ADVERTISEMENT

ಕೊಡಿಗೇನಹಳ್ಳಿ: ಅಂಬೇಡ್ಕರ್ ಪುತ್ಥಳಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 4:32 IST
Last Updated 7 ಸೆಪ್ಟೆಂಬರ್ 2021, 4:32 IST
ಕೊಡಿಗೇನಹಳ್ಳಿಯ ಎ.ಎನ್.ಆರ್. ಕಲ್ಯಾಣ ಮಂಟಪದಲ್ಲಿ ಭಾನುವಾರ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರಗತಿಪರ ಚಿಂತಕ ಡಾ.ನರಸಿಂಹಪ್ಪ ಕಾಳೇನಹಳ್ಳಿ ಮಾತನಾಡಿದರು
ಕೊಡಿಗೇನಹಳ್ಳಿಯ ಎ.ಎನ್.ಆರ್. ಕಲ್ಯಾಣ ಮಂಟಪದಲ್ಲಿ ಭಾನುವಾರ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರಗತಿಪರ ಚಿಂತಕ ಡಾ.ನರಸಿಂಹಪ್ಪ ಕಾಳೇನಹಳ್ಳಿ ಮಾತನಾಡಿದರು   

ಕೊಡಿಗೇನಹಳ್ಳಿ: ‘ಸಮಾಜದ ಎಲ್ಲಾ ವರ್ಗದ ಜನರು ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಫಲಾನುಭವಿಗಳಾಗಿದ್ದೇವೆ. ಹಾಗಾಗಿ, ಅಂತಹ ಮಹಾನ್ ವ್ಯಕ್ತಿಯ ಋಣ ತೀರಿಸುವ ಸೌಭಾಗ್ಯ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ’ ಎಂದು ಪ್ರಗತಿಪರ ಚಿಂತಕ ಡಾ.ನರಸಿಂಹಪ್ಪ ಕಾಳೇನಹಳ್ಳಿ ತಿಳಿಸಿದರು.

ಗ್ರಾಮದ ಎ.ಎನ್.ಆರ್. ಕಲ್ಯಾಣ ಮಂಟಪದಲ್ಲಿ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಾದವರಲ್ಲ. ಅವರ ಪುತ್ಥಳಿ ನಿರ್ಮಾಣಕ್ಕೆ ಹೋಬಳಿಯ ಜನರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಬೆಂಬಲಿಸಿ ಸಹಕರಿಸಬೇಕಾಗಿದೆ ಎಂದರು.

ADVERTISEMENT

ದಲಿತ ಮುಖಂಡ ತೆರಿಯೂರು ಜಿ. ನರಸಿಂಹಯ್ಯ ಮಾತನಾಡಿ, ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ವಿವಿಧ ದಲಿತ ಸಂಘಟನೆಗಳಿಂದ ಕಳೆದ 20 ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಪುತ್ಥಳಿ ನಿರ್ಮಾಣದ ಭಾಗ್ಯ ಕೂಡಿ ಬಂದಿರಲಿಲ್ಲ. ಇಂದು ಅಂತಹ ಭಾಗ್ಯ ಒದಗಿ ಬರುತ್ತಿರುವುದು ಸಂತೋಷದ ವಿಚಾರ. ಹಾಗಾಗಿ, ನಾವೆಲ್ಲ ವೈಯುಕ್ತಿಕ ಪ್ರತಿಷ್ಠೆ ಬಿಟ್ಟು ಪುತ್ಥಳಿ ಸ್ಥಾಪನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ವಿ. ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರಂತಹ ಮಹಾನ್ ಚೇತನವನ್ನು ವಿಶ್ವವೇ ಗೌರವಿಸಿ ಮಹಾಜ್ಞಾನಿ ಎಂದು ಕೊಂಡಾಡಿದೆ. ಹಾಗಾಗಿ, ಅಂತಹ ಮಹಾನ್ ವ್ಯಕ್ತಿಯ ಪುತ್ಥಳಿ ನಿರ್ಮಾಣಕ್ಕೆ ಸಮಾಜದ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ದಲಿತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಅಹಿಂದ ಮುಖಂಡರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.