ADVERTISEMENT

ಮೇಲುಕೋಟೆ ಭಾಗದ ಕೆರೆಗಳಲ್ಲಿ ತುಂಬಿದ ಹೂಳು: ನೀರಿನ ಬವಣೆಯ ಆತಂಕ

ಮೇಲುಕೋಟೆ ಭಾಗದ ಕೆರೆಗಳಲ್ಲಿ ಕುಸಿದ ನೀರಿನ ಸಂಗ್ರಹ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 4:11 IST
Last Updated 20 ಸೆಪ್ಟೆಂಬರ್ 2021, 4:11 IST
ಮೇಲುಕೋಟೆಯ ದಳವಾಯಿಕೆರೆಯ ನೋಟ
ಮೇಲುಕೋಟೆಯ ದಳವಾಯಿಕೆರೆಯ ನೋಟ   

ಮೇಲುಕೋಟೆ: ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಕೆರೆಯಲ್ಲಿ ಹೂಳು ತುಂಬಿಕೊಂಡು ನೀರಿನ ಮಾರ್ಗವೂ ಮುಚ್ಚಿ ಹೋಗಿದೆ. ಇದರಿಂದಾಗಿ ಕೆರೆಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕುಸಿದಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ನೀರಿನ ಬವಣೆ ಕಾಡುವ ಆತಂಕ ಎದುರಾಗಿದೆ.

ಮಳೆಯಾಶ್ರಿತ ಪ್ರದೇಶವಾದ ಮೇಲುಕೋಟೆ ಮೇಲ್ಭಾಗದ ಹಳ್ಳಿಗಳ ಕೆರೆಗಳು ಮಳೆಗಾಲದಲ್ಲಿ ಮಾತ್ರ ತುಂಬಿರುತ್ತವೆ. ಉಳಿದ ಸಂದರ್ಭ ಬತ್ತಿಹೋಗಿ ರೈತರು ಸಂಕಷ್ಟ ಎದುರಿಸುತ್ತಾರೆ. ಇದಕ್ಕಾಗಿ ಈ ಭಾಗದ ಎಲ್ಲ ಕೆರೆಗಳನ್ನು ತುಂಬಿಸಿ ರೈತರ ಸಂಕಷ್ಟ ಪರಿಹರಿಸಲು ₹ 156 ಕೋಟಿ ವೆಚ್ಚದಲ್ಲಿ ಬಳಿಘಟ್ಟ ಏತ ನೀರಾವರಿ ಯೋಜನೆಯ ಪ್ರಥಮ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

ಮೇಲುಕೋಟೆ ಮಳೆಯಾಶ್ರಿತ ಪ್ರದೇಶದ ರೈತರು ಈ ಹಿಂದೆ ಕೆರೆ ಮತ್ತು ಕುಂಟೆಗಳ ನೀರು ಬಳಸಿ ದೊಡ್ಡಿಭತ್ತ, ರತ್ನಚೂರು, ದಡಿಗೆಶ್ರೀ, ಪುಟ್ಟಭತ್ತ ಮೊದಲಾದ ಸ್ಥಳೀಯ ತಳಿ, ತರಕಾರಿ ಬೆಳೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆ
ಯಾಗಿದ್ದು, ಕೆರೆಯಲ್ಲಿ ಹೂಳು ತುಂಬಿ ರೈತರುಗೆ ತೊಂದರೆ ಆಗಿದೆ.

ADVERTISEMENT

ಮೇಲುಕೋಟೆ ಹೋಬಳಿಯ ಕೆರೆಗಳು, ಜಿ.ಪಂ ಮತ್ತು ಹೇಮಾವತಿ ಜಲಾನಯನ ಯೋಜನೆ ಹಾಗೂ ಸಣ್ಣನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತವೆ.ಮೇಲುಕೋಟೆ ಕೆಳ ಭಾಗದ ಜಕ್ಕನಹಳ್ಳಿ ಸುತ್ತಮುತ್ತಲ ಹಳ್ಳಿಗಳ ಕೆರೆಗಳು ಹೇಮಾವತಿ ಜಲಾ ನಯನ ಯೋಜನೆ ವ್ಯಾಪ್ತಿಯಲ್ಲಿವೆ. ನ್ಯಾಮನಹಳ್ಳಿ, ಅಮೃತಿ, ಹಳೇಬೀಡು, ಮಾಣಿಕ್ಯನಹಳ್ಳಿ, ಸಂಗಾಪುರ, ಹಳ್ಳಿಗಳ 25ಕ್ಕೂ ಹೆಚ್ಚು ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ತುಂಬಿ ಸಲಾಗುತ್ತಿದೆ. ಇದರಿಂದ 755 ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಪಡೆದು ಅಂತರ್ಜಲವೂ ವೃದ್ಧಿಯಾಗಿ ಕೃಷಿಚಟುವಟಿಕೆಗೆ ಅನುಕೂಲವಿದೆ. ಮೇಲುಕೋಟೆ ಬೆಟ್ಟದ ಪಶ್ಚಿಮ ಭಾಗದ ತಳದಲ್ಲಿ ಇತಿಹಾಸ ಹೊಂದಿದ ದಳವಾಯಿಕೆರೆ ಹಾಗೂ ಕಣಿವೆಯ ಬಳಿ ಹೊಸಕೆರೆ ಇದೆ.

ದಳವಾಯಿಕೆರೆ 60 ಎಕರೆ ಅಚ್ಚುಕಟ್ಟುಪ್ರದೇಶ ಹೊಂದಿದ್ದರೆ, ಹೊಸಕೆರೆ 100 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ.

ಜೊತೆಗೆ ಮೇಲುಕೋಟೆ ಮೇಲ್ಭಾಗದ ನಾರಣಾಪುರ, ರಾಂಪುರ, ಕನಗೋನಹಳ್ಳಿ, ಚಲ್ಲರಹಳ್ಳಿಕೊಪ್ಪಲು, ಬಳಿಘಟ್ಟ, ಗೌರಿಕಟ್ಟೆ ಸೇರಿದಂತೆ ಸುತ್ತಲ ಹಳ್ಳಿಗಳಲ್ಲಿ ಮಳೆಯಾಶ್ರಿತವಾದ ಸುಮಾರು 25 ಕೆರೆಗಳು ಹಾಗೂ ಕಟ್ಟೆಗಳು ಇವೆ.

ಕೆರೆ ಪುನರುಜ್ಜೀವನಕ್ಕೆ ಯೋಜನೆ

ಮೇಲುಕೋಟೆ ಭಾಗದ ಮಳೆಯಾಶ್ರಿತ ಪ್ರದೇಶದ ಹಳ್ಳಿಗಳ ಉಪಯೋಗಕ್ಕೆಂದು ಸಣ್ಣನೀರಾವರಿ ಇಲಾಖೆಯಿಂದ ₹ 156 ಕೋಟಿ ವೆಚ್ಚದ ಬಳಿಘಟ್ಟ ಏತ ನೀರಾವರಿ ಯೋಜನೆ ಮಂಜೂರಾಗಿದೆ.3 ಹಂತದ ಈ ಬೃಹತ್ ಯೋಜನೆಯಲ್ಲಿ ಕಾವೇರಿ ನದಿಯಿಂದ ಪೈಪ್‌ಲೈನ್ ಮೂಲಕ ದಳವಾಯಿಕೆರೆ ಹಾಗೂ ಸುತ್ತಮುತ್ತಲ ಮೇಲ್ಭಾಗದ ಹಳ್ಳಿಗಳ 25ಕ್ಕೂ ಹೆಚ್ಚು ಕೆರೆಕಟ್ಟೆಗಳು ಹಾಗೂ ಹೊಸಕೆರೆಗೆ ಸೇರಿದಂತೆ 51 ಕೆರೆಗಳಿಗೆ ನೀರುತುಂಬಿಸುವ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

ಎರಡನೇ ಹಂತದಲ್ಲಿ ಕಣಿವೆ ಬಳಿಯಿರುವ ಹೊಸಕೆರೆಯ ಏರಿಯನ್ನು ಭಾರಿ ಪ್ರಮಾಣದಲ್ಲಿ ಎತ್ತರಿಸಿ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಹಾಲಿ ರಸ್ತೆ ಮುಳುಗಡೆಯಾಗಿ ಹೊಸರಸ್ತೆ ನಿರ್ಮಾಣದಲ್ಲಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಮೂರನೇ ಹಂತದಲ್ಲಿ ಮೇಲುಕೋಟೆಯಲ್ಲಿ 98 ಕಲ್ಯಾಣಿ ಕೊಳಗಳನ್ನು ಪತ್ತೆಮಾಡಲಾಗಿದ್ದು, ಎಲ್ಲ ಕೊಳ ಮತ್ತು ಕಲ್ಯಾಣಿಗಳನ್ನು ಜೀರ್ಣೋದ್ಧಾರ ಮಾಡಿ ನೀರು ತುಂಬಿಸುವ ಯೋಜನೆ ಅನುಷ್ಠಾನದಲ್ಲಿದೆ.

ಏತನೀರಾವರಿ ಯೋಜನೆ; ವಿವರ

ಬಳಿಘಟ್ಟ ಗ್ರಾ.ಪಂ.ವ್ಯಾಪ್ತಿಯ 24 ಕೆರೆ ತುಂಬಿಸಿ ನೀರಾವರಿ ಸೌಲಭ್ಯ ಕಲ್ಪಿಸುವುದು,ಹೊಸಕೆರೆ ಏರಿ ಭಾರಿ ಪ್ರಮಾಣದಲ್ಲಿ ಎತ್ತರಿಸುವುದು, ಮೇಲುಕೋಟೆಯ ಈಗಿರುವ ರಸ್ತೆ ಮುಳುಗಡೆ ಬಳಿಕ ಆಕರ್ಷಕ ವಿನ್ಯಾಸದ ರಸ್ತೆ ನಿರ್ಮಾಣ, ಹೊಸಕೆರೆ ಅಚ್ಚುಕಟ್ಟು ಪ್ರದೇಶ 1,000 ಎಕರೆಗೆ ವಿಸ್ತರಣೆ ಸೇರಿದಂತೆ ಎಲ್ಲ ಯೋಜನೆಗಳಿಗೆ ₹ 156 ಕೋಟಿ ವೆಚ್ಚದಏತನೀರಾವರಿ ಯೋಜನೆಯಾಗಿದೆ.

‘ನೀರಿನ ಅಭಾವ ನೀಗುವ ವಿಶ್ವಾಸ’

ಮೇಲುಕೋಟೆ ಭಾಗದ ರೈತರ ಸಮಸ್ಯೆ ಪರಿಹಾರಕ್ಕಾಗಿ ಬಳಿಘಟ್ಟ ಏತನೀರಾವರಿ ಯೋಜನೆ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ 52 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮುಕ್ತಾಯವಾಗಲಿದ್ದು, ಇದರಿಂದ 2,587 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದರಿಂದ ನೀರಿನ ಅಭಾವ ನೀಗಲಿದೆ ಎಂದು ಸಣ್ಣನೀರಾವರಿ ಇಲಾಖೆ ಎಇಇ ತಾರಕೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.