ADVERTISEMENT

ಮಾನವ ಶಾಸ್ತ್ರದ ಒಂದು ಚಿನ್ನ (ಚಿಕ್ಕ) ಪಾಠ

ಕವಿತೆ

ಮೂಡ್ನಾಕೂಡು ಚಿನ್ನಸ್ವಾಮಿ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ನಾನು ಅನುಭವಿಸುವ
ಘೋರತಮ ಅವಮಾನ
ಯಾವಾಗ ಅಂದರೆ
ಸವರ್ಣೀಯ ಸರೀಕರು
`ನೋಡಲು
ನೀನು “ಆ” ಜಾತಿಯವನಂತೆ
ಕಾಣುವುದಿಲ್ಲ' ಅಂದಾಗ

ಯಾರಾದರೂ ಹಾಗಂದಾಗ
`ಹೇ ಸೂಳೆ ಮಗನೆ' ಅಂದಂತಾಗಿ
ಕುಗ್ಗಿಹೋಗುತ್ತೇನೆ ನಾನು
ಪೂರ್ವಗ್ರಹದ ಕಳ್ಳಿಹಾಲಿಗೆ
ಅಸೂಯೆಯ ಬೇವಿನರಸ ಬೆರೆಸಿ
ನನ್ನೆದೆಗೆ ಎರೆದಂತಾಗಿ

ಆದರೂ
ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ
ನನ್ನಂತೆಯೆ
ಅನೇಕಾನೇಕರಿದ್ದಾರೆಂಬುದು
ಖಾತ್ರಿಯಾಗಿ

ADVERTISEMENT

ಅಚೂತನೊಬ್ಬ ತಮ್ಮ
ನಿರೀಕ್ಷೆಯಂತೆ ಕಾಣದಿದ್ದಾಗ
ಹಾದರಕ್ಕುಟ್ಟಿದವನೆಂದು ಬಗೆಯುವುದು
ಶೋಷಣೆಯ ಪರಮನೀಚ
ಸ್ಥಿತಿ ಎಂದು
ನಾನು ಯಾಕೆ ಹೇಳಬೇಕು?

ಹಾಗಂದವನು ತಾನು
ಯಾಕೆ ಕಪ್ಪಗಿದ್ದೇನೆ ತನ್ನಪ್ಪನ
ಮೂಗು ಚಪ್ಪಟೆಯಾಗಿದೆ ಯಾಕೆ
ಅವ್ವ ತುಸುಬೆಳ್ಳಗಿದ್ದರೂ
ತುಟಿ ದಪ್ಪ ಬಾಯಿ
ದಾರಂಧದ ಗಾತ್ರ ಹೇಗಾಯಿತು
ಎಂದೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ

ಇಲ್ಲಿ ಜಾತಿಗಳು ಹುಟ್ಟುವುದಕ್ಕೂ
ಮುಂಚೆ ಒಳ-ಹೊರಗಿನವರಿಂದ
ಸಂಕರವಾಗಿತ್ತು
ಭರತವರ್ಷದಲ್ಲಿ ಹುಟ್ಟುವ ಮಕ್ಕಳು
ಭಿನ್ನ ವಿಭಿನ್ನರು ಎಂದೆಲ್ಲಾ
ಮಾನವ ಶಾಸ್ತ್ರದ ಮೂಲಪಾಠವನ್ನು
ನಾನು ಯಾಕೆ ಹೇಳಬೇಕು?

ರಾಷ್ಟ್ರಪತಿಯಾದರೇನು
ಪದವಿಯ ಎಡಪಕ್ಕ `ಆ'
ಗುಣವಾಚಕ ಇದ್ದೇ
ಇರುತ್ತದೆ ಅದಕ್ಕೆ
ಎಂದಾದರೊಮ್ಮೆ ನಾನು
ಅದಾಗಬೇಕೆಂಬ ಕನಸಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.