ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಮರಗಳನ್ನೇಕೆ ಕಡಿಯಬೇಕು?
ಇದು ನಟಿ, ರಾಜಕಾರಣಿ ರಮ್ಯಾ ಅವರ ಪ್ರಶ್ನೆ. ಸದ್ಯ ನಟನೆ, ರಾಜಕಾರಣದಿಂದ ದೂರ ಉಳಿದಿರುವ ಅವರು ಇಂದು (ಸೋಮವಾರ) ಇನ್ಸ್ಟಾಗ್ರಾಂನಲ್ಲಿ ಇಂಥದ್ದೊಂದು ಪ್ರಶ್ನೆ ಮುಂದಿಟ್ಟುಕೊಂಡು ಸಹಿ ಸಂಗ್ರಹಕ್ಕೆ ಮನವಿ ಮಾಡಿದ್ದಾರೆ.
ಹೆಬ್ಬಾಳ-ನಾಗವಾರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆರಂಭವಾಗಿದೆ. ಇದರ ಅಡಿ ಯಲಹಂಕದ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ ಸಣ್ಣ ನೀರಾವರಿ ಇಲಾಖೆ ಮೂಲಕ ನಡೆಯುತ್ತಿದೆ. ಈಗ ಒಟ್ಟಾರೆ ಈ ಯೋಜನೆಗೆ 6 ಸಾವಿರಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ರಮ್ಯಾ ಕೂಡಾ ಧ್ವನಿಯೆತ್ತಿದ್ದಾರೆ. ಪ್ರತಿರೋಧದ ಬರಹವುಳ್ಳ ಪೋಸ್ಟರ್ನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು ಸಾವಿರಾರು ಮಂದಿ ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.