ADVERTISEMENT

ಶಿವಮೊಗ್ಗ | ಕೃಷಿ ವಿವಿ ತಾಕುಗಳಲ್ಲಿ 250 ದೇಸಿ ಭತ್ತದ ತಳಿಗಳ ಸಂರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 20:15 IST
Last Updated 3 ಡಿಸೆಂಬರ್ 2019, 20:15 IST
ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ತಾಕುಗಳಲ್ಲಿ ಬೆಳೆದಿರುವ ದೇಸಿ ತಳಿಯ ಭತ್ತ.
ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ತಾಕುಗಳಲ್ಲಿ ಬೆಳೆದಿರುವ ದೇಸಿ ತಳಿಯ ಭತ್ತ.   

ಶಿವಮೊಗ್ಗ:ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಆವರಣದಲ್ಲಿರುವ ತಾಕುಗಳಲ್ಲಿವಿವಿಧ ರಾಜ್ಯಗಳ ಅಪರೂಪದ, ಅಳವಿನಂಚಿನಲ್ಲಿರುವ ಭತ್ತದ ತಳಿಗಳನ್ನು ಬೆಳೆಸಿ, ಸಂರಕ್ಷಿಸಲಾಗುತ್ತಿದೆ.

ಸಂಪೂರ್ಣ ಸಾವಯವ ಕೃಷಿ ಪದ್ಧತಿಯಲ್ಲೇ ಸುಮಾರು 6 ಎಕರೆಯಲ್ಲಿ 250 ದೇಸಿ ತಳಿಗಳ ಭತ್ತವನ್ನು ಬೆಳೆಯಲಾಗುತ್ತಿದ್ದು, ಆ ಮೂಲಕ ದೇಸಿ ತಳಿಗಳನ್ನು ರೈತರಿಗೆ ತಲುಪಿಸಲು ಯೋಜನೆ ಇದೆ.

ಕಲಾ ಬಾತಿ, ಕರಿ ಭತ್ತ, ಕಪ್ಪು ಬಣ್ಣದ ಅಕ್ಕಿಯ ಬರ್ಮಾ ಬ್ಲಾಕ್, ರೆಡಿ ಸಾಮಿನಿ,ಚಕಾವೋ ಪರೇಟ್, ಮಂಡಕ್ಕಿಗೆ ಬಳಸಬಲ್ಲ ಆನೆಕೊಂಬು, ಸುಗಂಧಯುಕ್ತ ರಾಜಮುಡಿ, ಗಂಧಸಾಲೆ, ಜೀರಿಗೆ ಸಣ್ಣ, ಚಿನ್ನಪೆನ್ನಿ, ಮೈಸೂರು ಮಲ್ಲಿಗೆ, ನೆರೆ ಹಾವಳಿಯಲ್ಲಿ ಬೆಳೆಯಬಲ್ಲ ನೆರೆಗುಳಿ ಭತ್ತ, ಮದ್ರಾಸ್ ಸಣ್ಣ, ಏಡಿ ಸಣ್ಣ, ಬಿಳಿ ಜಡ್ಡು, ಕರಿ ಜಡ್ಡು, ವೆಲ್ಚೂರಿ, ಮಧುಸಾಲೆ, ನಾರಿಕೇಳ, ಮೀಟರ್ ಭತ್ತ, ಬರರತ್ನಚೂಡಿ, ಅಕ್ತಿಕಾಯ, ಮೀಸೆ ಭತ್ತ, ಪೂಸಾ ಸುಗಂಧ, ಬಿಳಿ ಮುಂಡುಗ ಸೇರಿದಂತೆ ಇನ್ನೂ ಅನೇಕ ದೇಸಿ ಭತ್ತದ ತಳಿಗಳುಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ತಾಕುಗಳಲ್ಲಿಬೆಳೆಯಲಾಗುತ್ತಿದೆ.

ADVERTISEMENT

ಪ್ರಾಕೃತಿಕ ಭಿನ್ನತೆಯುಳ್ಳ ಪ್ರದೇಶಗಳಲ್ಲಿನ ಸ್ಥಳೀಯ ತಳಿಗಳನ್ನು ಸಂಗ್ರಹಿಸಿ ತಾಕುಗಳಲ್ಲಿ ಬೆಳೆಯಲಾಗುತ್ತಿದೆ. ಈಗ ಎಲ್ಲೆಡೆ ದೇಸಿ ತಳಿಗಳ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಸಾವಯವ ಬೆಳೆಗಳ ಬಗ್ಗೆ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ.

ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯವು ಹೊಸ ತಳಿಗಳ ಆವಿಷ್ಕಾರದೊಂದಿಗೆ ಸ್ಥಳೀಯ ಭತ್ತದ ತಳಿಗಳಿಗೂ ಒತ್ತು ನೀಡುತ್ತಿದೆ.ಹೊರ ಜಿಲ್ಲೆ, ರಾಜ್ಯಗಳಿಗೆ ತೆರಳಿ ಅಲ್ಲಿನ ಸ್ಥಳೀಯ ಭತ್ತದ ತಳಿಗಳನ್ನು ರೈತರಿಂದ ಸಂಗ್ರಹಿಸಿದೆ.

ಭತ್ತ ನಾಟಿಗೂ ಮೊದಲು ಎಕರೆಗೆ ನಾಲ್ಕು 4 ಟನ್ ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಹಾಕಲಾಗುತ್ತದೆ. ಬಳಿಕ ಮಾಗಿ ಉಳುಮೆ ಮಾಡಿ ಸೆಣಬಿನ ಬೀಜ ಬಿತ್ತಲಾಗುತ್ತದೆ. ಆ ಮೂಲಕ ಹಸಿರೆಲೆ ಗೊಬ್ಬರ ಭೂಮಿಗೆ ಸೇರುವಂತೆ ನೋಡಿಕೊಳ್ಳಲಾಗುತ್ತದೆ. ಭತ್ತದ ನಾಟಿ ನಂತರ ಎರಡು ಬಾರಿ ಜೀವಾಮೃತ ಹಾಗೂ ಒಂದು ಬಾರಿ ಪಂಚಗವ್ಯ ನೀಡಲಾಗುತ್ತದೆ.ಇವುಗಳಿಗೆ ಕೀಟ ಹಾಗೂ ರೋಗ ತಗುಲುವ ಸಾಧ್ಯತೆ ಕಡಿಮೆ. ಇವುಗಳಲ್ಲಿ ಔಷಧೀಯ ಗುಣವೂ ಇರುತ್ತದೆ. ಈ ಎಲ್ಲ ಕಾರಣಗಳಿಂದ ದೇಸಿ ತಳಿಗಳ ಉಳಿವಿಗೆ ವಿಶ್ವವಿದ್ಯಾಲಯ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.