ಬೀದರ್: ಈ ಬಾರಿಯ ಗಣೇಶ ಉತ್ಸವವು ವಿಘ್ನ ನಿವಾರಕನ ಆರಾಧನೆ ಜತೆಗೆ ಕೊರೊನಾ ಜಾಗೃತಿಗೂ ವೇದಿಕೆಯಾಗಿದೆ.
ನಗರದ ಅನೇಕ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಅಳವಡಿಸಿರುವ ಥರ್ಮೋಕಾಲ್ ಚಿತ್ರ, ಬ್ಯಾನರ್ ಹಾಗೂ ಫಲಕಗಳು ಸಾರ್ವಜನಿಕರಲ್ಲಿ ಕೊರೊನಾ ವೈರಾಣುವಿನ ಅರಿವು ಮೂಡಿಸುತ್ತಿವೆ. ಅಷ್ಟು ಮಾತ್ರವಲ್ಲದೆ, ಸುರಕ್ಷತಾ ನಿಯಮಗಳ ಪಾಲನೆಯ ಮಹತ್ವವನ್ನೂ ಮನವರಿಕೆ ಮಾಡಿಕೊಡುತ್ತಿವೆ.
ಶಿವನೊಂದಿಗೆ ಗಣಪ ಇರುವ ಮೂರ್ತಿ ಪ್ರತಿಷ್ಠಾಪಿಸಿರುವ ಎಲ್ಐಸಿ ಕಚೇರಿ ಸಮೀಪದ ಶಿವಸೇನಾ ಗಣೇಶ ಮಂಡಳಿಯು ಮಂಟಪದಲ್ಲಿ ಕೊರೊನಾ ಜಾಗೃತಿಯ ಥರ್ಮೋಕಾಲ್ ಚಿತ್ರಗಳನ್ನು ಅಳವಡಿಸಿ ಗಮನ ಸೆಳೆದಿದೆ.
ಥರ್ಮೋಕಾಲ್ನಲ್ಲಿ ಕೆತ್ತನೆ ಮಾಡಿ ಬಣ್ಣ ಬಳಿಯಲಾದ ಮಹಾಮಾರಿ ಕೊರೊನಾದ ರುದ್ರಸ್ವರೂಪ, ಮಾಸ್ಕ್ ಧರಿಸಿ ಬೆಡ್ ಮೇಲೆ ಮಲಗಿರುವ ರೋಗಿಯ ತಪಾಸಣೆ ನಡೆಸುತ್ತಿರುವ ಲಂಬೋದರ ಹಾಗೂ ಸ್ಯಾನಿಟೈಸರ್ ಬಾಟಲಿಯ ಚಿತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ.
ಇನ್ನು ಅನೇಕ ಗಣೇಶ ಮಂಡಳಗಳು ‘ನೋ ಮಾಸ್ಕ್ ನೋ ಎಂಟ್ರಿ’, ‘ಸಾಮಾಜಿಕ ಅಂತರ ಕಾಪಾಡಿ’ ಎನ್ನುವ ಫಲಕಗಳನ್ನು ಹಾಕಿವೆ. ಕೆಲ ಮಂಡಳಗಳು ಮಂಟಪ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಸಹ ಇಟ್ಟಿವೆ. ಸರ್ಕಾರದ ನಿಯಮಗಳನ್ನು ಪಾಲಿಸುತ್ತಿವೆ.
ಕೊರೊನಾ ಕರಾಳ ಛಾಯೆಯ ನಡುವೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ದೊರೆತರೂ ಹೆಚ್ಚಿನ ಸಂಭ್ರಮ ಕಂಡು
ಬರುತ್ತಿಲ್ಲ.
ಕೊರೊನಾ ಕಾರಣ ಮಂಟಪಗಳಿಗೆ ಭೇಟಿ ನೀಡಿ ಏಕದಂತನ ದರ್ಶನ ಪಡೆಯುವ ಭಕ್ತರ ಸಂಖ್ಯೆ ಕಡಿಮೆ ಇದೆ. ಗಣೇಶ ಮಹಾಮಂಡಳದ ಪ್ರಕಾರ ನಗರದಲ್ಲಿ 120 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.