ADVERTISEMENT

ಆತ್ಮಶುದ್ಧಿಯ ಪ್ರತೀಕ ಈದುಲ್‌ ಫಿತ್ರ್

ಮಹಮ್ಮದ್ ನೂಮಾನ್
Published 31 ಮೇ 2019, 19:45 IST
Last Updated 31 ಮೇ 2019, 19:45 IST
...
...   

ಮುಸ್ಲಿಮರು ಆಚರಿಸುವ ಹಬ್ಬಗಳು ಎರಡು ಮಾತ್ರ. ರಂಜಾನ್‌ ತಿಂಗಳ ಉಪವಾಸದ ಕೊನೆಯಲ್ಲಿ ಆಚರಿಸುವ ‘ಈದುಲ್ ಫಿತ್ರ್’ ಮತ್ತು ಇಸ್ಲಾಮಿಕ್‌ ಕ್ಯಾಲೆಂಡರಿನ ಕೊನೆಯ ತಿಂಗಳು ದುಲ್‌ ಹಜ್ಜ್‌ 10ರಂದು ಆಚರಿಸುವ ‘ಈದುಲ್‌ ಅಝ್ಹಾ’ ಅಥವಾ ಬಕ್ರೀದ್.

ಇದೀಗ ರಂಜಾನ್‌ ತಿಂಗಳು ಕೊನೆಯ ಹಂತ ತಲುಪಿದ್ದು, ಜಗತ್ತಿನಾದ್ಯಂತ ಮುಸ್ಲಿಮರು ಜೂನ್‌ 5 ಅಥವಾ 6ರಂದು ‘ಈದುಲ್ ಫಿತ್ರ್’ ಆಚರಿಸಲಿದ್ದಾರೆ. ರಂಜಾನ್‌ ತಿಂಗಳ 30 ದಿನಗಳನ್ನು ಉಪವಾಸ, ಪ್ರಾರ್ಥನೆ, ಅಧ್ಯಾತ್ಮದಲ್ಲೇ ಕಳೆದು ಕೊನೆಯಲ್ಲಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವರು.

ಮಸೀದಿ ಅಥವಾ ಈದ್ಗಾಗಳಲ್ಲಿ ನಡೆಯುವ ‘ಈದ್‌ ನಮಾಜ್’ ಈ ಹಬ್ಬದ ಪ್ರಮುಖ ಆಕರ್ಷಣೆ. ಬಡವ–ಶ್ರೀಮಂತ, ಮೇಲು–ಕೀಳೆಂಬ ಭೇದಭಾವಿಲ್ಲದೆ ಸಾಲಾಗಿ ನಿಂತು ಮಾಡುವ ನಮಾಜ್‌ ‘ದೇವನ ಮುಂದೆ ಎಲ್ಲರೂ ಸಮಾನರು’ ಎಂಬ ಸಂದೇಶವನ್ನು ಸಾರುತ್ತದೆ.

ADVERTISEMENT

ಮಸೀದಿಗೆ ಹೋಗುವಾಗ ಹೊಸ ಬಟ್ಟೆ ಧರಿಸಿ, ಸುಗಂಧ ಹಚ್ಚಿಕೊಳ್ಳುವುದು ವಾಡಿಕೆ. ನಮಾಜ್‌ಗೂ ಮುನ್ನ ಸ್ವಲ್ಪ ಹೊತ್ತು ‘ಅಲ್ಲಾಹು ಅಕ್ಬರ್’ (ದೇವರು ದೊಡ್ಡವನು) ಎಂದು ತಕ್ಬೀರ್‌ ಮೊಳಗಿಸಲಾಗುತ್ತದೆ. ಈದ್‌ ನಮಾಜ್‌ ಬಳಿಕ ಖುತ್ಬಾ (ಪ್ರವಚನ) ಇರಲಿದೆ.

ನಮಾಜ್‌ ಹಾಗೂ ಖುತ್ಬಾ ಬಳಿಕ ಎಲ್ಲರೂ ಹಸ್ತಲಾಘವ ಮಾಡಿಕೊಂಡು, ಆಲಿಂಗಿಸಿ ಈದ್‌ ಶುಭಾಶಯ ವಿನಿಮಯ ಮಾಡಿಕೊಳ್ಳುವರು. ಈದ್ ಹಬ್ಬ ಪರಸ್ಪರ ಸಂಬಂಧ, ಬಾಂಧವ್ಯವನ್ನು ಬಲಪಡಿಸುವ ದಿನವಾಗಿದೆ. ಆದ್ದರಿಂದ ಪ್ರಾರ್ಥನೆಯ ಬಳಿಕ ಸಂಬಂಧಿಕರ, ಗೆಳೆಯರ ಮನೆಗೆ ಭೇಟಿ ನೀಡುವರು. ಯೋಗಕ್ಷೇಮ ವಿಚಾರಿಸುವರು. ಹಬ್ಬದ ದಿನ ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸುವರು.

ಫಿತ್ರ್‌ ಝಕಾತ್‌ (ಕಡ್ಡಾಯ ದಾನ): ‘ಈದುಲ್‌ ಫಿತ್ರ್‌’ ಹಬ್ಬದ ದಿನ ಆಹಾರ ಧಾನ್ಯವನ್ನು ಬಡವರಿಗೆ ದಾನವಾಗಿ ಕೊಡಬೇಕು ಎಂದು ಇಸ್ಲಾಂ ಆದೇಶಿಸಿದೆ. ಈದ್‌ ನಮಾಜ್‌ಗಾಗಿ ಮಸೀದಿಗೆ ಹೋಗುವ ಮುನ್ನ ಕಡ್ಡಾಯ ದಾನವನ್ನು ಮಾಡಲೇಬೇಕು. ಅದನ್ನು ‘ಫಿತ್ರ್‌ ಝಕಾತ್‌’ ಎನ್ನುವರು.

ಫಿತ್ರ್‌ ಝಕಾತ್‌ನ ಪ್ರಮಾಣ ಸುಮಾರು ಎರಡೂವರೆ ಕೆ.ಜಿ. ಆಗಿದೆ. ಆಯಾ ಪ್ರದೇಶದ ಜನರು ಸಾಮಾನ್ಯವಾಗಿ ತಿನ್ನುವ ಆಹಾರವನ್ನು (ಅಕ್ಕಿ, ಗೋಧಿ, ಜೋಳ, ಬೇಳೆ) ದಾನದ ರೂಪದಲ್ಲಿ ನೀಡಬೇಕು. ಝಕಾತ್‌ ಪಡೆಯುವವರ ಆಹಾರಪದ್ಧತಿಯನ್ನರಿತು, ಅವರ ಊರಿನ ಆಹಾರಪದ್ಧತಿಯಂತೆಯೇ ಝಕಾತ್‌ ನೀಡಬೇಕು.

ಈ ಝಕಾತ್‌ ಪ್ರತಿಯೊಬ್ಬನ ಮೇಲೂ ಕಡ್ಡಾಯ. ಪ್ರತಿ ಮನೆಯ ಹಿರಿಯರು ಆ ಮನೆಯಲ್ಲಿರುವ ಪ್ರತಿ ಸದಸ್ಯನ ಪರವಾಗಿ
ತಲಾ ಎರಡೂವರೆ ಕೆ.ಜಿ. (ಉದಾ: ಒಂದು ಮನೆಯಲ್ಲಿ 6 ಸದಸ್ಯರಿದ್ದರೆ 15 ಕೆ.ಜಿ.) ಆಹಾರವಸ್ತುವನ್ನು ಬಡವನ ಮನೆಗೆ ತಲುಪಿಸಬೇಕು. ಆ ಬಳಿಕವೇ ಹಬ್ಬದ ಪ್ರಾರ್ಥನೆಗೆ ಮಸೀದಿಗೆ ತೆರಳಬೇಕು.

ತನ್ನ ಮತ್ತು ತನ್ನ ಕುಟುಂಬ ಸದಸ್ಯರ ಆಹಾರ, ಬಟ್ಟೆ ಮತ್ತು ಮೂಲ ಅಗತ್ಯಗಳಿಗಿಂತ ಹೆಚ್ಚು ಸಂಪತ್ತು ಇರುವ ಪ್ರತಿಯೊಬ್ಬ ಮುಸ್ಲಿಮನಿಗೆ ಇದು ಕಡ್ಡಾಯ. ಬಡವರಿಗೂ ಹಬ್ಬದ ಸಂಭ್ರಮ ಆಚರಿಸಲು ಸಾಧ್ಯವಾಗಬೇಕು ಎಂಬುದು ಇದರ ಉದ್ದೇಶ.

ಈದುಲ್ ಫಿತ್ರ್ ಸಮಾನತೆಯನ್ನು ಸಾರುತ್ತದೆ. ಮನುಷ್ಯನು ಕೇವಲ ತನ್ನ ವೈಯಕ್ತಿಕ ಏಳಿಗೆಯಲ್ಲಿ ಸಂತಸಪಡದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತವನ್ನೂ ಬಯಸಬೇಕು ಎಂಬ ಸಂದೇಶವನ್ನು ನೀಡುತ್ತದೆ. ಝಕಾತ್‌ಅನ್ನು (ದಾನ) ಹಬ್ಬದೊಂದಿಗೆ ಜೋಡಿಸಿರುವ ಕ್ರಮದಿಂದಾಗ ಇದು ಬಡವರ ಪಾಲಿನ ಹಬ್ಬ ಎನಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.