ADVERTISEMENT

ಬಿಜೆಪಿ ಕೋಮು ದ್ವೇಷವನ್ನು ಪ್ರಚೋದಿಸುತ್ತಿದೆ: ಟಿಆರ್‌ಎಸ್‌ ಮುಖಂಡ ಕೆ.ಟಿ.ರಾಮರಾವ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 14:09 IST
Last Updated 25 ನವೆಂಬರ್ 2020, 14:09 IST
ಕೆ.ಟಿ.ರಾಮರಾವ್‌
ಕೆ.ಟಿ.ರಾಮರಾವ್‌   

ಹೈದರಾಬಾದ್‌: ಸ್ಥಳೀಯ ವಿಚಾರಗಳ ಬಗ್ಗೆ ಮಾತನಾಡಲು ಬಿಜೆಪಿ ಮುಖಂಡರಿಗೆ ಇಷ್ಟವಿಲ್ಲ. ಆದ್ದರಿಂದ, ಅವರು ಕೋಮು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್‌ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, 'ಸ್ಥಳೀಯ ವಿಚಾರಗಳ ಬಗ್ಗೆ ಮಾತನಾಡಲು ಬಿಜೆಪಿ ಮುಖಂಡರಿಗೆ ಇಷ್ಟವಿಲ್ಲ. ಆದ್ದರಿಂದ, ಅವರು ಕೋಮು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಅಕ್ಬರ್, ಬಾಬರ್ ಮತ್ತು ಲಾಡೆನ್ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಅಕ್ಬರ್, ಬಾಬರ್ ಮತ್ತು ಲಾಡೆನ್‌ಗಳು ಹೈದರಾಬಾದ್‌ನ ಮತದಾರರಲ್ಲ. ಬಿಜೆಪಿ ಅವರ ಬಗ್ಗೆ ಏಕೆ ಮಾತನಾಡುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದು ಹೇಳಿದ್ದಾರೆ.

'ಇದೊಂದು ಗಲ್ಲಿಯ ಚುನಾವಣೆ ಎಂಬುದನ್ನು ಬಿಜೆಪಿಯವರು ಮರೆತಿದ್ದಾರೆ. ಹೈದರಾಬಾದ್‌ಗೆ ದೆಹಲಿಯಿಂದ ನಾಯಕರು ಬರುತ್ತಿದ್ದಾರೆ. ಅಂತರರಾಷ್ಟ್ರೀಯ ನಾಯಕರು ಕೂಡ ಬರಬಹುದು. ಆದರೆ, ನಮಗೆ ಕೇವಲ ಹೈದರಾಬಾದ್‌ ಜನರ ಆಶೀರ್ವಾದ ಬೇಕಿದೆ' ಎಂದು ಕೆಟಿಆರ್‌ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರನ್ನು ಪಾಕಿಸ್ತಾನದ ಖೈದ್-ಎ-ಅಜಮ್ ಮುಹಮ್ಮದ್ ಅಲಿ ಜಿನ್ನಾ ಅವರ ಹೊಸ 'ಅವತಾರ' ಎಂದು ಕರೆದಿದ್ದರು.

ADVERTISEMENT

ಟಿಆರ್‌ಎಸ್ ಮತ್ತು ಎಐಎಂಐಎಂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಹೈದರಾಬಾದ್ ಅನ್ನು ಇಸ್ತಾಂಬುಲ್ ಆಗಿ ಪರಿವರ್ತಿಸಲು ಕೆಸಿಆರ್ ಬಯಸಿದ್ದಾರೆ. ಭಾರತದ ಹೈದರಾಬಾದ್ ಪಾಕಿಸ್ತಾನದ ಹೈದರಾಬಾದ್‌ನಂತೆ ಕಾಣಬೇಕೆಂದು ಎಂಐಎಂ ಬಯಸಿದೆ. ನಾವು ಹೈದರಾಬಾದ್ ಅನ್ನು ಭಾಗ್ಯನಗರವನ್ನಾಗಿ ಮಾಡುತ್ತೇವೆ ಆದರೆ ಇಸ್ತಾಂಬುಲ್ ಆಗಿ ಅಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ಹೈದರಾಬಾದಿನಲ್ಲಿ ಬಿಜೆಪಿಯವರು ಮೇಯರ್ ಆದರೆ ಅಕ್ರಮ ವಲಸಿಗರನ್ನು ಹೊರ ಹಾಕಲಾಗುವುದು. ಹಾಗೇ ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಕೊನೆಗಾಣಿಸಲಾಗುವುದು ಎಂದು ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಬಂಡಿ ಸಂಜಯ್‌ ಹೇಳಿದ್ದರು.

ಡಿಸೆಂಬರ್‌ 1ರಂದು ಹೈದರಾಬಾದ್‌ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.