ADVERTISEMENT

ದೇಸೀ ಕೃಷಿ ‘ಬೀಜ ಜಾತ್ರೆ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಕೃಷಿ ಕ್ಷೇತ್ರದ ಅಗಾಧ ‘ಬೀಜ ವೈವಿಧ್ಯ’  ಪ್ರತಿಬಿಂಬಿಸುವ ‘ಬೀಜ ಜಾತ್ರೆ’ ಬೆಂಗಳೂರಿನಲ್ಲಿ ಇದೇ 28 ಹಾಗೂ 29ರಂದು ನಡೆಯಲಿದೆ. ವಿವಿಧ ರಾಜ್ಯಗಳ ರೈತರು ತಮ್ಮ ನಾಡಿನ ದೇಸೀ ತಳಿಯನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ. ಕೃಷಿಯ ಜೀವಾಳವೇ ಬೀಜ. ಅಗಾಧ ಪ್ರಮಾಣದ ಬೀಜ ವೈವಿಧ್ಯವನ್ನು ರೈತ ಸಮುದಾಯ ನೂರಾರು ವರ್ಷಗಳಿಂದ ಉಳಿಸಿ- ಬೆಳೆಸಿಕೊಂಡು ಬರುತ್ತಿದೆ.

ಬೀಜ ಸಂರಕ್ಷಣೆಗೆಂದೇ ಹಲವಾರು ದೇಶಿ ವಿಧಾನಗಳು ರೂಪುಗೊಂಡಿವೆ. ಇಂಥ ಅಮೂಲ್ಯ ಬೀಜ ಸಂಪತ್ತಿಗೆ ಇಂದು ಧಕ್ಕೆಯೊದಗಿದೆ. ಈ ಹಿನ್ನೆಲೆಯಲ್ಲಿ, ‘ಸುಸ್ಥಿರ ಹಾಗೂ ಸಮಗ್ರ ಕೃಷಿ ಮೈತ್ರಿಕೂಟ’ದ ನೆರವಿನೊಂದಿಗೆ ‘ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ’ವು, 28 ಹಾಗೂ 29ರಂದು ‘ಬೀಜ ಜಾತ್ರೆ’ಯನ್ನು ಆಯೋಜಿಸಿದೆ.

ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿರುವ ಕನ್ನಡ ಸಭಾಂಗಣದಲ್ಲಿ ನಡೆಯುವ ಕಾಯರ್ಕ್ರಮದಲ್ಲಿ ಬೀಜ ಸಂರಕ್ಷಣೆ ಹಾಗೂ ಜೀವ ವೈವಿಧ್ಯಕ್ಕಾಗಿ ಶ್ರಮಿಸುತ್ತಿರುವ ದೇಶದ 13 ರಾಜ್ಯಗಳ 40 ರೈತ ಸಂಘಟನೆಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಬೀಜ ಸಂರಕ್ಷರು, ರೈತ ವಿಜ್ಞಾನಿಗಳು, ಕೃಷಿ ಆಸಕ್ತರು, ಗ್ರಾಹಕರು, ವಿಜ್ಞಾನಿಗಳು ಒಂದೇ ವೇದಿಕೆಯಲ್ಲಿ ಸೇರಿ, ಬೀಜ ವೈವಿಧ್ಯ ಕುರಿತು ಚರ್ಚಿಸಲಿದ್ದಾರೆ.

ಒಂದೂವರೆ ಸಾವಿರಕ್ಕೂ ಹೆಚ್ಚು ನಾಡ ತಳಿ ಬೀಜಗಳ ಪ್ರದರ್ಶನ, ಸಾವಯವ ತಿಂಡಿ- ತಿನಿಸುಗಳು, ತರಹೇವಾರಿ ಕಾಡು ಹಣ್ಣುಗಳು, ಕೈತೋಟದಲ್ಲಿ ಬಿತ್ತಲು ಸಾವಯವ ಬೀಜಗಳು, ಬುಡಕಟ್ಟು ಜನರ ಸಾಂಪ್ರದಾಯಿಕ ನೃತ್ಯ ಪ್ರದರ್ಶನ, ಬೀಜದ ಹಾಡು ಮತ್ತು ಸಂಸ್ಕೃತಿ ಇಲ್ಲಿ ಅನಾವರಣಗೊಳ್ಳಲಿದೆ. ಇದರೊಂದಿಗೆ ಬೀಜ ಸಂರಕ್ಷಣೆ ಕುರಿತ ಸಂವಾದ, ಚರ್ಚೆ, ಸಿನಿಮಾ ಪ್ರದರ್ಶನ, ಪುಸ್ತಕಗಳ ಮಾರಾಟವೂ ಇದೆ.
ಮಾಹಿತಿಗೆ: 97312 75656 ಅಥವಾ 080 23655302.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.