ADVERTISEMENT

ಮನೆ ಬಾಗಿಲಲ್ಲೇ ಪುಸ್ತಕ ಬಟವಾಡೆ

ಟಿ.ಎಸ್.ಗೊರವರ
Published 19 ಸೆಪ್ಟೆಂಬರ್ 2020, 19:30 IST
Last Updated 19 ಸೆಪ್ಟೆಂಬರ್ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆರಂಭಿಸಿದ ವರ್ಷಾಂತ್ಯದಲ್ಲಿ ‘ಸಂಗಾತ ಪುಸ್ತಕ’ ಪ್ರಕಾಶನ ಶುರುಮಾಡಿದೆ. ಸಾಮಾಜಿಕ ಜಾಲತಾಣಗಳ ಅಬ್ಬರ, ಕಾಲದ ಒತ್ತಡದ ನಡುವೆ ಸಾಹಿತ್ಯ ಕೃತಿಗಳ ಓದು ಗೌಣವಾಗುತ್ತಿದೆ ಎಂಬ ಆತಂಕದ ಮಾತುಗಳು ಸಾಹಿತ್ಯ ವಲಯದಲ್ಲಿ ಆಗಾಗ ಕೇಳಿಬರುತ್ತಿವೆ. ಆದರೆ, ನನಗೆ ಹಾಗನಿಸುತ್ತಿಲ್ಲ. ಪತ್ರಿಕೆ ಆರಂಭಿಸಿದ ವರ್ಷದೊಳಗೆ ಓದುಗರು ತೋರಿದ ಅಕ್ಷರ ಪ್ರೀತಿ ಕಡಿಮೆಯೇನೂ ಅಲ್ಲ. ಸಾಹಿತಿಗಳು ಓದುವುದು ಬೇರೆಯ ಮಾತು. ಆದರೆ, ಪೋಸ್ಟ್‌ಮನ್, ತಲಾಟಿ, ಕ್ಲರ್ಕ್, ವಿದ್ಯಾರ್ಥಿ, ಕೂಲಿ ಕಾರ್ಮಿಕ, ರೈತ, ಗೃಹಿಣಿ, ನರ್ಸ್, ಹೋಟೆಲ್ ಮಾಲೀಕ, ಸರ್ವರ್‌... ಇಂಥವರೆಲ್ಲ ‘ಸಂಗಾತ’ ಪತ್ರಿಕೆಯ ಓದುಗ ವಲಯದಲ್ಲಿರುವುದು ನನ್ನ ಅಭಿಪ್ರಾಯವನ್ನು ಬದಲಿಸಿದೆ. ಅವರು ಶುದ್ಧ ಓದುಗರಷ್ಟೇ. ಓದಿನ ಸುಖ ಅನುಭವಿಸುವುದಕ್ಕಾಗಿಯೇ ಓದುತ್ತಿರುವವರು. ಪ್ರಕಾಶನ ಆರಂಭಿಸುವಾಗ ನನ್ನ ಗಮನ ಇಂಥ ಓದುಗರ ಮೇಲಿತ್ತು.

ಸಾಮಾಜಿಕ ಜಾಲತಾಣಗಳ ಮೂಲಕ ಓದುಗರ ಸಂಪರ್ಕ ಸಾಧ್ಯವಾಗುತ್ತಿದೆ. ಇದು ಪುಸ್ತಕಗಳ ಮಾರಾಟಕ್ಕೆ ನೆರವಾಗುತ್ತಿದೆ. ಕನ್ನಡಕ್ಕೆ ಅನನ್ಯ ಅನ್ನಿಸುವ, ಲೇಖಕನ ಪ್ರಭಾವಳಿಗಿಂತ ಆ ಕೃತಿಯ ತಾಜಾ ಅನ್ನಿಸುವ ಸಂವೇದನೆಯನ್ನೇ ಮುಖ್ಯವಾಗಿ ಪರಿಭಾವಿಸಿ, ಹೊಸ ತಲೆಮಾರಿನ ಅಭಿರುಚಿ ತಿದ್ದುವ ಹಿರಿ-ಕಿರಿಯರ ಕೃತಿಗಳನ್ನು ಪ್ರಕಟಿಸುವ ಜೊತೆಗೆ ಬೇರೆ ಪ್ರಕಾಶನದ ಪುಸ್ತಕಗಳನ್ನೂ ಮಾರಾಟ ಮಾಡುತ್ತಿದ್ದೇವೆ. ಅಂಚೆ ಮೂಲಕ ಓದುಗರಿಗೆ ಬೇಕಾದ ಕೃತಿಗಳನ್ನು ರಿಯಾಯಿತಿ ದರದಲ್ಲಿ ಅವರ ಮನೆಗೆ ತಲುಪಿಸುತ್ತಿದ್ದೇವೆ.

ನಿಜಕ್ಕೂ ಅಜ್ಞಾತ ಓದುಗರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಅವರಿಗೆ ಸುಲಭವಾಗಿ ಪುಸ್ತಕ ತಲುಪಿಸಬೇಕು. ಆಗ ಆ ಓದುಗ ಮತ್ತೊಂದು ಪುಸ್ತಕ ಹುಡುಕಿ ಹೋಗುತ್ತಾನೆ. ಇದು ಪುಸ್ತಕ ಸಂಸ್ಕೃತಿ ಬೆಳೆಸುವ ಕ್ರಮವೆಂದು ಭಾವಿಸಿ ಈ ದಾರಿಯಲ್ಲಿ ಸಾಗುತ್ತಿರುವೆ. ಆ ದಾರಿಯಲ್ಲಿ ಸಾವಿರಾರು ಓದುಗರು ಜೊತೆಯಾಗುತ್ತಿದ್ದಾರೆ. ಓದುವವರು ಇದ್ದೇ ಇದ್ದಾರೆ, ಅವರನ್ನು ನಾವು ಒಳ್ಳೆಯ ಕೃತಿಗಳ ಮೂಲಕ ಭೇಟಿ ಮಾಡಬೇಕಷ್ಟೇ.

ADVERTISEMENT

(ಲೇಖಕ ‘ಸಂಗಾತ ಪುಸ್ತಕ’ದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.