ಪ್ರಶ್ನೆ : ನಮ್ಮ ಪ್ರದೇಶದಲ್ಲಿ ಮುಂಗಾರಿನ ಮಳೆ ಬಹಳ ಬೇಗ ಬರುತ್ತದೆ. ಈಗ ಯಾವ ವೇಳೆಯಲ್ಲಾದರೂ ಬರಬಹುದು. ಬಿದ್ದ ತಕ್ಷಣ ಎಳ್ಳು ಬಿತ್ತಬಹುದೇ, ಇದರ ಸುಧಾರಿತ ತಳಿ ಇದೆಯೆ ಮುಂತಾದ ವಿಷಯಗಳನ್ನು ತಿಳಿಸಿ.
- ಸಣ್ಣ ಕೆಂಪೇಗೌಡ, ಪಿರಿಯಾಪಟ್ಟಣ
ಉತ್ತರ : ನಿಮ್ಮದು ಒಳ್ಳೆಯ ಆಲೋಚನೆ. ಖುಷ್ಕಿ ಪ್ರದೇಶದ ಪ್ರಮುಖ ಎಣ್ಣೆ ಕಾಳಿನ ಬೆಳೆಗಳಲ್ಲಿ ಎಳ್ಳು ಒಂದು. ಇದನ್ನು ಅನೇಕ ವಿಧದ ಮಣ್ಣಿನಲ್ಲಿ ಬೆಳೆಯಬಹುದು. ನಿಮ್ಮ ಪ್ರದೇಶ ಸೂಕ್ತವಾಗಿದೆ. ಇದಕ್ಕೆ ಸಾಕಷ್ಟು ಬೇಡಿಕೆಯೂ ಇದೆ. ಅಲ್ಪಾವಧಿಯಲ್ಲಿ ಬರುತ್ತದೆ. ಬೇಸಾಯ ಕಡಿಮೆ. ಸಸ್ಯ ಸಂರಕ್ಷಣೆ ಇಲ್ಲ. ಹೀಗಾಗಿ ಲಾಭದಾಯಕ ಬೆಳೆ.
ಸ್ಥಳೀಯ ತಳಿಗಿಂತ ಇತ್ತೀಚೆಗೆ ಬಿಡುಗಡೆಯಾಗಿರುವ ಟಿ.ಎಂ.ವಿ-3, ನವಲೆ-1, ಟಿ-7 ಇವುಗಳನ್ನು ಬೆಳೆಯಿರಿ. ಏಪ್ರಿಲ್- ಮೇ ವರೆಗೂ ಇದರ ಬಿತ್ತನೆ ಮಾಡಬಹುದು.
ಸಾಮಾನ್ಯವಾಗಿ ಈ ಬೆಳೆಗೆ ನಮ್ಮಲ್ಲಿ ಗೊಬ್ಬರ ಕೊಡುವುದಿಲ್ಲ. ಎರಡು ಟನ್ ಸಾವಯವ ಗೊಬ್ಬರ, 15 ಕಿಲೊ ಸಾರಜನಕ, 10 ಕಿಲೊ ರಂಜಕ, 10 ಕಿಲೊ ಪೋಟ್ಯಾಷ್ನ್ನು ಒಂದು ಎಕರೆಗೆ ಕೊಡಿ. 2- 2.5 ಕಿಲೊ ಕಿಲೋಗ್ರಾಂ ಬಿತ್ತನೆ ಬೀಜ ಬಳಸಿ. ಉತ್ತಮವಾದ ಇಳುವರಿ ಪಡೆಯಲು ಸಾಧ್ಯವಿದೆ.
ಪೂರ್ಣ ಬೆಳೆಯಾಗಿ ಸಾಧ್ಯವಿಲ್ಲದಿದ್ದಾಗ ಅಕ್ಕಡಿಯಾಗಿಯೂ ಬೆಳೆಯಬಹುದು. ಸುಮಾರು 80 ರಿಂದ 95 ದಿವಸಗಳಲ್ಲಿ ಕಟಾವಿಗೆ ಬರುತ್ತದೆ. ಉತ್ತಮ ಬಿತ್ತನೆ, ಸರಿಯಾದ ಬೀಜ ಬಹಳ ಮುಖ್ಯ. ಖುಷ್ಕಿಯಲ್ಲಿ ಈ ಬೆಳೆಯ ನಂತರ ಇನ್ನೊಂದು ಬೆಳೆಯನ್ನು ಕೂಡ ಬೆಳೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.