ADVERTISEMENT

ಆಕರ್ಷಣೆ ಹೆಚ್ಚಿಸಿಕೊಂಡ ಸಿರಿಧಾನ್ಯ, ಸಾವಯವ

ಕಾಲಿಡಲೂ ಜಾಗವಿಲ್ಲದಷ್ಟು ಜನದಟ್ಟಣೆ; ಗಮನ ಸೆಳೆದ ಬಗೆಬಗೆ ಆಹಾರ ಪದಾರ್ಥಗಳು

ಕಲಾವತಿ ಬೈಚಬಾಳ
Published 20 ಸೆಪ್ಟೆಂಬರ್ 2022, 4:58 IST
Last Updated 20 ಸೆಪ್ಟೆಂಬರ್ 2022, 4:58 IST
ಸಿರಿಧಾನ್ಯಗಳಿಂದ ತಯಾರಾದ ಆಹಾರೋತ್ಪನ್ನಗಳು
ಸಿರಿಧಾನ್ಯಗಳಿಂದ ತಯಾರಾದ ಆಹಾರೋತ್ಪನ್ನಗಳು   

ಧಾರವಾಡ: ಮಕ್ಕಳಿಗೆ ಎಂಥ ಆಹಾರ ಕೊಡಬೇಕು, ಸಕ್ಕರೆ ಕಾಯಿಲೆ ಇರುವವರು ಯಾವ ಸಿರಿಧಾನ್ಯಗಳನ್ನು ಸೇವಿಸಬೇಕು?, ಸಿರಿಧಾನ್ಯಗಳ ಆಹಾರೋತ್ಪಾದನೆ ಉದ್ಯಮ ಪ್ರಾರಂಭಿಸುವ ಇಚ್ಛೆ ಇದೆ, ತರಬೇತಿ ಎಲ್ಲಿ ಸಿಗುತ್ತದೆ...?

ಜನರು ತಮ್ಮ ಇಂಥ ಹಲವು ಪ್ರಶ್ನೆಗಳಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಸಿರಿಧಾನ್ಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಳಿಗೆಯಲ್ಲಿ ಉತ್ತರ ಪಡೆದರು.

ಕಾಲಿಡಲೂ ಜಾಗವಿಲ್ಲದಷ್ಟು ಜನದಟ್ಟಣೆ ಅಲ್ಲಿತ್ತು. ಇಂಥದ್ದರ ನಡುವೆಯೇ ಜನರು ಸಿರಿಧಾನ್ಯ ಮಳಿಗೆಗಳಲ್ಲಿ ಮುಗಿಬಿದ್ದು ಮಾಹಿತಿ ಪಡೆದದ್ದು ಸೋಮವಾರ ಕಂಡು ಬಂತು.

ADVERTISEMENT

ಬಗೆಬಗೆ ತಿಂಡಿ, ತಿನಿಸುಗಳು: ನವಣೆ, ರಾಗಿ, ಕೊರ್ಲು, ಸಜ್ಜೆ, ಊದ್ಲು, ಸಾಮೆ, ಅರ್ಕಗಳಿಂದ ಮಾಡಿದ ಕುಕ್ಕೀಸ್‌, ಕೇಕ್‌, ದೋಸೆ, ಪಾಯಸ್‌ ಮಿಕ್ಸ್‌, ಪಾಸ್ತಾ, ಚಾಕೋಲೆಟ್‌, ಜೆಲ್ಲಿ, ಚಕ್ಕಲಿ, ಕೋಡುಬಳೆ ಸೇರಿದಂತೆ ಅಂದಾಜು 50 ಬಗೆಯ ಆಹಾರೋತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿತ್ತು.ಬಿ.ಟೆಕ್‌ ಆಹಾರ ಮತ್ತು ತಂತ್ರಜ್ಞಾನ ಕಾಲೇಜು, ಫುಡ್‌ ಆ್ಯಂಡ್‌ ನ್ಯೂಟ್ರಿಷಿಯನ್‌ ವಿಭಾಗ, ಕಾಲೇಜ್‌ ಆಫ್‌ ಕಮ್ಯುನಿಟಿ ಸೈನ್ಸ್‌ನಿಂದ ಇವುಗಳನ್ನು ತಯಾರಿಸಲಾಗಿದೆ.

ಸಾವಯುವ ಆಹಾರೋತ್ಪಾದನಾ ಮಳಿಗೆ, ಹಾಗೂ ಸಿರಿಧಾನ್ಯಗಳ ಕೆಲವು ಆಹಾರ ಮಳಿಗೆಗಳಲ್ಲಿ ಮಾರಾಟ ಸಹ ಇತ್ತು. ಸುಲಭವಾಗಿ ಮಾಡಬಲ್ಲ ಪೇರಲ, ಬೀಟ್‌ರೂಟ್‌ಪಾನೀಯಗಳು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ರೊಟ್ಟಿ, ಹಿಟ್ಟು ಬಿಕರಿಯಾದವು.

ಸ್ವಯಂ ಉದ್ಯೋಗಕ್ಕೆ ನೆರವು: ‘ವಿವಿಯ ಯುಎಎಸ್‌ ಕ್ಯಾಂಪಸ್‌ ಆವರಣದಲ್ಲಿ ಸಿರಿಧಾನ್ಯ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕವಿದ್ದು,ಆಸಕ್ತರಿಗೆ 1,3,7 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ.ನೂರಾರು ಜನ ಈಗಾಗಲೇ ತರಬೇತಿ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ’ ಎಂದು ಕಾಲೇಜ್‌ ಆಫ್‌ ಕಮ್ಯುನಿಟಿ ಸೈನ್ಸ್‌ನ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ತಿಳಿಸಿದರು.

ಮಕ್ಕಳಿಗೆ ಚಿಕ್ಕಂದಿನಿಂದಲೇ ಸಿರಿಧಾನ್ಯಗಳನ್ನು ತಿಸಿಸುವುದನ್ನು ರೂಢಿ ಮಾಡಬೇಕು ಎನ್ನುವ ಉದ್ದೇಶದಿಂದ ಈ ಮಳಿಗೆಗಳಿಗೆ ಭೇಟಿ ನೀಡಿದೆ. ಹಲವು ಬಗೆಯ ಆಹಾರಗಳನ್ನು ಮನೆಯಲ್ಲೇ ತಯಾರಿಸುವ ಬಗ್ಗೆಯೂ ಮಾಹಿತಿ ಪಡೆದೆ.
-ಮಹಾಂತೇಶ್ವರಿ ಇಳಕಲ್‌, ಕೃಷಿ ಮೇಳಕ್ಕೆ ಭೇಟಿನೀಡಿದ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.