಗರದಲ್ಲಿ ಈಜತೊಡಗಿದೆ. ಕೆಲವು ವರ್ಷ ಮನೆ, ಸಂಸಾರವೆಂದಷ್ಟೇ ಇದ್ದೆ.

ಯುವಜನರ ವ್ಯಕ್ತಿತ್ವ ವಿಕಸನಕ್ಕಿರುವ ಈ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭಾಷಣಕಲೆಯ ತರಬೇತಿ ಪಡೆದು ಹಂತಹಂತವಾಗಿ ಮೇಲೇರಿ ಇದೀಗ ನಿರೂಪಣೆ, ವ್ಯಕ್ತಿತ್ವ ವಿಕಸನ ತರಗತಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ತರಬೇತಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾ ಒಬ್ಬ ಭಾಷಣಗಾರ್ತಿಯಾಗಿ ಗುರುತಿಸಿಕೊಂಡು ನನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದೇನೆ.

ADVERTISEMENT

ಮಗ ಪಿ.ಯು.ಸಿ. ಮಾಡಲು ಹೊರಗಡೆ ಹೋಗುವವನಿದ್ದ. ಅವನಿಲ್ಲದಾಗ ಬೇಸರ ಕಾಡಬಾರದೆಂದು ಪತಿಯ ಸಲಹೆಯಂತೆ ದೂರಶಿಕ್ಷಣದ ಮೂಲಕ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿ ಎಂಬ ಕೋರ್ಸಿಗೆ ಸೇರಿದೆ. ಮಗ ಕಾಲೇಜ್ ಕಲಿಯಲು ಹಾಸ್ಟೆಲ್ ಸೇರುತ್ತಿದ್ದಂತೆ ನಾನು ಪರೀಕ್ಷೆಗಾಗಿ ಉತ್ತಮ ಸಿದ್ಧತೆ ಮಾಡಿಕೊಂಡೆ.

ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನಂತರ ಇಂಟರ್ನ್‌ಶಿಪ್ ಮುಗಿಸಿ ಮಾನಸಿಕ ಸಮಸ್ಯೆಗಳಿಗೆ ಸಮಾಧಾನ ಹೇಳುವ ಆಪ್ತಸಮಾಲೋಚನೆ ಮಾಡುತ್ತಿದ್ದೇನೆ. ಜೊತೆಗೆ ಪತ್ರಿಕೆಗಳಿಗೆ ಮಾನಸಿಕ ತೊಂದರೆಗಳು, ಸಾಮಾಜಿಕ, ಪರಿಸರ ಸಂಬಂಧಿತ ಲೇಖನಗಳನ್ನು ಬರೆಯುವ ಹವ್ಯಾಸವನ್ನೂ ರೂಢಿಸಿಕೊಂಡಿದ್ದೇನೆ. ಬಾಲ್ಯದಲ್ಲಿ ಅಂದುಕೊಂಡಂತೆ ಏನಾದರೂ ಮಾಡಬೇಕೆಂಬುದನ್ನು ಸಾಧಿಸಿದ ತೃಪ್ತಿಯಿದೆ.

ಮನೆಗೆಲಸ, ಆಪ್ತಸಮಾಲೋಚನೆ, ಓದು, ಬರವಣಿಗೆ, ಬಾನುಲಿ ಕಾರ‍್ಯಕ್ರಮಗಳು, ಸಭೆ-ಸಮಾರಂಭ, ಶಾಲಾ-ಕಾಲೇಜುಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗುವುದು, ಕೆಲವೊಂದು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುವುದು, ಸ್ಪರ್ಧೆಗಳನ್ನು ಏರ್ಪಡಿಸುವುದು – ಎಂದೆಲ್ಲಾ ಹೊತ್ತು ಹೋಗುವುದೇ ತಿಳಿಯುತ್ತಿಲ್ಲ.

‘ಇಷ್ಟಕ್ಕೆಲ್ಲಾ ಟೈಮ್ ಹೇಗೆ ಸಿಗುತ್ತೆ’ – ಎಂದು ಪರಿಚಯದವರು ಒಮ್ಮೊಮ್ಮೆ ಆಶ್ಚರ್ಯದಿಂದ ಕೇಳುವಾಗ ಹೌದಲ್ವಾ ಟೈಮೇ ಇಲ್ಲವೆಂದು ಎಲ್ಲರೂ ಗೊಣಗುತ್ತಿರುವಾಗ ನನಗೆ ಹೇಗೆ ಸಮಯದ ಹೊಂದಾಣಿಕೆಯಾಗುತ್ತದೆ ಎಂದು ಕ್ಷಣಕಾಲ ಯೋಚಿಸಿದರೆ ಉತ್ತರವೂ ಸಿಗುತ್ತದೆ. ಉಪಯುಕ್ತ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ ನಾನು ದೂರದರ್ಶನದಿಂದ ಬಲು ದೂರ.

ಮೊಬೈಲ್, ವಾಟ್ಸ್ಯಾಪ್ ಚಟ, ಆಟ ಇಲ್ಲವೆಂದೇ ಹೇಳಬಹುದು. ಫೇಸ್‌ಬುಕ್‌ನಲ್ಲಿ ಇನ್ನೂ ಅಕೌಂಟ್ ತೆರೆದಿಲ್ಲ. ಯಾರೊಂದಿಗೂ ಸುಮ್ಮನೆ ಹರಟುವ ಅಭ್ಯಾಸವಿಲ್ಲ. ಶಾಪಿಂಗ್, ಫಿಲಂ ಎಂದು ಹೊರಗಿನ ಸುತ್ತಾಟವಿಲ್ಲದೆ ಮನೆಯ ಸಕಲ ಕೆಲಸಗಳನ್ನೂ ಮನೆಗೆಲಸದವರಿಲ್ಲದೆ ಖುಷಿಯಿಂದ ಮಾಡುತ್ತಿರುವೆ.

ಅಡುಗೆಮನೆಯಲ್ಲೇ ಮೂರ‍್ಹೊತ್ತು ಕಳೆಯದೆ ಹಿತಮಿತವಾಗಿ ಅಡುಗೆ–ತಿಂಡಿ ಮಾಡುತ್ತಾ ದೊರೆಯುವ ಬಿಡುವಿನ ವೇಳೆಯಲ್ಲಿ ನನ್ನ ಹವ್ಯಾಸಗಳನ್ನು ಪೋಷಿಸಿಕೊಳ್ಳುತ್ತಿರುವೆ. ರಾತ್ರಿ ಬೇಗನೆ ಮಲಗಿ ಬೆಳಿಗ್ಗೆ ಬೇಗ ಏಳುವುದು, ಮೊದಲೇ ಯೋಜಿಸಿ ಎಲ್ಲದಕ್ಕೂ ವೇಳೆಯನ್ನು ಹೊಂದಿಸಿಕೊಳ್ಳುವುದರಿಂದ ಬೇಕಾದಷ್ಟು ಸಮಯ ದೊರೆಯುತ್ತಿದೆ. ಇದೇ ರಟ್ಟಾಗುತ್ತಿರುವ ನನ್ನ ಸಮಯದ ಉಳಿತಾಯದ ಗುಟ್ಟು!
–ವಿನುತ ಮುರಳೀಧರ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.