ADVERTISEMENT

ಜಂಬೂಸವಾರಿ: ಆನೆಗಳ ಬರ ಮಾಡಿಕೊಳ್ಳುತ್ತಿದ್ದ ಮೂರ್ಕಲ್‌ ಗಣಪನ ಗುಡಿ ಅನಾಥ

ವೀರನಹೊಸಹಳ್ಳಿಗೆ ಗಜಪಯಣ ಸ್ಥಳಾಂತರ l ಗಿರಿಜನರ ಪೂಜೆಯೂ ಅಂತ್ಯ

ಎಚ್.ಎಸ್.ಸಚ್ಚಿತ್
Published 14 ಸೆಪ್ಟೆಂಬರ್ 2021, 6:06 IST
Last Updated 14 ಸೆಪ್ಟೆಂಬರ್ 2021, 6:06 IST
ಮೈಸೂರು ದಸರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ನಾಗರಹೊಳೆ ಆನೆಗಳಿಗೆ ಗಿರಿಜನರು ಪೂಜೆ ಸಲ್ಲಿಸಿ ಬೀಳ್ಕೊಡುತ್ತಿದ್ದ ಮೂರ್ಕಲ್ ಅರಣ್ಯದಲ್ಲಿರುವ ಗಣೇಶನ ದೇವಸ್ಥಾನ (ಎಡಚಿತ್ರ) ದೇವಾಲಯದ ಗಣಪತಿ ಮೂರ್ತಿ
ಮೈಸೂರು ದಸರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ನಾಗರಹೊಳೆ ಆನೆಗಳಿಗೆ ಗಿರಿಜನರು ಪೂಜೆ ಸಲ್ಲಿಸಿ ಬೀಳ್ಕೊಡುತ್ತಿದ್ದ ಮೂರ್ಕಲ್ ಅರಣ್ಯದಲ್ಲಿರುವ ಗಣೇಶನ ದೇವಸ್ಥಾನ (ಎಡಚಿತ್ರ) ದೇವಾಲಯದ ಗಣಪತಿ ಮೂರ್ತಿ   

ಹುಣಸೂರು: ದಸರಾ ಸಲುವಾಗಿ ನಾಗರಹೊಳೆ ಅರಣ್ಯದಿಂದ ಆನೆ ಪಡೆಯನ್ನು ಸಾಂಪ್ರದಾಯಕವಾಗಿ ಬರ ಮಾಡಿಕೊಳ್ಳುವ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದ ಮೂರ್ಕಲ್‌ ಗಣಪನ ಗುಡಿ ಈಗ ಅನಾಥವಾಗಿದೆ.

ದಸರಾ ಸಮೀಪಿಸುತ್ತಿದ್ದಂತೆ ಅರಮನೆ ನಿಯೋಜಿಸಿದ ಸಿಬ್ಬಂದಿ ಮಾವುತ ಮತ್ತು ಕಾವಾಡಿಗಳಿಗೆ ಗೌರವಪೂರಕವಾಗಿ ತಾಂಬೂಲ ನೀಡಿ ಆಹ್ವಾನಿಸುವ ಸಂಪ್ರದಾಯವಿತ್ತು. ತಾಂಬೂಲ ಪಡೆದ ಗಿರಿಜನರು ಅರಮನೆಗೆ ಹೃದಯ ತುಂಬಿ ಸಮ್ಮತಿಸಿ ದಸರಾ ಮೇಳದಲ್ಲಿ ಪಾಲ್ಗೊಳುತ್ತಿದ್ದರು.

ಅರಮನೆಗೆ ಪ್ರಯಾಣ ಬೆಳೆಸುವ ಮುನ್ನ ಗಿರಿಜನರು ಕುಟುಂಬ ಸಮೇತರಾಗಿ ಗಜಪಡೆ ತಂಡದೊಂದಿಗೆ ನಾಗರಹೊಳೆ ಅರಣ್ಯದ ಮೂರ್ಕಲ್ ವಲಯದಲ್ಲಿರುವ ಶತಮಾನದ ಹಳೆಯ ಗಣಪತಿ ದೇವಸ್ಥಾನಕ್ಕೆ ಪೂಜೆ ಮಾಡುವ ಸಂಪ್ರದಾಯವಿತ್ತು.

ADVERTISEMENT

ಬದಲಾದ ಪರಿಸ್ಥಿತಿಯಲ್ಲಿ. ದಸರಾ ನಾಡ ಹಬ್ಬವಾಯಿತು. ಅರಮನೆ ಸಂಪ್ರದಾಯದಂತೆ ಆನೆ ಪಡೆಯನ್ನು ಆಹ್ವಾನಿಸುವ ಸಂಪ್ರದಾಯ ಬದಲಾವಣೆಯೊಂದಿಗೆ ಸರ್ಕಾರದ ಉಸ್ತುವಾರಿ ಯಲ್ಲಿ ಗಜಪಯಣ ಆರಂಭಕ್ಕೆ ನಾಂದಿ ಹಾಡಿತು. ಮೂರ್ಕಲ್ ಅರಣ್ಯದ ಗಣಪನ ದೇವಸ್ಥಾನದಲ್ಲಿ ಗಿರಿಜನರು ಕುಟುಂಬ ಸಮೇತರಾಗಿ ಸಲ್ಲಿಸುತ್ತಿದ್ದ ಸಾಂಪ್ರದಾಯಿಕ ಪೂಜೆಯೂ ಅಂತ್ಯಗೊಂಡಿತು.

ನಾಗರಹೊಳೆ ಹುಲಿ ಸಂರಕ್ಷಣೆ ಪ್ರದೇಶವಾದ ಹಿನ್ನೆಲೆಯಲ್ಲಿ ಕಾಡಿನೊಳಗೆ ಅನ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲದ್ದರಿಂದ ಗಜಪಯಣದ ಆರಂಭ ಬಿಂದು ಮೂರ್ಕಲ್‌ ನಿಂದ ವೀರನಹೊಸಹಳ್ಳಿ ವಲಯಕ್ಕೆ ವರ್ಗಾವಣೆಗೊಂಡಿತು. ಕಾಲ ಕ್ರಮೇಣ ಇಲಾಖೆ ನಿಯಮಗಳು ಗಟ್ಟಿಯಾಗುತ್ತಿದ್ದಂತೆ ವೀರನಹೊಸಹಳ್ಳಿಯಲ್ಲಿ ನಡೆಯುತ್ತಿದ್ದ ಗಜಪಯಣ ಈಗ ನಾಗರಹೊಳೆ ಅರಣ್ಯದಂಚಿನ ಮುಖ್ಯದ್ವಾರದ ಹೊರಭಾಗ ದಲ್ಲಿ ಆಚರಿಸಲು ಸೀಮಿತಗೊಂಡಿದೆ. ಮೂರ್ಕಲ್ ಗಣಪನಗುಡಿ ಅನಾಥವಾಗಿ ಪಾಳುಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.