ಆಧುನಿಕ ಬದುಕಿನ ಜಂಜಡ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಬಿಡಿಸಲಾಗದ ನಂಟು. ನಿರ್ದಿಷ್ಟ ಸಮಯದಲ್ಲಿ ಆಪ್ತ ಸಮಾಲೋಚನೆ ಸಿಗದಿದ್ದರೆ ಕುಟುಂಬಗಳು ಸಂಕಷ್ಟದ ಕುಲುಮೆಯೊಳಗೆ ಬೇಯುವುದರಲ್ಲಿ ಅನುಮಾನವಿಲ್ಲ. ಸಮಸ್ಯೆಯ ಸುಳಿಗೆ ಸಿಲುಕಿದ ಮಹಿಳೆಯರಿಗೆ ಹಲವು ಸಂಘ–ಸಂಸ್ಥೆಗಳು ಊರುಗೋಲಾಗಿವೆ. ಇಂತಹ ಸಂಸ್ಥೆಗಳ ಪೈಕಿ ದೊಡ್ಡಬಳ್ಳಾಪುರದ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯೂ ಒಂದಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೌಟುಂಬಿಕ ಸಮಸ್ಯೆಗೆ ಸಿಲುಕಿದವರು ಮೊದಲು ಈ ಸಂಸ್ಥೆಯ ಬಾಗಿಲು ಬಡಿಯುತ್ತಾರೆ. ಇದರ ಸಂಸ್ಥಾಪಕಿ ಅಮಲಿ ನಾಯಕ್. ಮಾನಸಿಕ ರೋಗಿಗಳು, ಅಂಗವಿಕಲರು, ದೌರ್ಜನ್ಯಕ್ಕೊಳಗಾದ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿರುವ ಅವರ ಸೇವೆಗೆ ಈಗ ಎರಡು ದಶಕದ ಸಂಭ್ರಮ.
ಅಂಗವಿಕಲರು, ಮಹಿಳೆಯರು ಹಾಗೂ ಮಾನಸಿಕ ರೋಗಿಗಳ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅರ್ಹರಿಗೆ ತಲುಪಿಸುವಲ್ಲಿ ಅವರದು ದಣಿವರಿಯದ ಹೋರಾಟ. ದಾನಿಗಳ ನೆರವು ಪಡೆದು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಅಂಗವಿಕಲರು, ಮಾನಸಿಕ ರೋಗಿಗಳಿಗೆ ಅಗತ್ಯ ಪರಿಕರಗಳು, ಮಾತ್ರೆ, ಚಿಕಿತ್ಸೆಗೂ ನೆರವಾಗುತ್ತಾರೆ. ಅವರ ಸೇವೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ಯೂ ಸಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.