ADVERTISEMENT

ಆರ್ಥಿಕ ಸಂಕಷ್ಟ | ಕೊಲ್ಲಿ ಕನಸಿಗೆ ಕತ್ತರಿ?

ಗೀತಾ ಕುಂದಾಪುರ
Published 10 ಮೇ 2020, 3:14 IST
Last Updated 10 ಮೇ 2020, 3:14 IST
ಅಬುಧಾಬಿಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯರು (ಸಂಗ್ರಹ ಚಿತ್ರ/ಎಎಫ್‌ಪಿ)
ಅಬುಧಾಬಿಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯರು (ಸಂಗ್ರಹ ಚಿತ್ರ/ಎಎಫ್‌ಪಿ)   

ಉದ್ಯೋಗಕ್ಕೆ, ಇನ್ನಾವುದೋ ಕಾರಣಕ್ಕೆ ಜನ ವಲಸೆ ಹೋಗುವುದು ಹೊಸತಲ್ಲ. ಸಾರಿಗೆ ಸಂಪರ್ಕ ಉತ್ತಮಗೊಳ್ಳುತ್ತಿದ್ದಂತೆ ವಿಶ್ವ ಚಿಕ್ಕದಾಗುತ್ತಾ ಹೋಯಿತು. ವಿಶ್ವದಲ್ಲಿ ಅತೀ ಹೆಚ್ಚು ವಲಸೆ ಹೋದವರು ಭಾರತೀಯರು. ಕೊಲ್ಲಿ ರಾಷ್ಟ್ರಗಳಾದ ಬಹರೇನ್, ಸೌದಿ ಅರೇಬಿಯಾ, ಕತಾರ್, ಓಮಾನ್, ಕುವೈತ್ ಹಾಗೂ ಯುಎಇಯಲ್ಲಿ ಸುಮಾರು 85 ಲಕ್ಷ ಭಾರತೀಯರಿದ್ದಾರೆ.

ಕೊಲ್ಲಿ ರಾಷ್ಟ್ರಗಳ ತೈಲದ ಕಥೆ ರೋಚಕ. 1938ರಲ್ಲಿ ಮೊದಲು ಸೌದಿ ಅರೇಬಿಯಾದಲ್ಲಿ ತೈಲ ನಿಕ್ಷೇಪದ ಸುಳಿವು ಸಿಕ್ಕಿತು, ನಂತರ ಇತರ ಕೊಲ್ಲಿ ರಾಷ್ಟ್ರಗಳಲ್ಲೂ ತೈಲ ನಿಕ್ಷೇಪ ಗೋಚರಿಸಿತು. ತೈಲದ ವಾಸನೆ ಬರುತ್ತಿದ್ದಂತೆ ಅಮೆರಿಕ ಮತ್ತು ಬ್ರಿಟನ್ ಮುಂತಾದ ಪಾಶ್ಚಿಮಾತ್ಯ ರಾಷ್ಟ್ರಗಳು ಪೈಪೋಟಿಯಲ್ಲಿ ಹಣ ಹೂಡಿದವು. ತೈಲದ ನಿಕ್ಷೇಪವು ಅರಬ್ ದೇಶದವರ ದೆಸೆ ಬದಲಿಸಿತು.

ಕೊಲ್ಲಿ ರಾಷ್ಟ್ರಗಳು ಹೊರ ದೇಶದ ಕೆಲಸಗಾರರಿಗೆ ತಮ್ಮ ಬಾಗಿಲು ತೆರೆದವು. ಅಲ್ಲಿ ಭಾರತ, ಶ್ರೀಲಂಕಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಫಿಲಿಪೀನ್ಸ್‌ ದೇಶದವರೇ ಕೊಲ್ಲಿ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ADVERTISEMENT

ಇತರ ದೇಶಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಹೋದವರಿಗೆ ಉದ್ಯೋಗ, ಕೈತುಂಬಾ ಸಂಬಳ ಸಿಕ್ಕಿತು. ಆದರೆ ಅಲ್ಲಿನ ಪೌರತ್ವ ಇಲ್ಲ, ಸ್ಥಿರಾಸ್ತಿ ಖರೀದಿಸುವಂತಿಲ್ಲ, ಸ್ವಂತ ಉದ್ಯೋಗ ಶುರು ಮಾಡುವುದಿದ್ದರೆ ಸ್ಥಳೀಯರ ಸಹಭಾಗಿತ್ವ ಬೇಕು, ಉದ್ಯೋಗ ಹಿಡಿಯಲು, ಉದ್ಯೋಗ ಬದಲಾಯಿಸಲು, ದೇಶಕ್ಕೆ ಬರಲು, ದೇಶ ಬಿಡಲೂ ಉದ್ಯೋಗದಾತನ ಅನುಮತಿ ಬೇಕು. ಈಗೀಗ ಕೆಲವು ಕೊಲ್ಲಿ ರಾಷ್ಟ್ರಗಳಲ್ಲಿ ಈ ನಿಯಮಗಳಲ್ಲಿ ಸಡಿಲಿಕೆ ಕಂಡು ಬರುತ್ತಿದೆ.

ಇಷ್ಟಿದ್ದರೂ ಕೊಲ್ಲಿ ರಾಷ್ಟ್ರಗಳ ಉದ್ಯೋಗ ಆಕರ್ಷಕವಾಗಿತ್ತು. ಆದಾಯ ತೆರಿಗೆ ಇಲ್ಲ. ಅಲ್ಲಿ ಎರಡು ವರುಷ ಕೆಲಸ ಮಾಡಿದರೆ, ದೊಡ್ಡ ಮನೆ ಕಟ್ಟಬಹುದು ಎನ್ನುವಂತಿತ್ತು. ಅರಬ್ ದೇಶದವರಿಗೂ ಕಡಿಮೆ ಸಂಬಳಕ್ಕೆ ಕಷ್ಟಪಟ್ಟು ದುಡಿಯುವ ಭಾರತಿಯರೆಂದರೆ ತುಸು ಹೆಚ್ಚೇ ಪ್ರೀತಿ. ವಲಸಿಗರಿಗೆ ಕೊಲ್ಲಿ ರಾಷ್ಟ್ರದ ಪೌರತ್ವ ಸಿಗದ ಕಾರಣ ಸ್ವದೇಶಕ್ಕೆ ಮರಳುವ ನಿರೀಕ್ಷೆಯಲ್ಲಿ ಗಳಿಸಿದ್ದನ್ನೆಲ್ಲಾ ತಮ್ಮ ದೇಶಕ್ಕೇ ಕಳುಹಿಸಿಕೊಡುವುದರಿಂದ ಹಣವು ದೇಶಕ್ಕೆ ಹರಿದು ಬರುತ್ತಿತ್ತು.

ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಾವಕಾಶ ತೈಲದ ಬೆಲೆಯೊಂದಿಗೆ ಬೆಸೆದುಕೊಂಡಿರುತ್ತದೆ. ತೈಲ ಉತ್ಪಾದನೆ, ರಫ್ತು, ಬೆಲೆ ಎಲ್ಲವೂ ಈಗ ರಾಜಕೀಯ ದಾಳಗಳು. ಎರಡನೆಯ ಮಹಾಯುದ್ಧ ಮುಗಿಯುತ್ತಿದ್ದಂತೆ ವಿಶ್ವದ ಹೆಚ್ಚಿನ ದೇಶಗಳು ತಮ್ಮ ಆರ್ಥಿಕತೆಯನ್ನು ಮೇಲೆತ್ತಲು ಪ್ರಯತ್ನಿಸಿದವು. ಔದ್ಯೋಗೀಕರಣ ಚುರುಕಾಯಿತು. ಇದರೊಂದಿಗೆ ತೈಲದ ‘ಬೇಡಿಕೆ’ ಜಾಸ್ತಿಯಾಯಿತು.

1973ರಲ್ಲಿ ಕೊಲ್ಲಿ ರಾಷ್ಟ್ರಗಳು ಅಮೆರಿಕವನ್ನು ದೂರವಿಟ್ಟಾಗ ತೈಲದ ಬೆಲೆ ಒಮ್ಮೆಗೇ ಏರಿತು. ಕೊಲ್ಲಿ ರಾಷ್ಟ್ರದ ಉದ್ಯೋಗ ಹೊರ ದೇಶದವರನ್ನು ಕೈಬೀಸಿ ಕರೆಯಿತು. 2014-2015ರಲ್ಲಿ ತೈಲದ ಬೆಲೆ ಕುಸಿಯಿತು. 2008ರಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರಲ್ಲಿಗೆ 149 ಡಾಲರ್‌ ಇದ್ದುದು, 2017ರಲ್ಲಿ ಬ್ಯಾರಲ್ಲಿಗೆ 61 ಡಾಲರ್‌ಗೆ ಇಳಿಯಿತು. ಈಗ 16 ಡಾಲರ್‌ಗೆ ಇಳಿದಿದೆ. ತೈಲದ ಬೆಲೆಯೊಂದಿಗೆ ಉದ್ಯೋಗಾವಕಾಶ ಮತ್ತು ವಲಸಿಗರ ಸಂಬಳವೂ ಏರಿಳಿತವಾಗುತ್ತದೆ.

ವಲಸಿಗರ ತೊಂದರೆಗಳು: ಕೊಲ್ಲಿ ರಾಷ್ಟ್ರಗಳಲ್ಲಿ ಸವಲತ್ತುಗಳಿದ್ದರೂ ಸದಾ ಡೋಲಾಯಮಾನದ ಪರಿಸ್ಥಿತಿ. ತೈಲದ ದರ ಏರುತ್ತಿದ್ದಂತೆ ಕಂಪೆನಿಗಳು ಹೊಸ ಪ್ರಾಜೆಕ್ಟ್‌ಗಳನ್ನು ಆರಂಭಿಸಿ, ಕೆಲಸಕ್ಕಾಗಿ ಭಾರತ ಮುಂತಾದ ದೇಶಗಳಿಂದ ಜನರನ್ನು ಒಮ್ಮೆಲೇ ಕರೆಸಿಕೊಳ್ಳುತ್ತವೆ. ತೈಲದ ಬೆಲೆ ಕಡಿಮೆಯಾಗುತ್ತಿದ್ದಂತೆ ಹಣ ಹೂಡುವವರು ಹಿಂಜರಿದು ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಪರಿಣಾಮ ಪ್ರಾಜೆಕ್ಟುಗಳು ಮುಗಿಯುತ್ತಿದ್ದಂತೆ ಕೆಲಸಗಾರರನ್ನು ಒಂದೆರಡು ತಿಂಗಳುಗಳ ನೋಟೀಸು ಕೊಟ್ಟು ಕಳುಹಿಸಲಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿ ‘ಸ್ವದೇಶಿಯರಿಗೆ ಆದ್ಯತೆ’ ಕಾನೂನು ಬಂದಿದೆ. ಅರಬ್ಬರೂ ವಿದ್ಯಾವಂತರಾಗುತ್ತಿದ್ದಾರೆ. ಇದರಿಂದ ಉನ್ನತ ಹುದ್ದೆಗಳು ಅವರ ಪಾಲಿಗಾಗುತ್ತಿವೆ. ಸಂಬಳ, ಭತ್ಯೆ ಸ್ಥಳೀಯರಿಗೆ ಹೆಚ್ಚು, ಬಡ್ತಿಯಲ್ಲಿ ಸ್ಥಳೀಯರಿಗೆ ಆದ್ಯತೆ. ಇದು ಸಹ ವಲಸಿಗರು ಕೊಲ್ಲಿ ರಾಷ್ಟ್ರಗಳ ಉದ್ಯೋಗದಿಂದ ದೂರ ಸರಿಯುವಂತಾಯಿತು.
ಉನ್ನತ ಉದ್ಯೋಗ, ಐಷಾರಾಮದ ಬಂಗಲೆ ಮತ್ತು ದೊಡ್ಡ ಕಾರುಗಳಿರುವ ವಲಸಿಗರಿದ್ದಾರೆ. ಆದರೆ ಎಷ್ಟೋ ಕಂಪನಿಗಳು ಅದರಲ್ಲೂ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಂಪನಿಗಳು ಕಾರ್ಮಿಕರ 7-8 ತಿಂಗಳ ಸಂಬಳ ಬಾಕಿ ಉಳಿಸಿಕೊಂಡಿರುವುದೂ ಇದೆ. ಮನೆ ಕೆಲಸಕ್ಕೆ ಹೋದ ವಲಸಿಗರಿಗೆ ಮಾನಸಿಕ, ದೈಹಿಕ ಕಿರುಕುಳ ಕೊಟ್ಟ ಉದಾಹರಣೆಗಳಿವೆ.

ತೈಲ ದರ ಇಳಿಕೆ ಮತ್ತು ಕೋವಿಡ್ 19: ಕೋವಿಡ್–19 ಕಾರಣದಿಂದ ವಿಶ್ವದ ಆರ್ಥಿಕ ವ್ಯವಸ್ಥೆ ಏಟು ತಿಂದಿತು. ಇದರೊಂದಿಗೆ ತೈಲದ ಬೆಲೆಯೂ ಕುಸಿಯಿತು. ಈಗ ಕೊಲ್ಲಿ ರಾಷ್ಟ್ರಗಳ ಹತ್ತಿರ ಇಟ್ಟುಕೊಳ್ಳಲು ಜಾಗವಿಲ್ಲದಷ್ಟು ತೈಲದ ಸಂಗ್ರಹ ಇದ್ದು ಉತ್ಪಾದನೆ ನಿಲ್ಲುವ ಹಂತಕ್ಕೆ ಬಂದಿದೆ. ತೈಲ ಕೊಳ್ಳುವವರಿಲ್ಲದೆ ಕೊಲ್ಲಿ ರಾಷ್ಟ್ರಗಳು ತತ್ತರಿಸುತ್ತಿವೆ. ಹೊಸ ಪ್ರಾಜೆಕ್ಟುಗಳನ್ನು ಕೈಗೆತ್ತಿಕೊಳ್ಳುವುದಿರಲಿ, ಕೆಲವು ಪ್ರಾಜೆಕ್ಟುಗಳನ್ನು ಅರ್ಧಕ್ಕೇ ನಿಲ್ಲಿಸುವ ಹಂತಕ್ಕೆ ಬಂದಿದೆ. ಇದು ಒಂದೆರಡು ತಿಂಗಳುಗಳಲ್ಲಿ ಸರಿಯಾಗುವ ಪರಿಸ್ಥಿತಿ ಇಲ್ಲ. ಇದರ ನೇರ ಪರಿಣಾಮ ವಲಿಸಿಗರ ಮೇಲೆ ಆಗಿದೆ. ವಲಸಿಗರು ಭಾರಿ ಪ್ರಮಾಣದಲ್ಲಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಲ್ಲವೇ, ಸಂಬಳವಿಲ್ಲದ ದೀರ್ಘಾವಧಿ ರಜೆ ತೆಗೆದುಕೊಳ್ಳುವ ಹಂತದಲ್ಲಿದ್ದಾರೆ.

ಕೆಲವರ ವೀಸಾ ಮುಕ್ತಾಯಗೊಂಡಿದೆ ಅಥವಾ ಮುಕ್ತಾಯದ ಹಂತದಲ್ಲಿದೆ. ಅವರು ದೇಶ ಬಿಡಬೇಕಾದ ಪರಿಸ್ಥಿತಿ ಇದೆ. ಯುಎಇ ಒಂದರಲ್ಲೇ 34 ಲಕ್ಷ ಭಾರತಿಯರಿದ್ದಾರೆ. ಖಾಸಗಿ ಸಂಸ್ಥೆಗಳು ವಲಸಿಗರನ್ನು ಆದಷ್ಟು ಕಡಿಮೆ ಮಾಡಬೇಕೆಂದು ಅಲ್ಲಿನ ಸರ್ಕಾರ ಆಜ್ಞೆ ಹೊರಡಿಸಿದೆ. ಆಜ್ಞೆಯ ಪ್ರಕಾರ, ಒಂದೋ ಹೆಚ್ಚುವರಿ ಕೆಲಸಗಾರರನ್ನು ತೆಗೆಯಬೇಕು; ಅಥವಾ ಅನಿರ್ದಿಷ್ಟಾವದಿ ರಜೆಯ ಮೇಲೆ ಕಳುಹಿಸಬಹುದು. ಹೆಚ್ಚುವರಿ ಕೆಲಸಗಾರರನ್ನು ಇನ್ನೊಂದು ಕಂಪನಿಯೊಂದಿಗೆ ಹಂಚಿಕೊಳ್ಳಬಹುದು. ಅಲ್ಲದೆ ಈ ಸಂಕಷ್ಟದ ಅವಧಿಯಲ್ಲಿ ಕೆಲಸಗಾರರಿಗೆ ಕೊಡಬೇಕಾದ ಸವಲತ್ತುಗಳನ್ನು ಕೊಡಬೇಕು. ಯುಎಇ ಒಂದರಲ್ಲೇ 3-4 ಲಕ್ಷ ಜನರು ಕೆಲಸ ಕಳೆದುಕೊಳ್ಳುವ ನಿರೀಕ್ಷೆ ಇದೆ.

ಕತಾರಿನಲ್ಲಿ ಹೊರಡಿಸಿದ ಸರ್ಕಾರದ ಆಜ್ಞೆಯ ಪ್ರಕಾರ, ಕೊಡಲು ಕೆಲಸ ಇಲ್ಲದ ಪಕ್ಷದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಹುದು. ಆದರೆ ‘ಕತಾರ್ ಲೇಬರ್ ಲಾ’ ಪ್ರಕಾರ ಆ ಪ್ರಕ್ರಿಯೆ ನಡೆಯಬೇಕು. ಉದ್ಯೋಗಿಗಳನ್ನು ಅನಿರ್ದಿಷ್ಟವಾದಿ ರಜೆಯ ಮೇಲೂ ಕಳುಹಿಸಬಹುದು. ಕೆಲಸದಿಂದ ತೆಗೆಯುವ ಬದಲು ಉದ್ಯೋಗಿಗಳು ಒಪ್ಪಿದ ಪಕ್ಷದಲ್ಲಿ ಸಂಬಳವನ್ನು ತಾತ್ಕಾಲಿಕವಾಗಿ ಅಥವ ಶಾಶ್ವತವಾಗಿ ಕಡಿಮೆ ಮಾಡಬಹುದು. ಕೊಲ್ಲಿ ರಾಷ್ಟ್ರಗಳು ಪುನಃ ವಲಸಿಗರಿಗೆ ಉದ್ಯೋಗ ಕೊಡಬೇಕೆಂದರೆ ಪರಿಸ್ಥಿತಿ ಸುಧಾರಿಸಬೇಕು. ಅಂದರೆ ಕೋವಿಡ್–19ರ ಹಾವಳಿ ಇಲ್ಲವಾಗುವುದರೊಂದಿಗೆ ತೈಲದ ದರ ಏರಬೇಕು. ತೈಲದ ದರ ಏರಬೇಕೆಂದರೆ ವಿಶ್ವದ ಆರ್ಥಿಕ ಪರಿಸ್ಥಿತಿ ಏರುಗತಿಯಲ್ಲಿ ಸಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.