ಇಲ್ಲೊಬ್ಬ ಕಲಾವಿದರು ನಿರ್ಜೀವ ವಸ್ತುವಿಗೆ ಜೀವ ತುಂಬುತ್ತಾರೆ. ಅವರ ಕೈಚಳಕದ ಮೂಲಕ ತೆಂಗಿನ ಚಿಪ್ಪಿನಿಂದ ಹತ್ತು ಹಲವು ಆಕರ್ಷಣೀಯ ಕಲಾಕೃತಿಗಳು ಅರಳಿ ನಿಂತಿವೆ. ಅವರೇ ಮಾಳೇಟಿರ ಅಜಿತ್ ಪೂವಣ್ಣ.
ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಮಾಳೇಟಿರ ಕುಟುಂಬದವರಾದ ಅಜಿತ್ ಪೂವಣ್ಣ ಅವರಿಗೆ ಚಿಕ್ಕಂದಿನಿಂದಲೂ ತೆಂಗಿನ ಚಿಪ್ಪು ಸಂಗ್ರಹಿಸಿ ಹಲವು ಕಲಾಕೃತಿ ಮಾಡುವುದು ಹವ್ಯಾಸ.
ಕಾಲೇಜು ಶಿಕ್ಷಣ ಪೂರ್ಣಗೊಳಿಸಿ ಹಲವು ವರ್ಷ ಬೆಂಗಳೂರಿನ ಸಾಫ್ಟ್ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ಕೊಡಗಿನಲ್ಲಿ ನೆಲೆಸಿರುವ ಅಜಿತ್ ತಮ್ಮ ಬಿಡುವಿನ ಸಮಯದಲ್ಲಿ ತೆಂಗಿನ ಚಿಪ್ಪಿನಲ್ಲಿ ಶಿವನಗುಡಿ, ಪಕ್ಷಿ, ಕೋಳಿ, ಚಿಟ್ಟೆ, ಕಪ್ಪು, ಪಾತ್ರೆ, ಪೆನ್ನು, ಲಾಕೆಟ್, ತಾವರೆ, ಲ್ಯಾಂಪ್ ಸ್ಟ್ಯಾಂಡ್ನಂತಹ ಸುಮಾರು 20ಕ್ಕೂ ಹೆಚ್ಚು ವಿವಿಧ ವಿನ್ಯಾಸ್ ಕಲಾಕೃತಿಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ.
ತೆಂಗಿನಕಾಯಿ ತಂದು ನಾಜೂಕಾಗಿ ಕತ್ತರಿಸಿ, ತಮಗೆ ಬೇಕಾದ ಆಕೃತಿ ಮಾಡುತ್ತಾರೆ. ಚಿಪ್ಪನ್ನು ಉಜ್ಜಿ ತಿದ್ದಿ–ತೀಡಿ ಹಲವು ಬಗೆಯ ಪಾಲಿಷ್ ಮಾಡಿ ಒಣಗಿಸಿ ಇಡಲಾಗಿದೆ. ನೆಂಟರಿಷ್ಟರು, ಸ್ನೇಹಿತರು ಹಾಗೂ ಹಲವು ಕಲಾ ಪ್ರೇಮಿಗಳಿಗೆ ಇದೇ ಕಲಾಕೃತಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರಿಂದಲೂ ಮೆಚ್ಚುಗೆ ಮಾತುಗಳು ಕೇಳಿಬಂದಿವೆ.
ಹಿಂದೆ ಮನೆಗಳಲ್ಲಿ ಮರ, ಮಣ್ಣಿನ ಹಾಗೂ ತೆಂಗಿನಚಿಪ್ಪಿನ ಹಲವು ವಸ್ತುಗಳನ್ನು ಬಳಸುತ್ತಿದ್ದಾರೆ. ಈಚೆಗೆ ಲೋಹದ ಸಾಮಗ್ರಿಗಳು ಬಂದಂತೆ ಅವುಗಳು ಮೂಲೆಯಾದವು. ಆದರೆ, ಈ ಕಲಾವಿದ ಮಾತ್ರ ಪರಿಸರ ಸ್ನೇಹಿ ಕಲಾಕೃತಿ ರಚನೆಯಲ್ಲಿ ನಿತರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.