ಸವಾರನೂ ಅಲ್ಲ ಕುದುರೆಯೂ ಅಲ್ಲ
ಓಡುವ ಕುದುರೆಯ ಗೊರಸಿನ ಲಾಳ!
ಗೋಪುರವಲ್ಲ ಗೋಡೆಯೂ ಅಲ್ಲ
ಮೂಲೆಯ ಕಲ್ಲು - ಅಸ್ತಿವಾರ
ಮೋಕ್ಷವಿರದಿದ್ದೀತೆ ಲಾಳಕ್ಕೂ ಕಲ್ಲಿಗೂ
ಹೀಗೂ ಇರಬಹುದೆ ಸಂತ ಕಠಿಣತೆಯ ಸೋಗಿನಲಿ
ಪೂಜಿಸದೆ ಧ್ಯಾನಿಸದೆ
ಎಲ್ಲರಿದಿರಿನಲ್ಲಿ
ಕರೆದರು ಗುರು: ಬಾ ಕೇಳು
ವಚನಾಮೃತ
ನಡೆದರು ಇವರು ಪೇಟೆಗೆ
ತರಬೇಕಿದೆ ದಿನಸಿ ತರಕಾರಿ
ಹಸಿದ ಮಕ್ಕಳಿಗೆ ಉದರಾಮೃತ
ಮತ್ತೆ ಗದರಲು ಗುರು: ಧ್ಯಾನ ಕೂರು ಇಲ್ಲಿ
ಓಡಿದರು ಇವರು ತೋಟಕ್ಕೆ
ಕಚ್ಚಿತೇ ಕಾಯಿ
ತೂಗಿತೇ ಹಣ್ಣು
ಕರೆದವೇ ಹಸುಗಳು ಸರಿಯಾಗಿ
ಕಾದಿದ್ದಾವೆ ಮಕ್ಕಳು ತಟ್ಟೆಯಿದಿರಿನಲ್ಲಿ
ನಗುತ ಅಂದರು ಗುರು ಲಿಂಗದಿದಿರು:
ಶಿವನೇ! ಈತನಿಗೆ ಎಲ್ಲವನು ಹಾಗೇ ನೀಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.