ಅವಳು ಹಡೆದ ಆ ರಾತ್ರಿ ಕೊರೆಯೋ ಚಳಿಯಿತ್ತು. ಆಮೇಲೆ
ವರ್ಷಾವರ್ಷಾ ಉರುಳ್ತಾಹೋದಂಗೆ, ಆ ಮಣ್ಕುಜಂತೆಮೇಲೆ
ಹೆಪ್ಪುಗಟ್ಟಿದ್ದ ಜವುಗು, ಹೊಗೆಬಿಡ್ತಿದ್ದ ಒಲೆ- ಎಲ್ಲಾ ಮರೆತ್ಳು
ಅವಳು; ಹಡೆದ್ಮೇಲೂ, ಬೆಳಗಾಗೋತನ್ಕ, ಬಸಿರು ಚೀಲ ಸೆಳಕು
ಸೆಳಕಾಡ್ತಿತ್ತು ಅನ್ನೋದನ್ನೂ. ಎಲ್ಲಕ್ಕಿಂತ, ಬಡವರ ಹಟ್ಟಿವಳ್ಗೆ
ಬಾಗಿಲ್ಗಳಿರೋಲ್ಲ, ಒಳಕೋಣೆ ಇರೋಲ್ಲ, ಹಂಗಾಗಿ ತನ್ದೆಲ್ಲಾ
ಖುಲ್ಲಾ ಬಯಲಲ್ಲೇ ಆಗ್ಹೋಯ್ತು ಅನ್ನೋ ಸಂಕ್ಟವನ್ನೂ.
ಅದ್ಕೇ ನೋಡಿ, ಆಮೇಲಾಮೇಲೆ, ಆ ದಿವಸ ಇದೆಯಲ್ಲಾ,
ಅದು ಹಬ್ಬದ್ದಿನಾ ಆಯ್ತು, ರಜಾ ದಿವ್ಸಾ ಆಯ್ತು ಎಲ್ಲಾರಿಗೂ,
ಎಲ್ಲಾರಿಗೂ ಪಾಲಿರಲಿ ಅದರಲ್ಲಿ ಅಂತ. ಆವತ್ತು ಅಲ್ಲಿದ್ದ
ಆ ಕುರುಬರೂವೆ ಕಾಡುಹರಟೆ ಬಿಟ್ಟು ಗಪ್ಪಾದರು ನೋಡಿ.
ಅವರೇ ತಾನೆ ಆಮೇಲೆ ಕತೆಯೊಳಗಿನ ಮಾರಾಜಾರಾದುದ್ದು?
ಆ ಗಾಳಿ, ಚಂಡಿ, ಅದೇ ತಾನೆ ಆಮೇಲೆ ದೇವ್ತೆಗಳ ಒಸ್ಗೆ ಪದ
ಅನ್ನಿಸ್ಕೊಂಡುದ್ದು? ಮತ್ತೆ, ಒಳಕ್ಕೆ ಆ ಥಂಡಿ ಜವುಗು ಒಸರ್ತಾ
ಚಾವ್ಣೀಲಿದ್ದ ಆ ತೂತು ಮರೆತ್ಹೋಗ್ಬಿಡ್ತು, ಅದರೊಳಗಿಂದ
ಇಣುಕುಹಾಕ್ತಿದ್ದ ಚುಕ್ಕೀ ಮನ್ಸಲ್ಲಿ ಉಳಕೊಂಡುಬಿಡ್ತು ಅಲ್ವೇ?
ಹಿಂಗೆಲ್ಲಾ ಆದುದ್ದು ಅವಳ ಆ ಮಗನ ಬದ್ಕು, ದರ್ಶ್ನದಿಂದ:
ಸೀದಾಸಾದಾ ಇದ್ದ ಅವನು, ತಿಳ್ನೀರ್ನಂಗೆ; ಹಾಡ್ಹಾಡ್ತಾಯಿರ್ತಿದ್ದ.
ಬಡಬಗ್ಗರನ್ನೆ ಇಟ್ಟುಕೊಳ್ತಿದ್ದ ತನ್ನ ಸುತ್ತಾ, ರಾಜಾ-ಮಾರಾಜು
ರ್ಜೊತೇನೂ ಸಲೀsಸಿರೋದು ರೂಢಿಮಾಡ್ಕೊಂಡಿದ್ದ. ಅಲ್ದೆ,
ರಾತ್ರೀಹೊತ್ತು, ತನ್ ತಲೇಮೇಲೆ, ಒಂದ್ಚುಕ್ಕೀ ಕಾಣ್ತಾ ಇದ್ದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.