ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಚೀನಿವಾಡದ ಬೇಗೂರು ಹೊಳೆ ದಂಡೆಯಲ್ಲಿ ಸೋಮವಾರ ಆನೆ ಮರಿ ಜನಿಸಿದ ಕೂಡಲೇ ಮೃತಪಟ್ಟಿದ್ದು, ತಾಯಿ ಆನೆ ಮರಿಯ ಕಳೇಬರವನ್ನು ಬಿಟ್ಟು ಹೋಗದೇ ಘೀಳಿಡುತ್ತಿದೆ.
ಒಂದು ದಿನ ಕಳೆದರೂ ಮರಿಯಾನೆಯ ಮೃತದೇಹ ಬಿಟ್ಟು ತೆರಳದೆ ಆಹಾರ ಸೇವಿಸದೇ ನಿಂತಿರುವ ತಾಯಿ ಆನೆಯನ್ನು ಓಡಿಸಲು ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ಆರ್ಟಿ)ಯು ಇನ್ನಿಲ್ಲದ ಕಸರತ್ತು ನಡೆಸಿದೆ. ಪಟಾಕಿ ಸಿಡಿಸಿ ತಾಯಿ ಆನೆಯನ್ನು ಓಡಿಸಲು ಯತ್ನಿಸಿದರೂ ಆನೆ ಜಗ್ಗುತ್ತಿಲ್ಲ. ಬದಲಿಗೆ ಸಿಬ್ಬಂದಿಯನ್ನು ಅಟ್ಟಾಡಿಸುತ್ತಿದೆ. ಈ ವೇಳೆ ತೇಜಸ್ (26) ಎಂಬ ಸಿಬ್ಬಂದಿ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊನ್ನಂಪೇಟೆಯ ಉಪ ವಲಯ ಅರಣ್ಯಾಧಿಕಾರಿ ದಿವಾಕರ್ ತಿಳಿಸಿದ್ದಾರೆ.
ತಾಯಿ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.