ಸರ್ಕಸ್ ಕಂಪೆನಿ ಮಾಡಲು
ಪುಟ್ಟ ಮನಸು ಮಾಡಿದ್ದ
ದೊಡ್ಡ ಚಾವುಟಿ ಹಿಡಿದು
ರಿಂಗ್ ಮಾಸ್ಟರ್ ತಾನೆ ಆಗಿದ್ದ
ಅವನ ಗೆಳೆಯ ರಮೇಶ
ಹುಲಿಯ ವೇಷ ಧರಿಸಿರಲು
ಭೀಮನ ಹೆಸರಿನ ಬಾಲಕ
ಆನೆಯ ಹಾಗೆ ನಡೆದಿರಲು
ಕರಡಿಯ ವೇಷ ಹಾಕಲು
ಬೇಗನೆ ಒಪ್ಪಿದ ಶಾಮ
ಒಂಟೆಯ ಹಾಗೆ ಕಂಡ
ಎತ್ತರವಿದ್ದ ರಾಮ
ತರಗತಿಗೆ ಮೊದಲಿದ್ದ
ಕಿಲಾಡಿ ಸೋಮನ ಹೆಸರು
ನರಿಯ ಬಟ್ಟೆ ತೊಡಲು
ಎಲ್ಲರೂ ಒಪ್ಪಿಕೊಂಡರು
ಸದಾ ಜಗಳ ತೆಗೆಯುವ
ರವಿಯು ಮೀಸೆ ತೀಡಿದ
ತಾನೇ ಸಿಂಹವು ಎಂದು
ದೊಡ್ಡ ಕೂಗು ಹಾಕಿದ
ಚೀಟಿ ಕೊಡುವ ಕೆಲಸಕ್ಕೆ
ಕನ್ನಡ ಮಾಸ್ತರು ನಿಂತರು
ಹಣವ ಎಣಿಸಿ ನೋಡಲು
ಗಣಿತದ ಮಾಸ್ತರು ಬಂದರು
ಪ್ರಾಣಿ ವೇಷದ ಎಲ್ಲರು
ಬಂದರು ವೃತ್ತದ ರೀತಿ
ಕನ್ನಡ ಮಾಸ್ತರ ಸಂಗೀತ
ಹಲವು ರಾಗದ ಖ್ಯಾತಿ
ಮುಖ್ಯ ಗುರುಗಳು ಬಂದು
ಸರ್ಕಸ್ ಪ್ರಾರಂಭವಾಯ್ತು
ಮಕ್ಕಳ ಸರ್ಕಸ್ ಕಂಪೆನಿ
ಎಂದು ಎಲ್ಲೆಡೆ ಹೆಸರಾಯ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.