ADVERTISEMENT

ಬುದ್ಧಿವಂತ ರೈತ

Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಒಂದು ದೊಡ್ಡ ಪಟ್ಟಣದ ಬಳಿ ತೇಜಪುರ ಎಂಬ ಒಂದು ಚಿಕ್ಕ ಹಳ್ಳಿಯಿತ್ತು. ಅಲ್ಲಿ ಭೀಮಪ್ಪ ಎಂಬ ರೈತ ವಾಸವಾಗಿದ್ದನು. ಅವನದೊಂದು ಚಿಕ್ಕ ಕುಟುಂಬವಾದರೂ ಮನೆಯವರೆಲ್ಲ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಅವನಿಗೆ ಇಬ್ಬರು ಚಿಕ್ಕ ಮಕ್ಕಳಿದ್ದರು. ಅವರಿಗೆ ರವಿ ಮತ್ತು ಕೀರ್ತಿ ಎಂದು ಹೆಸರಿಟ್ಟಿದ್ದರು. ಅವನ ಹೆಂಡತಿಯು ಸಹ ಗುಣವತಿ ಮತ್ತು ರೂಪವತಿಯಾಗಿದ್ದಳು. ಅವನು ಪ್ರತಿನಿತ್ಯ ಗದ್ದೆ ಮತ್ತು ತೋಟಕ್ಕೆ ಹೋಗಿ ಕೆಲಸ ಮಾಡುತ್ತಿದ್ದನು.

ಒಂದು ದಿನ ಭೀಮಪ್ಪನು ತನ್ನ ಗದ್ದೆಗೆ ಹೋದಾಗ ಅವನಿಗೆ ಎರಡು ಮೊಟ್ಟೆಗಳು ಕಂಡವು. ಅವುಗಳನ್ನು ತೆಗೆದುಕೊಳ್ಳಲು ಹೋದಾಗ ಅಲ್ಲಿ ಒಂದು ನಾಗರಹಾವು ಮೊಟ್ಟೆಗಳಿಗೆ ಹೊಂಚು ಹಾಕಿ ಹೆಡೆ ಬಿಚ್ಚಿ ಕುಳಿತಿದ್ದನ್ನು ಕಂಡ ಭೀಮಪ್ಪನಿಗೆ ಒಂದು ಕ್ಷಣ ಮೈ ನಡುಗಿ ಹೋಯಿತು. ಹಾವು ಅಲ್ಲಿಂದ ಹೋಗುವುದೆಂದು ಅವನು ಕಾದು ಕುಳಿತನು. ಆದರೆ ಬಹಳ ಹೊತ್ತಾದರೂ ಹಾವು ಹೋಗಲೇ ಇಲ್ಲ.

ಭೀಮಪ್ಪನು ಹತ್ತಿರದಲ್ಲೇ ಸತ್ತು ಬಿದ್ದಿದ್ದ ಇಲಿಯನ್ನು ಕಂಡನು. ಉಪಾಯದಿಂದ ಇಲಿ ಹಾವಿಗೆ ಕಾಣುವಂತೆ ಮಾಡಿದನು. ಆಗ ಹಾವು ಇಲಿಯನ್ನು ಕಂಡು ತಿನ್ನಲು ಅದರ ಬಳಿ ಹೋಯಿತು. ತಕ್ಷಣ ಭೀಮಪ್ಪನು ಮೊಟ್ಟೆಗಳನ್ನು ತೆಗೆದುಕೊಂಡನು. ಆಗ ಅವನು ಆ ಮೊಟ್ಟೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಜೋಪಾನವಾಗಿ ಕಾವು ಬರುವಂತೆ ಇಟ್ಟನು. ಸ್ವಲ್ಪ ದಿನಗಳ ನಂತರ ಸುಂದರವಾದ ಎರಡು ಗಿಳಿ ಮರಿಗಳು ಹೊರಬಂದವು. ಭೀಮಪ್ಪನ ಇಬ್ಬರು ಮಕ್ಕಳು ಎರಡು ಗಿಳಿ ಮರಿಗಳೊಂದಿಗೆ ಸಂತೋಷದಿಂದ ಬೆಳೆದರು.
- -–ವೀರೇಶ ಬಿ.ಬಿ. ಕಂಚಿಕೆರಿ ಮಠ.
5ನೇ ತರಗತಿ, ಮಾಲತೇಶ ಪಬ್ಲಿಕ್ ಸ್ಕೂಲ್, ಯರಲಬನ್ನಿಕೋಡು, ಮಲೇಬೆನ್ನೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.