ಹಲಗೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವು ಖಚಿತ ಎಂದು ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ ವಿಶ್ವಾಸ ವ್ಯಕ್ತಪಡಿಸಿದರು.
ಹಲಗೂರಿನ ನಡುಕೇರಿ ವೀರಭದ್ರಸ್ವಾಮಿ ದೇವಾಲಯ ಮತ್ತು ಮುತ್ತತ್ತಿ ರಸ್ತೆಯಲ್ಲಿರುವ ಅಘೋರ ಭದ್ರಕಾಳಿ ಪೀಠಕ್ಕೆ ಭೇಟಿ ನೀಡಿ, ಕುಮಾರಸ್ವಾಮಿ ಆರೋಗ್ಯ ಮತ್ತು ಗೆಲುವಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದರು.
ರಾಷ್ಟ್ರದ ಭದ್ರತೆ ಮತ್ತು ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಜೆಡಿಎಸ್-ಬಿಜೆಪಿ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ. ರಾಜ್ಯದ ರೈತರು ಮತ್ತು ಜನ ಸಾಮಾನ್ಯರ ಅಭಿವೃದ್ಧಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ರವರು ರೂಪಿಸಿದ ನೀರಾವರಿ ಯೋಜನೆಗಳು ರೈತರಿಗೆ ಸಹಕಾರಿಯಾಗಿದ್ದು, ರೈತಪರ ಕಾಳಜಿ ಇರುವ ಎಚ್.ಡಿ.ಕುಮಾರಸ್ವಾಮಿ ರವರ ಅಧಿಕ ಮತಗಳ ಅಂತರದ ಗೆಲುವಿಗೆ ಕ್ಷೇತ್ರದ ಮತದಾರರು ಕೈ ಜೋಡಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಲಗೂರಿನ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಹಲವು ಹಿರಿಯ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಅವರು ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ರವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ತಮ್ಮಣ್ಣಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ರವೀಶ್, ಶಶಿಕುಮಾರ್, ಆನಂದ್, ರಾಮಚಂದ್ರೇಗೌಡ, ಕರಲಕಟ್ಟೆ ಸುರೇಶ್, ಬಿಜೆಪಿ ಮುಖಂಡರಾದ ಮೋದಿ ರವಿ, ಗಂಗಾಧರ್, ಅಭಿಜಿತ್ ಬಸವರಾಜು ಮುಖಂಡರಾದ ವಿಶ್ವ, ಯತೀಶ್, ಮಂಜಣ್ಣ, ಸದಾಶಿವ ಅರ್ಚಕ ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.