ADVERTISEMENT

ಮಲೆಕುಡಿಯ ಸಮುದಾಯದ ಹುಡುಗನ ಸೋಡಾ ಉದ್ಯಮ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 2:06 IST
Last Updated 1 ಮಾರ್ಚ್ 2026, 2:06 IST
ಇಲ್ಲೇ ತಯಾರಾಗುತ್ತೆ ಬಗೆಬಗೆಯ ಸೋಡಾ
ಇಲ್ಲೇ ತಯಾರಾಗುತ್ತೆ ಬಗೆಬಗೆಯ ಸೋಡಾ   

ನಾವು ಚಾರಣ ಮುಗಿಸಿಕೊಂಡು ಶಿಶಿಲ ಎಂಬ ಗ್ರಾಮದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆವು. ಬೆಟ್ಟದ ಗಾಳಿ ದೇಹಕ್ಕೆ ತಂಪು ಕೊಟ್ಟಿದ್ದರೂ, ಬಾಯಾರಿಕೆ ನೀಗಿರಲಿಲ್ಲ. ಅಲ್ಲೇ ಇದ್ದ ಸಣ್ಣ ಅಂಗಡಿಯತ್ತ ಹೆಜ್ಜೆ ಹಾಕಿದೆವು. ಫ್ರಿಜ್‌ನೊಳಗೆ ಬಹುರಾಷ್ಟ್ರೀಯ ಕಂಪನಿಗಳ ಬಣ್ಣ ಬಣ್ಣದ ತಂಪು ಪಾನೀಯಗಳ ನಡುವೆ ಒಂದು ಹೆಸರು ಕಣ್ಣಿಗೆ ಬಿತ್ತು. ಅದು ‘ಶ್ರೀ ಕೃಷ್ಣ ಗೋಲಿ ಸೋಡಾ’.

ಬಾಟಲಿಯನ್ನು ಕೈಗೆತ್ತಿಕೊಂಡಾಗ ಅದರ ಮೇಲಿದ್ದ ಘೋಷವಾಕ್ಯ ಮನಸ್ಸಿಗೆ ನೇರವಾಗಿ ತಾಕಿತು: ‘ಹಳ್ಳಿ ಹುಡುಗ, ಹಳ್ಳಿ ರೈತ’. ಕುತೂಹಲದಿಂದ ಲಿಂಬು, ಕಿತ್ತಲೆ ಮತ್ತು ಶುಂಠಿ ಸ್ವಾದದ ಸೋಡಾವನ್ನು ತೆಗೆದುಕೊಂಡೆವು. ಗಟಗಟ ಕುಡಿದೆವು. ಕ್ಷಣದಲ್ಲೇ ದಾಹ ಇಂಗಿತು; ರುಚಿ ಮನಸ್ಸು ಗೆದ್ದಿತು. ಅದು ಕೇವಲ ಪಾನೀಯವಲ್ಲ, ಹಳ್ಳಿಯೊಂದರ ಹಂಬಲದ ರುಚಿಯಂತೆ ಅನಿಸಿತು.

ಈ ಬ್ರ್ಯಾಂಡ್‌ನ ರೂವಾರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಗ್ರಾಮದ ಮಲೆಕುಡಿಯರ ಯುವ ರೈತ ಬಾಲಕೃಷ್ಣ.

ADVERTISEMENT

ಯುಟ್ಯೂಬ್‌ನಿಂದ ಉದ್ಯಮದವರೆಗೆ

ಕೃಷಿ ಕೆಲಸದ ಬಿಡುವಿನಲ್ಲಿ ಯುಟ್ಯೂಬ್‌ನಲ್ಲಿ ವಿಡಿಯೊಗಳನ್ನು ವೀಕ್ಷಿಸುತ್ತಿದ್ದಾಗ ಗೋಲಿ ಸೋಡಾ ತಯಾರಿಸುವ ವಿಡಿಯೊ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಅದನ್ನು ಕುತೂಹಲದಿಂದ ನೋಡಿದರು. ಆ ಕ್ಷಣವೇ ಒಂದು ಚಿಂತನೆಯ ಬೀಜ ಬಿತ್ತಿತು– ‘ನಾನೂ ಏಕೆ ಗೋಲಿ ಸೋಡಾ ತಯಾರಿಸಬಾರದು?’

ಈ ಆಲೋಚನೆಯನ್ನು ಅಷ್ಟಕ್ಕೇ ಬಿಡಲಿಲ್ಲ. ಕೂಡಲೇ ಕಾರ್ಯರೂಪಕ್ಕೆ ತಂದರು. ಮರುದಿನವೇ ಮಂಗಳೂರು ಬಸ್ ಏರಿದರು. ನಗರವನ್ನೆಲ್ಲ ಸುತ್ತಾಡಿ ಗೋಲಿ ಸೋಡಾ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯನ್ನು ಹುಡುಕಿ, ತಮ್ಮ ಕನಸನ್ನು ಹಂಚಿಕೊಂಡರು. ಅವರಿಂದ ಮಾರ್ಗದರ್ಶನ ಪಡೆದರು. ಅವರ ಸಲಹೆಯಂತೆ ಸುಧಾರಿತ ಚಿಕ್ಕ ಉಪಕರಣಗಳು, ಸೋಡಾ ಸಿಲಿಂಡರ್‌ಗಳು, ಬಾಟಲಿಗಳನ್ನು ಮಂಗಳೂರು ಮತ್ತು ಕೊಯಮತ್ತೂರಿನಿಂದ ತರಿಸಿ ಎರಡೂವರೆ ವರ್ಷಗಳ ಹಿಂದೆ ಸಣ್ಣಮಟ್ಟಿನಲ್ಲಿ ಗೋಲಿ ಸೋಡಾ ಉದ್ಯಮ ಆರಂಭಿಸಿದರು.

ಅನುಮಾನಗಳ ಮಧ್ಯೆ ಆರಂಭ

ಆದರೆ, ಈ ಸಾಹಸವನ್ನು ಊರಿನ ಕೆಲ ಹಿರಿಯರು ಅನುಮಾನದಿಂದಲೇ ನೋಡಿದರು. ಇದಕ್ಕೆ ಕಾರಣವಿಷ್ಟೆ. ಮಾರುಕಟ್ಟೆಯಲ್ಲಿ ಈಗಾಗಲೇ ಬಹುರಾಷ್ಟ್ರೀಯ ಕಂಪನಿಗಳ ತಂಪುಪಾನೀಯಗಳು ಸಾಮ್ರಾಜ್ಯ ಸ್ಥಾಪಿಸಿವೆ. ಇದೇ ಊರಿನಲ್ಲಿದ್ದ ಗೋಲಿ ಸೋಡಾ ಉದ್ಯಮ ಮೂರು ದಶಕಗಳ ಹಿಂದೆಯೇ ಬಂದ್ ಆಗಿತ್ತು. ಪರಿಸ್ಥಿತಿ ಹೀಗಿರುವಾಗ ‘ಈ ಹುಡುಗನ ಪಾನೀಯ ಮಾರಾಟವಾಗುತ್ತದೆಯೇ’ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆದರೆ ಅನುಮಾನಗಳಿಗಿಂತ ಶ್ರಮ ದೊಡ್ಡದಾಯಿತು. ಶಿಶಿಲದಲ್ಲಿ ಗೋಲಿ ಸೋಡಾ ಮರುಹುಟ್ಟು ಪಡೆಯಿತು.

ಮುಡುಗೇರಿಯ ಘಟ್ಟದಲ್ಲಿ ಹುಟ್ಟಿ ದಕ್ಷಿಣ ಕನ್ನಡದಲ್ಲಿ ಹರಿಯುವ ಕಪಿಲಾ ಹೊಳೆಯ ಸುತ್ತಲಿನ ಶಿಶಿಲ, ಅರಿಸಿನಮಕ್ಕಿ, ಸೌತಡ್ಕ, ಕೊಕ್ಕಡ ಗ್ರಾಮಗಳ ಚಿಲ್ಲರೆ ಅಂಗಡಿಯವರು ಬಾಲಕೃಷ್ಣನಿಗೆ ಬೆಂಬಲ ನೀಡಿದರು. ಸ್ಥಳೀಯರ ಸಹಕಾರವೇ ಈ ಉದ್ಯಮಕ್ಕೆ ಬಲವಾಯಿತು.

ಗೋಲಿ ಸೋಡಾ 

ಇದೇ ಊರಿನಲ್ಲಿ ಹಲವು ವರ್ಷಗಳ ಹಿಂದೆ ಗೋಲಿ ಸೋಡಾವನ್ನು ತಯಾರಿಸುತ್ತಿದ್ದ ಉದ್ದಿಮೆದಾರರೊಬ್ಬರು ತಮ್ಮಲ್ಲಿದ್ದ ಬಾಟಲಿಗಳನ್ನು ಬಾಲಕೃಷ್ಣನಿಗೆ ನೀಡಿದರು. ಅವೆಲ್ಲವೂ ಸೇರಿ ಈಗ ಅವರ ಬಳಿ ಸುಮಾರು ಎರಡೂವರೆ ಸಾವಿರ ಬಾಟಲಿಗಳಿವೆ. ಮೂರು ಬಗೆಯ ಸ್ವಾದಗಳಲ್ಲಿ ಗೋಲಿ ಸೋಡಾ ತಯಾರಿಸಲಾಗುತ್ತಿದೆ. ಬೇಡಿಕೆ ಹೆಚ್ಚಾಗಿದ್ದು ಬಾಟಲಿಗಳ ಕೊರತೆ ಉಂಟಾಗಿದೆ. ಇನ್ನೂ ಸಾವಿರ ಬಾಟಲಿಗಳನ್ನು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಿಂದ ಖರೀದಿಸುವ ಯೋಜನೆಯೂ ಅವರಿಗಿದೆ. ಪಾನೀಯ ತಯಾರಿ, ತುಂಬಿಸುವುದು, ಅಂಗಡಿಗಳಿಗೆ ಪೂರೈಕೆ–ಈ ಎಲ್ಲ ಕೆಲಸಗಳಿಗೆ ನಾಲ್ಕಾರು ಸ್ಥಳೀಯ ಕಾರ್ಮಿಕರು ಕೈಜೋಡಿಸಿದ್ದಾರೆ. ಸಣ್ಣ ಪ್ರಯತ್ನ ಇದೀಗ ಸ್ಥಿರ ಉದ್ಯಮದ ರೂಪ ಪಡೆಯುತ್ತಿದೆ.

ಹಳ್ಳಿಯ ಆತ್ಮವಿಶ್ವಾಸದ ಬುಗ್ಗೆ

ಬಾಲಕೃಷ್ಣ ಅವರನ್ನು ಭೇಟಿಯಾದ ನಂತರ ಶಿಶಿಲದ ಹಿರಿಯರೊಬ್ಬರ ಮಾತು ಮನಸ್ಸಿಗೆ ತಟ್ಟಿತು: ‘ಮಾರುಕಟ್ಟೆಯಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಭರಾಟೆಗೆ ತುಸು ತಡೆ ಹಾಕಲು ಎಲ್ಲ ಕಡೆಯೂ ನಮ್ಮೂರಿನ ಬಾಲಕೃಷ್ಣರಂತವರು ಹುಟ್ಟಿಕೊಳ್ಳಬೇಕು’–ಗೋಲಿ ಸೋಡಾ ದಾಹ ನೀಗಿಸಿದರೆ, ಈ ಮಾತು ಮನಸ್ಸಿಗೆ ತಂಪು ನೀಡಿತು.

ಗೋಲಿ ಸೋಡಾ ಕೇವಲ ತಂಪುಪಾನೀಯವಲ್ಲ. ಅದು ಹಳ್ಳಿಯ ಆತ್ಮವಿಶ್ವಾಸದ ಬುಗ್ಗೆ. ಶಿಶಿಲದ ಇತಿಹಾಸದ ಪುಟಗಳಲ್ಲಿ ಮಸುಕಾಗಿದ್ದ ಒಂದು ಸಿಹಿ ನೆನಪು ಮತ್ತೆ ಜೀವಂತವಾಗಿದೆ. ಬಹುರಾಷ್ಟ್ರೀಯ ಬ್ರ್ಯಾಂಡ್‌ಗಳ ನಡುವೆ, ‘ಹಳ್ಳಿ ಹುಡುಗ’ನ ಕನಸು ಮೈಕೊಡವಿ ಎದ್ದು ನಿಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.