ನಿದ್ದೆ ಬಾರದ ರಾತ್ರಿಗಳಲಿ
ನಿದ್ದೆಗಾಗಿ ಪರಿತಪಿಸುತ ಜಾಗರಣೆಯ ಕ್ಷಣಗಳಲಿ
ರಾತ್ರಿ ಸವೆಸಿ..
ಗಡಿಯಾರದ ಮುಳ್ಳು ತಿರುಗುತ್ತಲಿತ್ತು,
ಆ ದಿನದ ರಾತ್ರಿಯೂ ಸವೆದು ಮಧ್ಯರಾತ್ರಿಯಾಗಿತ್ತು.
ಬೋರಲು ಮಲಗಿದರೆ ಮಂಪರಲಿ,
ಸ್ವಪ್ನಸ್ಖಲನವಾಗಿ ಎಚ್ಚರವಾಯಿತು.
ಅಣುವಿನಿಂದ ಜೀವವಾಗಿ,
ಸೂರ್ಯನಿಂದ ಸಿಡಿದ ತುಂಡುಭೂಮಿಯಾಗಿ
ಜೀವಜಲಗಳುದಯಿಸಿದ ಬ್ರಹ್ಮಾಂಡ ಸೃಷ್ಟಿಯಾಗಿದ್ದು ಕಂಡುಬಂತು.
ಇದೆಲ್ಲದರ ಕನವರಿಕೆಯಲ್ಲಿಯೇ ಮಗ್ಗುಲ ಮಲಗಿದೆ.
ಗಡಿಯಾರದ ಮುಳ್ಳು ತಿರುಗುತ್ತಲಿತ್ತು,
ಮಧ್ಯರಾತ್ರಿ ಸವೆದು ‘ಕಗ್ಗತ್ತಲ ಮುಂಜಾವು’ ಸಿದ್ಧವಾಗಿತ್ತು.
ಮಗ್ಗಲು ಮಲಗಿರಲು ಬಿಗಿದಪ್ಪಿ ಮುದ್ದಿಡುವ
ಜೀವಗಳ ನೆನೆದೆ. ಒಂದಲ್ಲ ಹತ್ತು ಹಲವು ಬೇಕೆನಿಸಿತು.
ಆಸೆಯ ಹರಿಬಿಟ್ಟು ಸಿಗುವವರೆಲ್ಲಾ...
ಮತ್ತೊಂದು ಮಗ್ಗಲು ಬದಲಿಸಿದೆ
ಗಡಿಯಾರದ ಮುಳ್ಳು ತಿರುಗುತ್ತಲಿತ್ತು,
‘ಕಗ್ಗತ್ತಲ ಮುಂಜಾವು’ ಸರಿದು ನಸುಕಾಗಲು ಸಿದ್ಧವಾಗಿತ್ತು.
ಈ ಮಗ್ಗಲ ಭಂಗಿಯಲಿ ನಿದ್ದೆ ಬರಲಿಲ್ಲ,
ಜಗದಗಲವಿರುವ ಸುಖವೆಲ್ಲಾ ನನ್ನದಾಗುವ
ಆಸೆ ಕಣ್ಣಲಿ ತುಂಬಿತ್ತು.
ರೊಕ್ಕವಿರಲಿ, ಆಸ್ತಿ, ಸಂಪತ್ತು, ಮೋಟಾರುಗಾಡಿ
ಬೀಳಬೇಕೆನ್ನುತ್ತಿತ್ತು ಎಲ್ಲವೂ ನನ್ನ ಕಾಲಡಿ.
ಅಂಗಾತ ಮಲಗಿದೆ!
ಗಡಿಯಾರದ ಮುಳ್ಳು ತಿರುಗುತ್ತಲಿತ್ತು,
ನಸುಕು ಮುಗಿದು ಬೆಳ್ಳಿ ಬೆಳಕಾಗುವ ಸಮಯ!
ಅಂಗಾತ ಮಲಗಿದೆ,
ಸೂರ್ಯ ಮೂಡಿಬಂದಿದ್ದ
ನಕ್ಷತ್ರಗಳು ಕಾಣಹತ್ತಿದವು(?)
ನಕ್ಷತ್ರಗಳು ಕಾಣಿಸಿದವು?
ಪ್ರಖರ ಸೂರ್ಯ ಬೆಳಕಿನಲ್ಲಿ!
ಗಡಿಯಾರದ ಮುಳ್ಳು ತಿರುಗುತ್ತಲಿತ್ತು,
ನಿದ್ದೆ ಇಲ್ಲದೆ ಕಳೆದ ರಾತ್ರಿ ಮುಂಜಾವಲ್ಲಿ..,
ನಿದ್ರೆಗೆ ಜಾರಿಸಿತ್ತು.
*
––ಧೀರೇಂದ್ರ ನಾಗರಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.