ಹುಬ್ಬಳ್ಳಿ: ಕೃಷಿ ಚಟುವಟಿಕೆಯಲ್ಲಿ ಬೀಜ ಬಿತ್ತನೆ ಹಾಗೂ ಗೊಬ್ಬರ ಹಾಕುವ ಕೆಲಸವನ್ನು ಪ್ರತ್ಯೇಕವಾಗಿ ಮಾಡಲು, ರೈತರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಆದರೆ, ಎರಡನ್ನೂ ಒಟ್ಟಿಗೆ ಮಾಡಿದರೆ ಹೇಗೆ? ಇಂತಹದ್ದೊಂದು ಪ್ರಶ್ನೆಗೆ ಪರಿಹಾರವಾಗಿ ಕಂಡಿದ್ದು, ಕೃಷಿಮೇಳದಲ್ಲಿದ್ದ ಬಿತ್ತನೆ ಕೂರಿಗೆ ಯಂತ್ರ.
ಹೌದು, ಬೀಜ ಬಿತ್ತನೆ ಹಾಗೂ ಗೊಬ್ಬರ ಹಾಕುವ ಈ ಯಂತ್ರ ಕೃಷಿಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಬೀಜ ಬಿತ್ತುತ್ತಾ, ಗೊಬ್ಬರ ಸುರಿಯುವ ಈ ಯಂತ್ರಗಳ ಹಿಂಬದಿಯಲ್ಲಿ ಮಣ್ಣಿನ ಸಾಲು ಮುಚ್ಚುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದರಿಂದ ರೈತರಿಗೆ ಇನ್ನಷ್ಟು ಖರ್ಚು ಉಳಿಯುತ್ತದೆ ಎಂಬುದು ಮಾರಾಟಗಾರರ ಮಾಹಿತಿ. ಹಲವು ರೈತರು ಆಸಕ್ತಿಯಿಂದ ಈ ಯಂತ್ರಗಳ ಬಳಿ ನಿಂತು, ಮಾಹಿತಿ ಪಡೆಯುತ್ತಿದ್ದು ಮೇಳದ ವಿವಿಧೆಡೆ ಕಂಡುಬಂತು.
ಯಂತ್ರದ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೂರಿಗೆ ಯಂತ್ರವನ್ನು ಅಭಿವೃದ್ಧಿಪಡಿಸಿರುವ ದಾವಣಗೆರೆಯ ಓಂ ಗಣೇಶ ಆಗ್ರೊ ಇಂಡಸ್ಟ್ರೀಸ್ನ ನಂದಿಗೌಡ, ‘ನಡಕಟ್ಟಿನ ಕೂರಿಗೆ ಮಾದರಿಯಲ್ಲಿ ಈ ಕೂರಿಗೆ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಜೋಳ, ಶೇಂಗಾ, ರಾಗಿ ಮೊದಲಾದ ದ್ವಿದಳ ಧಾನ್ಯಗಳನ್ನು ಯಂತ್ರದಿಂದ ಬಿತ್ತನೆ ಮಾಡಬಹುದು. 50 ಕೆ.ಜಿ ಬಿತ್ತನೆ ಬೀಜ ಹಾಗೂ 50 ಕೆ.ಜಿ ಗೊಬ್ಬರವನ್ನು ಇದರಲ್ಲಿ ಹಾಕಬಹುದು’ ಎಂದರು.
‘ಯಂತ್ರದ ಅಭಿವೃದ್ಧಿಗೆ ₹1 ಲಕ್ಷ ಖರ್ಚಾಗಿದ್ದು, ಸಹಾಯಧನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸರ್ಕಾರದ ಪ್ರತಿಕ್ರಿಯೆ ನೋಡಿಕೊಂಡು ಶೀಘ್ರ ದರ ನಗದಿ ಮಾಡಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ರೈತರ ಖರ್ಚು ಉಳಿಸುವಂತಹ ಸಾಕಷ್ಟು ಅನುಕೂಲಗಳನ್ನು ಯಂತ್ರ ಹೊಂದಿದೆ. ಸಿಂಗಲ್ ಪೇಸ್ ಕರೆಂಟ್ ಬಳಸಿ ಎಣ್ಣೆ ತಯಾರಿಸುವ ಯಂತ್ರ, ಒಕ್ಕಣೆ ಮಾಡುವ ಯಂತ್ರವೂ ನಮ್ಮಲ್ಲಿ ಲಭ್ಯವಿವೆ’ ಎಂದು ಅವರು ಮಾಹಿತಿ ನೀಡಿದರು.
ಮಾಹಿತಿಗೆ ಸಂಪರ್ಕ ಸಂಖ್ಯೆ: 96118 89233
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.