ನವದೆಹಲಿ: ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರು ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಹೋದ ಮಾರ್ಚ್ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್ನ ಅರ್ಹತಾ ಟೂರ್ನಿಯ ಸಂದರ್ಭದಲ್ಲಿ ಪಂದ್ಯಗಳನ್ನು ಫಿಕ್ಸ್ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದರು. ಆದ್ದರಿಂದಲೇ ಒಲಿಂಪಿಕ್ ಕೂಟದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯಗಳು ನಡೆದ ಸಂದರ್ಭದಲ್ಲಿ ಅವರನ್ನು ತಾವು ದೂರ ಇಟ್ಟಿದ್ದಾಗಿ ಮಣಿಕಾ ಹೇಳಿದ್ದಾರೆ.
ಜುಲೈ–ಆಗಸ್ಟ್ನಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ತಮ್ಮ ಪಂದ್ಯಗಳನ್ನು ಆಡುವ ಸಂದರ್ಭದಲ್ಲಿ ಕೋಚ್ ನೆರವನ್ನು ಮಣಿಕಾ ನಿರಾಕರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಭಾರತ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್ಐ) ಮಣಿಕಾ ಅವರಿಗೆ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಿತ್ತು. ವಿಚಾರಣೆಯ ಸಂದರ್ಭದಲ್ಲಿ ಮಣಿಕಾ ಈ ಆರೋಪ ಮಾಡಿದ್ದಾರೆಂದು ಫೆಡರೇಷನ್ ಮೂಲಗಳು ತಿಳಿಸಿವೆ.
‘ದೋಹಾದಲ್ಲಿ ಮಾರ್ಚ್ ನಲ್ಲಿ ನಡೆದಿದ್ದ ಅರ್ಹತಾ ಟೂರ್ನಿಯಲ್ಲಿ ಸೌಮ್ಯದೀಪ್ ಅವರು ತಮ್ಮ ವಿದ್ಯಾರ್ಥಿನಿಗೆ ಅರ್ಹತೆ ಸಿಗುವಂತೆ ಮಾಡಲು ನಾನು ಪಂದ್ಯದಲ್ಲಿ ಸೋಲಬೇಕು. ಅದಕ್ಕಾಗಿ ಫಿಕ್ಸಿಂಗ್ ಮಾಡಿಕೊಳ್ಳಬೇಕು ಎಂದು ಒತ್ತಡ ಹಾಕಿದ್ದರು. ಆದರೆ ನಾನು ಅದಕ್ಕೆ ಸೊಪ್ಪು ಹಾಕಿರಲಿಲ್ಲ’ ಎಂದು ಮಣಿಕಾ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆಗಾಗಿ ಕೋಚ್ ಸೌಮ್ಯದೀಪ್ ರಾಯ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆಗೆ ಲಭ್ಯರಾಗಲಿಲ್ಲ.
ಒಲಿಂಪಿಕ್ಸ್ನಲ್ಲಿ ಆಡಿದ್ದ ಮಣಿಕಾ ಮತ್ತು ಸುತೀರ್ಥ ಮುಖರ್ಜಿ ಅವರು ರಾಯ್ ಅವರಿಂದ ತರಬೇತಿ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.