ADVERTISEMENT

ಅಣ್ಣಿಗೇರಿಗೆ ಪಾಂಡವರು ಬಂದಿದ್ದರೇ?

ಸಿ.ಕೆ.ಮಹೇಂದ್ರ
Published 12 ಅಕ್ಟೋಬರ್ 2018, 20:15 IST
Last Updated 12 ಅಕ್ಟೋಬರ್ 2018, 20:15 IST
ಅಮೃತೇಶ್ವರ ದೇವಸ್ಥಾನದ ಪ್ರವೇಶದ್ವಾರದ ಮುಂದಿರುವ ಸುಂದರ ಕೆತ್ತನೆ. ಚಿತ್ರಗಳು: ತಾಜುದ್ದೀನ್‌ ಆಜಾದ್‌
ಅಮೃತೇಶ್ವರ ದೇವಸ್ಥಾನದ ಪ್ರವೇಶದ್ವಾರದ ಮುಂದಿರುವ ಸುಂದರ ಕೆತ್ತನೆ. ಚಿತ್ರಗಳು: ತಾಜುದ್ದೀನ್‌ ಆಜಾದ್‌   

ರವಾಡ ಜಿಲ್ಲೆಯ ಅಣ್ಣಿಗೇರಿ ಗೊತ್ತಲ್ಲ; ಆದಿಕವಿ ಪಂಪ ಹುಟ್ಟಿದ ಊರು ಇದು. ಪಂಪನ ವಾಡೆಯೂ ಇಲ್ಲಿದೆ. ಇಂಥ ಅಣ್ಣಿಗೇರಿಗೆ ಪಾಂಡವರು ಬಂದಿದ್ದರೇ?

ಹೌದು ಎನ್ನುತ್ತವೆ ರಾಜ್ಯದ ಬಹಳಷ್ಟು ಊರುಗಳಲ್ಲಿ ಇರುವ ಐತಿಹ್ಯಗಳು ಹಾಗೂ ಜಾನಪದೀಯ ನಂಬಿಕೆಗಳು. ಕನಕದಾಸನ ಹುಟ್ಟೂರು ಬಾಡದಲ್ಲಿ ಒಂದು ಕೆರೆ ಇದೆ. ಈ ಕೆರೆಗೆ ಬಕಾಸುರ ನೀರು ಕುಡಿಯಲು ಬರುತ್ತಿದ್ದ ಎಂದು ಈ ಊರಿನ ಜನರು ಇಂದಿಗೂ ನಂಬಿದ್ದಾರೆ. ಬಕಾಸುರ ಇಲ್ಲಿದ್ದ ಮೇಲೆ ಪಾಂಡವರು ಬರಬೇಕಲ್ಲವೇ? ಬಕಾಸುರನನ್ನು ಕೊಂದವನು ಭೀಮ ಅಲ್ಲವೇ?

ಇದೇನೇ ಇರಲಿ. ಅಣ್ಣಿಗೇರಿ ಒಂದು ಕಾಲದಲ್ಲಿ ರಾಜಧಾನಿಯಾಗಿ ಮೆರೆದಿತ್ತು. ಈಗ, ಹೊಸ ತಾಲ್ಲೂಕು ಆಗಿ ಗಮನ ಸೆಳೆಯುತ್ತಿದೆ. ಇಂಥ ಊರಲ್ಲಿ ನಾವು, ನೀವು ಎಲ್ಲರೂ ನೋಡಲೇಬೇಕಾದ ಅಮೃತೇಶ್ವರ ದೇವಸ್ಥಾನವಿದೆ. ಅಮೃತೇಶ್ವರ ದೇವಸ್ಥಾನವನ್ನು ಸ್ಮಶಾನದ ಮೇಲೆ ಕಟ್ಟಲಾಗಿದೆ. ಇಲ್ಲಿ ಅನ್ನದಾನ ಮಾಡಿದರೆ ಅತ್ಯಂತ ಶ್ರೇಷ್ಠ ಎಂಬ ನಂಬಿಕೆ ಇದೆ. ಹಿಂದೆ, ಪ್ರತಿ ದಿನ ಈ ಜಾಗದಲ್ಲಿ ಅನ್ನದಾನ ನಡೆಯುತ್ತಿತ್ತಂತೆ. ಹೀಗಾಗಿ ಅನ್ನದಾನದ ಊರು ಅಣ್ಣಿಗೇರಿಯಾಗಿರಬಹುದು ಎಂದು ಹೇಳುವವರೂ ಇದ್ದಾರೆ.

ADVERTISEMENT

‘ದೇವಸ್ಥಾನವನ್ನು ಸ್ಮಶಾನದ ಮೇಲೆ ಕಟ್ಟಲಾಗಿದೆ. ಶಿವನಿಗೆ ಸ್ಮಶಾನ ಎಂದರೆ ಇಷ್ಟವಲ್ಲಚವೇ? ಇಂಥ ಇತಿಹಾಸ ಹೊಂದಿರುವ ರಾಜ್ಯದ ಏಕಮೇವ ದೇವಸ್ಥಾನ ಇದಾಗಿದೆ’ ಎನ್ನುತ್ತಾರೆ ದೇವಸ್ಥಾನ ನಿರ್ವಹಣೆ ನೋಡುವ ಎಸ್‌.ಬಿ.ಬೇಲೇರಿ.

‘ಕೃತಪುರಮಹಾತ್ಮೆ' ಕೃತಿಯಲ್ಲೂ ಊರಿಗೆ ‘ಅನ್ನಗಿರಿ’, ’ಅನ್ಯತಟಾಕ’ ಎಂಬ ಹೆಸರಿತ್ತು ಎಂದು ಹೇಳಲಾಗಿದೆ. ಎರಡನೇ ಪುಲಿಕೇಶಿ ಈ ಗ್ರಾಮವನ್ನು ಆಳ್ವಿಕೆ ಮಾಡಿದ್ದನು. ಗ್ರಾಮದಲ್ಲಿ 28 ಶಾಸನಗಳು ಸಿಕ್ಕಿವೆ. ಅಮೃತೇಶ್ವರ ದೇವಸ್ಥಾನದ ಕಾರಣದಿಂದಾಗಿ ದಕ್ಷಿಣ ಕಾಶಿ ಎಂದೇ ಹೆಸರಾಗಿದೆ. ಚಾಲುಕ್ಯ ರಾಜ ನಾಲ್ಕನೇ ಸೋಮೇಶ್ವರನಿಗೆ ಆತನ ರಾಜ್ಯ ಮರಳಿ ಗೆದ್ದುಕೊಳ್ಳಲು ಸಹಾಯ ಮಾಡಿದ ದಂಡನಾಯಕ ಬಮ್ಮಿದೇವ, ಕಳಚುರಿ ರಾಯಮುರಾರಿ ಸೋವಿದೇವನ ದಂಡನಾಯಕ ಧನ್ನುಗಿ ಇದೇ ಗ್ರಾಮದವರು ಎಂಬುದು ಇಲ್ಲಿನ ಮತ್ತೊಂದು ಹೆಮ್ಮೆ.

ಅಣ್ಣಿಗೇರಿ ಎರಡು ಕಾರಣದಿಂದ ಗಮನ ಸೆಳೆಯುತ್ತದೆ. ಒಂದು ಪಂಪನ ಹುಟ್ಟೂರು. ಇನ್ನೊಂದು ಅಮೃತೇಶ್ವರ ದೇವಸ್ಥಾನ. ಈ ದೇವಸ್ಥಾನವನ್ನು ಚಾಲುಕ್ಯರ ಶೈಲಿಯಲ್ಲಿ ಕಟ್ಟಲಾಗಿದೆ. ಕಪ್ಪು ಶಿಲೆಯನ್ನು ಬಳಸಲಾಗಿದೆ. ದೇವಸ್ಥಾನಕ್ಕೆ ಕಾಲಿಡುತ್ತಿದ್ದಂತೆ ಬೇರೆಯದೇ ಲೋಕಕ್ಕೆ ತೆರಳಿದಂತೆ ಭಾಸವಾಗುತ್ತದೆ.

ಗರ್ಭಗುಡಿಯಲ್ಲಿ ಅಮೃತೇಶ್ವರನ ಲಿಂಗ ಇದೆ. ಸುಕನಾಸಿ, ಒಳಮಂಟಪ, ಮುಖಮಂಟಪ ಮತ್ತು ಮಹಾಮಂಟಪಗಳಿವೆ. ಒಳಮಂಟಪದ ಶಿಲಾದ್ವಾರ ನಾಗ-ನಾಗಿಣಿಯರ ಕೆತ್ತನೆಗಳಿಂದ ಆಕರ್ಷಿತವಾಗಿ ಕಾಣುತ್ತದೆ. ಕಲಶ, ದೇವತೆಗಳು, ಮಂಗಗಳು, ನೃತ್ಯಗಣಪತಿ ಚಿತ್ರಗಳನ್ನು ಕೆತ್ತಲಾಗಿದೆ.

ಕ್ರಿ.ಶ. 1050ರಲ್ಲಿ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಕಾಲದಲ್ಲಿ ದೇವಸ್ಥಾನ ಕಟ್ಟಲು ಆರಂಭಿಸಲಾಯಿತು ಎಂಬುದನ್ನು ದಾಖಲೆಗಳು ಹೇಳುತ್ತವೆ. ಈ ಗ್ರಾಮವನ್ನು ನಾಲ್ಕನೇ ಸೋಮೇಶ್ವರ ತನ್ನ ರಾಜಧಾನಿಯಾಗಿ ಮಾಡಿಕೊಂಡಿದ್ದನು. ಹೊಯ್ಸಳ ದೊರೆ ವೀರ ಬಲ್ಲಾಳನ ಕಾಲದಲ್ಲಿ ಎರಡನೇ ರಾಜಧಾನಿಯಾಗಿತ್ತು.

ದೇವಸ್ಥಾನವನ್ನು ಪುರಾತತ್ವ ಮತ್ತು ಪ್ರಾಚ್ಯ ಸಂಶೋಧನಾ ಇಲಾಖೆಯು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದೆ. ದೇವಸ್ಥಾನದ ಕುಸುರಿ ಕೆಲಸಗಳು ಆಕರ್ಷಕವಾಗಿವೆ. 36 ಕಲ್ಲಿನ ಕಂಬಗಳನ್ನು ಬಳಸಿ ದೇವಸ್ಥಾನ ಕಟ್ಟಲಾಗಿದೆ. ಗರ್ಭಗುಡಿಗೊಂದು, ಮುಖ ಮಂಟಪಕ್ಕೆ ಮತ್ತೊಂದು ಗೋಪುರ ಇದೆ. ಶಿವನ ಲಿಂಗದ ಪಕ್ಕದ ಪ್ರಾಂಗಣದ ಗುಡಿಯಲ್ಲಿ ನಂದಿಯನ್ನು ಪೂಜಿಸಲಾಗಿದೆ.

ಪಾರ್ವತಿ ದೇವಿ ಮೂರ್ತಿಯೂ ದೇವಸ್ಥಾನದಲ್ಲಿದೆ. ಕಂಬಗಳ ಮೇಲೆ ಗಂಧರ್ವ ಕನ್ಯೆ, ಸ್ತ್ರೀ ಪುರುಷರ ಜೋಡಿಗಳ ಕೆತ್ತನೆ ಕಾಣಬಹುದು. ದೇವಸ್ಥಾನದಲ್ಲಿ 44 ಅಂಕಣಗಳಿವೆ. ಗೋಡೆಯ ಮೇಲೆ ಶಿವನ 11 ವಿವಿಧ ಭಂಗಿಗಳನ್ನು ಕೆತ್ತಲಾಗಿದೆ. ಗಂಡಭೇರುಂಡ ಪಕ್ಷಿಯ ಮೂರ್ತಿಯೂ ಇದೆ. ಈ ದೇವಸ್ಥಾನವಲ್ಲದೇ ಅಣ್ಣಿಗೇರಿಯಲ್ಲಿ ಬನಶಂಕರಿ, ಬಸಪ್ಪ, ಗಚ್ಚ್ರಿಬಸಪ್ಪ, ಕೋಳಿವಾಡ ಹನುಮಪ್ಪ, ಮೈಲಾರ, ಪುರದ ವೀರಪ್ಪನ ಗುಡಿಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.