ವ್ಯಂಗ್ಯಚಿತ್ರ ಲೋಕ ಅಂದರೆ ನಿಜಕ್ಕೂ ಅದೊಂದು ವೈವಿಧ್ಯಮಯ ಕಲಾ ಪ್ರಕಾರಗಳ ಲೋಕ. ವ್ಯಂಗ್ಯಭಾವಚಿತ್ರ ರಚನೆ ಅದರ ಒಂದು ಭಾಗವಷ್ಟೆ. ಕ್ಯಾರಿಕೇಚರ್ ಎಂದೇ ಪ್ರಸಿದ್ಧವಾಗಿರುವ ಈ ಅದ್ಭುತ ಕಲೆಯ ವಿಶೇಷವೇನೆಂದರೆ ಅದಕ್ಕೆ ಯಾರನ್ನು ಬೇಕಾದರೂ ಎಳೆದುಕೊಳ್ಳುವ ಸೆಳೆತವಿದೆ. ಒಬ್ಬ ವ್ಯಕ್ತಿ ವ್ಯಂಗ್ಯಭಾವಚಿತ್ರಕಾರನ ಕೈಗೆ ಸಿಕ್ಕಿಬಿಟ್ಟರೆ ಸಾಕು, ಅವರು ಮಹಾನುಭಾವರೇ ಆಗಿರಲಿ, ಅವರು ಅಂಕು ಡೊಂಕಾಗಿ ಉತ್ಪ್ರೇಕ್ಷಿತ ರೂಪದಲ್ಲಿ ಮೂಡಿಬರುತ್ತಾರೆ. ಅಲ್ಲಿ ಹಾಸ್ಯ ಇರುತ್ತದೆ. ಅಪಹಾಸ್ಯ ಇರುವುದಿಲ್ಲ. ಭಾವಚಿತ್ರದಲ್ಲಿ (ಪೊರ್ಟ್ರೈಟ್) ಮೂಡಿಸಲಾಗದಂತಹ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ವ್ಯಂಗ್ಯವಾಗಿ ಬಿಂಬಿಸಲ್ಪಡುವ ಸಾಮರ್ಥ್ಯ ಕ್ಯಾರಿಕೇಚರ್ಗಿದೆ.
ಪ್ರಸಿದ್ಧ ವ್ಯಕ್ತಿಗಳ ವ್ಯಂಗ್ಯ ಭಾವಚಿತ್ರಗಳನ್ನು ಪೂರ್ಣಗೊಳಿಸುವ ಮೊದಲೇ ಗುರುತು ಹಿಡಿಯಬಹುದೆಂದು ನನಗೂ ಗೊತ್ತಿರಲಿಲ್ಲ. ಅಂತಹ ಪ್ರಯೋಗ ಮಾಡಲು ಹೊರಟಾಗ ಅದು ಸಾಧ್ಯವೆಂದು ತಿಳಿಯಿತು. ಈ ಹೊತ್ತಿನಲ್ಲಿ ನಾನು ಕಂಡುಕೊಂಡ ಸತ್ಯವೇನೆಂದರೆ, ಮುಖವನ್ನು ಅಪೂರ್ಣಗೊಳಿಸಿದರೂ ತಕ್ಷಣ ಗುರುತು ಹಿಡಿಯುವಂತಹ ವ್ಯಕ್ತಿತ್ವ ಇರುವುದು ಇಬ್ಬರಿಗೆ ಮಾತ್ರ! ಅದು ಗಾಂಧೀಜಿ ಮತ್ತು ಚಾಪ್ಲಿನ್. ಆ ಕಾರಣಕ್ಕಾಗಿ ನಾನು ರಚಿಸಲು ಹೊರಟ ಕನ್ನಡದ ಕಣ್ಮಣಿಗಳ ಅಪೂರ್ಣ ಮುಖದೊಂದಿಗೆ ಅವರಿಗೆ ಸಂಬಂಧಿತ ವಿಷಯವನ್ನು ರೂಪಕದಂತೆ ಬೆರೆಸಬೇಕಾಯಿತು. ಇಲ್ಲಿ ಕಾಣುವ ಅರ್ಧಂಬರ್ಧ ವ್ಯಂಗ್ಯಭಾವಚಿತ್ರಗಳಿಗೆ ಜೀವ ಬಂದದ್ದೇ ಹಾಗೆ! ಪತ್ತೆ ಹಚ್ಚುವ ಕೆಲಸ ನೋಡುಗರಿಗೆ ಬಿಡೋಣ, ಅಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.