ADVERTISEMENT

ಕುವೆಂಪು ಪದ ಸೃಷ್ಟಿ: ಕೆಂಗೊಡಲಿ, ಕೌಟವಿ, ಮರುಸರೋವರ ಪದಗಳ ಅರ್ಥ

ಪ್ರಜಾವಾಣಿ ವಿಶೇಷ
Published 3 ಆಗಸ್ಟ್ 2025, 0:13 IST
Last Updated 3 ಆಗಸ್ಟ್ 2025, 0:13 IST
   
ಕೆಂಗೊಡಲಿ

ಕೆಂಗೊಡಲಿ (ನಾ). (ರಕ್ತದಿಂದ) ಕೆಂಪಾದ ಕೊಡಲಿ.ರಾಮ ಸೀತೆ ಮತ್ತು ಅವನ ಸಹೋದರರು ವಿವಾಹವಾದ ಕನ್ನೆಯರೊಡನೆ ದೊಡ್ಡ ಮೆರವಣಿಗೆಯಲ್ಲಿ ರಾಜಮಾರ್ಗದಲ್ಲಿ ಸಾಗುತ್ತಿದ್ದರು. ಆಗ ಅವರ ಎದುರು ಪರಶುರಾಮ ಬಂದನು. ಅವನ ಭಯಂಕರತೆಯನ್ನು ಕುವೆಂಪು ಅವರು ‘ಕೆಂಗೊಡಲಿ’ ಪದದಿಂದ ಹೀಗೆ ಬಣ್ಣಿಸಿದ್ದಾರೆ:

‘ಭೀಷ್ಮತೆವೆತ್ತು

ರಂಜಿಸಿತು ಹೆಗಲಿನೊಳ್ ಕೆಂಗೊಡಲಿ.’ 

ADVERTISEMENT
ಕೌಟವಿ

ಕೌಟವಿ (ನಾ). (ಆಲಂ). ಬರಿದಾಗು; ಶೂನ್ಯವಾಗು.

ಸೀತೆಯನ್ನು ಹುಡುಕಲು ಹೊರಟ ಸಂಶೊಧನಾ ಕೋವಿದರಾದ ವಾನರರು - ಸೂರ್ಯನ ಕಿರಣಗಳ ಜೊತೆಗೂಡಿ, ಕಣ್ಣಿಗೆ ಕಾಡು ಬರಿದಾಗುವಂತೆ ತಡವಿದರು- ಎಂಬ ಚಿತ್ರಣದಲ್ಲಿ ‘ಕೌಟವಿ’ ಪದವನ್ನು ಆಲಂಕಾರಿಕವಾಗಿ ಹೀಗೆ ಪ್ರಯೋಗಿಸಿದ್ದಾರೆ:

‘ಆ ಕೀಶ

ಸಂಶೋಧನಾ ಕೋವಿದರ್! ತಡವಿದರಹಸ್ಪತಿಯ

ಕದಿರಾಳ್ಗಳಂ ಕೂಡಿ ಪಗಲನೆತ್ತೆತ್ತಲುಂ,

ಕೌಟವಿಯಾಗೆ ಕಣ್ಗಟವಿ’ 

ಮರುಸರೋವರ

ಮರುಸರೋವರ (ನಾ). ಬಿಸಿಲುಗುದುರೆ; ಮರೀಚಿಕೆ

ಸುಗ್ರೀವನಿಗೆ ಮಹಾವಾನರ ಮೈಂದನು ತನ್ನ ಪಡೆಯು ಮರಳುಗಾಡಿನಲ್ಲಿ ಸಿಕ್ಕು ತೊಳಲಾಡಿದ್ದನ್ನು ಹೇಳುವನು. ಅದು ಅವರಿಗೆ ಅಲ್ಲಿ ಉಂಟುಮಾಡಿದ ಬಿಸಿಲುಗುದುರೆಯನ್ನು ಕುವೆಂಪು ‘ಮರುಸರೋವರ’ ಎಂದು ಕರೆದು ಹೀಗೆ ಬಣ್ಣಿಸಿದ್ದಾರೆ:

‘ಕಣ್ ಮೋಹಿಸಿತು ಮನೋಹರಂ ಮರುಸರೋವರಂ’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.