ಬೆಂಗಳೂರು: ಸುಲಭ ಜಯ ಸಂಪಾದಿಸಿದ ಅಗ್ರಶ್ರೇಯಾಂಕದ ಆಟಗಾರರು ಎಐಟಿಎ 12 ವರ್ಷದೊಳಗೊನವರ ಟೆನಿಸ್ ಟೂರ್ನಿಯಲ್ಲಿ ಪ್ರೀಕ್ವಾರ್ಟರ್ಫೈನಲ್ಗೆ ಮುನ್ನಡೆದರು.
ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಳದಲ್ಲಿ ಸೋಮವಾರ ಆರಂಭವಾದ ಟೂರ್ನಿಯ ಬಾಲಕರ ವಿಭಾಗದಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಕರ್ನಾಟಕದ ರುಹಾನ್ ಕೋಮಂದೂರ್ 8–6ರಿಂದ ಶ್ರೇಯಾಂಕ್ ಮಂಜುನಾಥ್ ಎದುರು ಗೆದ್ದರು. ಬಾಲಕಿಯರ ವಿಭಾಗದಲ್ಲಿ ಅಹಿದಾ ಸಿಂಗ್ ಇಷ್ಟೇ ಅಂತರದಿಂದ ತಮಿಳುನಾಡಿನ ಬಾನು ಜ್ಞಾನ ಅಶ್ವಿನ್ ಅವರನ್ನು ಮಣಿಸಿದರು. ಟೂರ್ನಿಯಲ್ಲಿ ಕರ್ನಾಟಕದ ಅಹಿದಾಗೆ ಅಗ್ರಶ್ರೇಯಾಂಕದ ನೀಡಲಾಗಿದೆ.
ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಶ್ರೀಅಕ್ಷಾ ಪೆನುಮೆಸ್ತಾ 8–7 (6) ರಿಂದ ಕೃತಿಕಾ ರಾಮಮೂರ್ತಿ ಅವರನ್ನು ಪರಾಭವಗೊಳಿಸಿದರು. ದೀರ್ಘ ರ್ಯಾಲಿಗಳಿಗೆ ಸಾಕ್ಷಿಯಾದ 15 ಗೇಮ್ಗಳ ಈ ಪಂದ್ಯವು ಒಂದು ತಾಸು 27 ನಿಮಿಷಗಳವರೆಗೆ ನಡೆಯಿತು.
ಮೊದಲ ಸುತ್ತಿನಬಾಲಕರ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಆರುಷ್ ಮಾಳನ್ನವರ 8–0ಯಿಂದ ಅರ್ನವ್ ರಾಜೇಂದ್ರ ಎದುರು, ಪ್ರದೀಪ್ ಹೊಳ್ಳ 8–3ರಿಂದ ಧನ್ವಿನ್ ವೆಂಕಟೇಶ್ ಕುಮಾರನ್ ವಿರುದ್ಧ, ಅರ್ಜುನ್ ಮಣಿಕಂಠನ್ 8–4ರಿಂದ ಅರ್ಜುನ್ ಸೂರಿ ಎದುರು, ಅನಿರುದ್ಧ ಪಳನಿಸ್ವಾಮಿ 8–1ರಿಂದ ಶಿವೇನ್ ಲೋಹಿತ್ ಎದುರು ಗೆದ್ದು ಬೀಗಿದರು.
ಬಾಲಕಿಯರ ವಿಭಾಗದ ಇನ್ನುಳಿದ ಹಣಾಹಣಿಗಳಲ್ಲಿ ದೇಶ್ನಾ ಭಟ್ಟಾಚಾರ್ಯ 8–3ರಿಂದ ತನಿಶಾ ಮಹಿಪಾತ್ರ ಎದುರು, ಇಂದೂಷಾ ನಿಮಾಕಾಯಲ 8–4ರಿಂದ ಸಾನ್ವಿ ನಾಯಕ್ ಎದುರು, ಮನ್ವಿತಾ ರಾಜೇಂದ್ರ 8–4ರಿಂದ ಆಧ್ಯಾ ಚೌರಾಸಿಯಾ ವಿರುದ್ಧ ಜಯ ಸಾಧಿಸಿ ಎರಡನೇ ಸುತ್ತಿಗೆ ತಲುಪಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.