ADVERTISEMENT

‘ಬೆಂಬಲ ಬೆಲೆ’ಯಲ್ಲಿ ಕಡಲೆ ಖರೀದಿ ಆರಂಭ: ಕ್ವಿಂಟಲ್‌ಗೆ ₹ 4,875 ದರ ನಿಗದಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 15:37 IST
Last Updated 18 ಫೆಬ್ರುವರಿ 2020, 15:37 IST

ಬೆಳಗಾವಿ: ‘ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ಕಡಲೆ ಕಾಳು ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

‘ಅಥಣಿ ತಾಲ್ಲೂಕಿನ ಅಥಣಿ, ತೆಲಸಂಗ ಮತ್ತು ಕನ್ನಾಳ, ಗೋಕಾಕ, ರಾಮದುರ್ಗ ತಾಲ್ಲೂಕಿನ ರಾಮದುರ್ಗ ಮತ್ತು ಹುಲಕುಂದ, ಸವದತ್ತಿ ತಾಲ್ಲೂಕಿನ ಸವದತ್ತಿ ಮತ್ತು ಮುರಗೋಡ, ಬೈಲಹೊಂಗಲ ತಾಲ್ಲೂಕಿನ ಬೈಲಹೊಂಗಲ ಮತ್ತು ದೊಡವಾಡದಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಯನ್ನು ಕ್ವಿಂಟಲ್‌ಗೆ ₹ 4,875 ದರದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿಸಲಿದೆ. ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಲ್ ಖರೀದಿ ಮಿತಿ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಕೇಂದ್ರದಲ್ಲಿ ಕಡಲೆ ಮಾರಲು ಬಯಸುವ ರೈತರು ಗುರುತಿನ ಚೀಟಿ, ಪಹಣಿ ಪ್ರತಿ, ಕಡಲೆ ಬೆಳೆದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯಿಂದ ಪಡೆದ ಪ್ರಮಾಣಪತ್ರ ಮತ್ತು ಐ.ಎಫ್.ಎಸ್.ಸಿ. ಕೋಡ್ ಇರುವ ಹಾಗೂ ಆಧಾರ್‌ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಂದು ನೋಂದಣಿ ಮಾಡಿಕೊಳ್ಳಬೇಕು. 50 ಕೆ.ಜಿ. ಚೀಲಗಳಲ್ಲೇ ಕಡಲೆ ತರಬೇಕು. ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

‘ರೈತರನ್ನು ಹೊರತುಪಡಿಸಿ ಮಧ್ಯವರ್ತಿಗಳು ಅಥವಾ ವರ್ತಕರು ಖರೀದಿ ಕೇಂದ್ರಕ್ಕೆ ಕಡಲೆಯನ್ನು ಮಾರಲು ತಂದಿದ್ದು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಆಸಕ್ತರು ಹೆಚ್ಚಿನ ಮಾಹಿತಿಗೆ ಅಥಣಿ ಶಾಖೆ ವ್ಯವಸ್ಥಾಪಕ ಮೊ:9449864471, ಗೋಕಾಕ ಶಾಖಾ ವ್ಯವಸ್ಥಾಪಕ ಮೊ:9449864466, ಬೆಳಗಾವಿ ವ್ಯವಸ್ಥಾಪಕರ ಮೊ: 9449864445 ಸಂಪರ್ಕಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.