ಗಾಯಿತ್ರಿ ನಾರಾಯಣ್ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದವರು. ನೂರಾರು ಅಂಧರ ಬಾಳಿಗೆ ಬೆಳಕಾಗಿರುವುದು ಅವರ ಹಿರಿಮೆ. ಅವರ ಈ ಸೇವೆಗೆ ಈಗ ರಜತ ವರ್ಷದ ಸಂಭ್ರಮ.
ನೇತ್ರದಾನ, ಅಂಗಾಂಗಗಳ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮೃತದೇಹಗಳಿಂದ 700ಕ್ಕೂ ಹೆಚ್ಚು ನೇತ್ರಗಳನ್ನು ಸಂಗ್ರಹಿಸಿ ವಿವಿಧ ನೇತ್ರ ಕೇಂದ್ರಗಳಿಗೆ ಕಳುಹಿಸಿಕೊಟ್ಟ ತೃಪ್ತಿಯೂ ಅವರಲ್ಲಿದೆ. ವೈದ್ಯರಲ್ಲದಿದ್ದರೂ ಕಣ್ಣು ಬೇರ್ಪಡಿಸುವುದರಲ್ಲಿ ಪರಿಣತಿ ಪಡೆದಿದ್ದಾರೆ. ಕಣ್ಣು ಬೇರ್ಪಡಿಸುವ ತರಬೇತಿ ಪಡೆದ ನಂತರ 200ಕ್ಕೂ ಹೆಚ್ಚು ಮೃತದೇಹಗಳಿಂದ ಕಣ್ಣುಗಳನ್ನು ಹೊರತೆಗೆದು ನೇತ್ರ ಕೇಂದ್ರಗಳಿಗೆ ನೀಡಿದ್ದಾರೆ.
ವರದಾಯಿನಿ ಸೇವಾ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷೆಯೂ ಹೌದು. ಪ್ರಚಾರ, ಪ್ರಶಸ್ತಿಗಳಿಂದ ಅವರು ಬಹುದೂರ. ಟ್ರಸ್ಟ್ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ಯಂತ್ರೋಪಕರಣ, ಬಡ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರ ಕೊಡಿಸಿದ್ದಾರೆ.
ಓದಿರುವುದು ಎಸ್ಸೆಸ್ಸೆಲ್ಸಿವರೆಗಷ್ಟೇ. ಸಾಧನೆಯಲ್ಲಿ ಅವರದು ಎತ್ತರದ ಸ್ಥಾನ. ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ನೇತ್ರದಾನದ ಮಹತ್ವ ಕುರಿತು ಅರಿವು ಮೂಡಿಸುತ್ತಿದ್ದಾರೆ. ಜಿಲ್ಲೆಯಲ್ಲಷ್ಟೇ ಅಲ್ಲದೆ ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ಮಡಕಶಿರಾ ಭಾಗದಲ್ಲೂ ಮೃತರ ಕಣ್ಣುಗಳನ್ನು ಹೊರತೆಗೆದು ನೇತ್ರ ಕೇಂದ್ರಗಳಿಗೆ ರವಾನಿಸಿದ್ದಾರೆ.
ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವಂತೆ ಒತ್ತಾಯಿಸಿ 35 ಸಾವಿರ ಜನರ ಸಹಿ ಸಂಗ್ರಹ ಮಾಡಿ ರಾಜ್ಯಪಾಲರಿಗೆ ಮನವಿ ಕೂಡ ಸಲ್ಲಿಸಿದ್ದಾರೆ.
ಹೆಸರು: ಗಾಯಿತ್ರಿ ನಾರಾಯಣ್
ವೃತ್ತಿ: ಸಮಾಜಸೇವೆ
ಸಾಧನೆ: ನೇತ್ರ, ಅಂಗಾಂಗಗಳ ದಾನ ಕುರಿತು ಜಾಗೃತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.