ನಾಡಿನ ಹಳ್ಳಿಗಾಡಿನ ಜನಜೀವನದ ನಿಜನೋಟದಿಂದ ಹಿಡಿದು ಈಶಾನ್ಯ ರಾಜ್ಯಗಳ ನೆಲಮೂಲದವರೆಗಿನ ಬದುಕನ್ನು ಕಟ್ಟಿಕೊಟ್ಟಿದೆ ಈ ಕೃತಿ. ನಾಡಿನ ಕೃಷಿ ಬದುಕಿನ ಕಾಳಜಿ, ಜನರ ಮಾತಿನ ಸೊಗಡು, ಜೀವ ವೈವಿಧ್ಯ, ನೀರುನಾಯಿ, ಕಾಡುಪಾಪಗಳ ಕಾಳಜಿ ಎಲ್ಲವನ್ನೂ ಇಲ್ಲಿನ ಬದುಕು ಒಳಗೊಂಡಿದೆ.
ಇಲ್ಲಿ ಹೆಚ್ಚು ಗಮನ ಸೆಳೆಯುವುದು ಲೇಖಕರ ಈಶಾನ್ಯ ರಾಜ್ಯಗಳ ಹಳ್ಳಿಗಾಡಿನ ಸುತ್ತಾಟದ ಕಥನಗಳು. ಸಣ್ಣ–ಪುಟ್ಟವು ಎನಿಸುವ, ಗಮನಕ್ಕೆ ಬಂದೂ ನಿರ್ಲಕ್ಷ್ಯಕ್ಕೆ ಒಳಗಾಗುವ ವಸ್ತುಗಳ ಬಗ್ಗೆ (ಪೊರಕೆ) ಕೊಟ್ಟ ಸಂಶೋಧನಾತ್ಮಕ ವಿವರಗಳು ಹೊಸ ಹೊಳಹನ್ನು ತೆರೆದಿಟ್ಟಿವೆ. ಗಂಧಸಾಲೆ ಘಮಲಿನ ಹಿಂದಿನ ಪಡಿಪಾಟಲುಗಳ ಬಗ್ಗೆಮಾರ್ಮಿಕವಾದ ಬರಹವಿದೆ.ಬೆಲ್ಲಂಪುಲ್ಲಕ್ಕದ ರಂಗಮ್ಮ ಪ್ರತಿ ಹಳ್ಳಿಯಲ್ಲೂ ಕಾಣುವ ಮಾತಿನ ಮಲ್ಲಿ, ಆಪ್ತ ಸಮಾಲೋಚಕಿಯಂತೆ ಕಾಣಿಸುತ್ತಾಳೆ. ದೇಶ ಸುತ್ತುವುದೆಂದರೆ ಬರಿಯ ಒಂದಿಷ್ಟು ಖ್ಯಾತನಾಮ ಸ್ಥಳಗಳನ್ನು ನೋಡುವುದಲ್ಲ. ದೇಶದ ಹಳ್ಳಿಗಳನ್ನು ಸುತ್ತಬೇಕು ಎಂದೂ ಹೇಳಿದಂತಿವೆ. ಈಶಾನ್ಯ ರಾಜ್ಯಗಳ ಮೇಲಿನ ಪೂರ್ವಗ್ರಹಗಳನ್ನು ಬದಲಾಯಿಸುವ ಪ್ರಯತ್ನ ಇಲ್ಲಿ ಆಗಿದೆ. ಉದಾಹರಣೆಗೆ ಈಶಾನ್ಯ ರಾಜ್ಯಗಳೆಂದರೆ ಬರೀ ‘ಡ್ರೈ’, ಜಿರಳೆ ತಿನ್ನುತ್ತಾರೆ, ನಾಗಾಲ್ಯಾಂಡ್ನಲ್ಲಿ ಮಾಂಸಾಹಾರವೇ ಪ್ರಧಾನ, ಬಡತನ, ಹಸಿವು... ಇತ್ಯಾದಿ ಕಲ್ಪನೆಗಳಿಗೆ ಸ್ವಯಂ ಅನುಭವದ ಉತ್ತರ ಕೊಟ್ಟು ಆಲೋಚನೆಯ ದಿಕ್ಕನ್ನೇ ಲೇಖಕರು ಬದಲಾಯಿಸಿದ್ದಾರೆ.
ದೇಶಸುತ್ತಿದ ಲೇಖಕರು 15 ಲೇಖನಗಳ ಗುಚ್ಛವನ್ನು ಕೋಶದಲ್ಲಿ ಕೊಟ್ಟು ಓದಿಸಿದ್ದಾರೆ.
ಕೃತಿ: ಬೆಲ್ಲಂಪುಲ್ಲಕ್ಕ
ಲೇ: ಮಲ್ಲಿಕಾರ್ಜುನ ಹೊಸಪಾಳ್ಯ
ಪ್ರ: ಭೂಮಿ ಬುಕ್ಸ್ ಬೆಂಗಳೂರು
ಸಂ: 9449177628
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.