ADVERTISEMENT

ಪುಸ್ತಕ ವಿಮರ್ಶೆ: ವಿಜ್ಞಾನಿ ಸಿ. ಎನ್‌. ಆರ್‌. ರಾವ್‌ ಆತ್ಮಕಥನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 23:30 IST
Last Updated 4 ನವೆಂಬರ್ 2023, 23:30 IST
ಪುಸ್ತಕದ ಮುಖಪುಟ
ಪುಸ್ತಕದ ಮುಖಪುಟ   

ವಿಶ್ವವಿಖ್ಯಾತ ವಿಜ್ಞಾನಿ, ರಾಸಾಯನ ತಜ್ಞ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರ ಆತ್ಮಕಥನ ‘ವಿಜ್ಞಾನದೊಳಗೊಂದು ಜೀವನ’. ಆರುದಶಕಗಳ ಕಾಲ ರಾಸಾಯನ ವಿಜ್ಞಾನದಲ್ಲಿ, ಅದರಲ್ಲಿಯೂ ‘ಸಾಲಿಡ್‌ ಸ್ಟೇಟ್‌’ ಮತ್ತು ‘ಸ್ಟ್ರಕ್ಚರಲ್‌ ಕೆಮಿಸ್ಟ್ರಿ’ಯಲ್ಲಿ ಕೆಲಸ ಮಾಡಿದ ಸಿ.ಎನ್‌.ಆರ್‌.ರಾವ್‌ ಅವರು ತಮ್ಮ ಬದುಕಿನ ಪಯಣವನ್ನು ಬರೆದುಕೊಂಡಿದ್ದಾರೆ. ಕೃತಿಯಲ್ಲಿ ಏಳು ಅಧ್ಯಾಯಗಳಿದ್ದು, ಪ್ರತಿಯೊಂದರಲ್ಲಿಯೂ ಸಾಕಷ್ಟು ಕುತೂಹಲಕಾರಿ ಸಂಗತಿಗಳಿವೆ.

‘ಶ್ರೇಷ್ಠ ವಿಜ್ಞಾನಿಗಳ ಬಗ್ಗೆ ಕೇಳುವುದರಿಂದ ಹಾಗೂ ಓದುವುದರಿಂದ, ಯು ಜನಾಂಗಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರೇರಣೆ ದೊರೆಕುತ್ತದೆ. ಜೀವನದಲ್ಲಿ ಹಲವಾರು ಅಸಾಧ್ಯ ಅಡೆ–ತಡೆಗಳಿದ್ದಾಗ್ಯೂ ಅದ್ಭುತ ಸಂಶೋಧನೆಗಳನ್ನು ನಡೆಸಿದ ಅನೇಕ ಶ್ರೇಷ್ಠ ವಿಜ್ಞಾನಿಗಳ ಜೀವನ ಚರಿತ್ರೆಯಿಂದ ನಾನು ಸ್ಫೂರ್ತಿ ಪಡೆದಿದ್ದೇನೆ’ ಎಂದು ಸಿ.ಎನ್‌.ಆರ್‌.ರಾವ್‌ ಕೃತಿಯ ಮುನ್ನುಡಿಯಲ್ಲಿ ಹೇಳಿದ್ದಾರೆ.

‘ಏಕೆ ವಿಜ್ಞಾನಿಯಾಗಬೇಕು?’ ಕೃತಿಯ ಮೊದಲ ಅಧ್ಯಾಯ. ನೊಬೆಲ್‌ ಪುರಸ್ಕೃತ ರಸಾಯನ ವಿಜ್ಞಾನಿ ಪಾಲ್‌.ಜೆ.ಕ್ರುಟ್ಜನ್‌, ಭೌತ ವಿಜ್ಞಾನಿ ವಿಟಾಲಿ ಎಲ್‌.ಗಿನ್ಸ್‌ಬರ್ಗ್‌ ಸೇರಿದಂತೆ ಜಗತ್ತಿನ ಕೆಲವು ಪ್ರಖ್ಯಾತ ವಿಜ್ಞಾನಿಗಳ ಬದುಕಿನ ಕಥನವು ತಮ್ಮ ವಿಜ್ಞಾನ ಪಯಣಕ್ಕೆ ಹೇಗೆ ಸ್ಫೂರ್ತಿಯಾಯಿತು ಎಂಬುದನ್ನು ಲೇಖಕರು ಈ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಇದು ವಿಜ್ಞಾನವನ್ನು ಆಯ್ದುಕೊಳ್ಳುವ ಅನೇಕರಿಗೆ ಒಂದು ರೀತಿ ಮಾರ್ಗದರ್ಶಿ ಅಧ್ಯಾಯದಂತಿದೆ.

ADVERTISEMENT

ವಿಜ್ಞಾನ ಎಂದರೇನು? ಅದರ ಅಗತ್ಯವೇನು ಎಂಬುದನ್ನು ಮುಂದಿನ ಅಧ್ಯಾಯದಲ್ಲಿ ವಿವರಿಸಿದ್ದಾರೆ. ವಿಜ್ಞಾನವು ನಮ್ಮ ಬದುಕಿಗೆ ಎಷ್ಟು ಹತ್ತಿರವಾಗಿದೆ ಎಂದು ತಿಳಿಸುವ ಈ ಅಧ್ಯಾಯವು ವಿಜ್ಞಾನವನ್ನು ಕ್ಲಿಷ್ಟವೆಂದು ಭಾವಿಸುವವರಲ್ಲಿಯೂ ವಿಜ್ಞಾನದತ್ತ ಒಲುವು ಮೂಡಿಸುವಂತಿದೆ. ತಮ್ಮ ಬದುಕಿನ ಸಂಶೋಧನೆ ದಿನಗಳು, ಅಧ್ಯಯನ ಮೊದಲಾದ ಮಾಹಿತಿಗಳಿಂದ ಕೂಡಿದ, ಯುವ ಪೀಳಿಗೆಯ ವಿಜ್ಞಾನ ವಿದ್ಯಾರ್ಥಿಗಳಿಗೆ, ಅಧ್ಯಯನ ಆಸಕ್ತರಿಗೆ ದಿಕ್ಸೂಚಿಯಾಗಬಲ್ಲ ಕೃತಿಯನ್ನು ಡಾ.ಎಂ.ಎಸ್‌.ಎಸ್‌.ಮೂರ್ತಿಯವರು ಸರಳವಾಗಿ, ಸೊಗಸಾಗಿ ಅನುವಾದಿಸಿದ್ದಾರೆ.

ವಿಜ್ಞಾನದೊಳಗೊಂದು ಜೀವನ

ಲೇ: ಪ್ರೊ.ಸಿ.ಎನ್‌.ಆರ್‌.ರಾವ್‌

ಕನ್ನಡಕ್ಕೆ: ಡಾ.ಎಂ.ಎಸ್‌.ಎಸ್‌.ಮೂರ್ತಿ

ಪ್ರ: ನವಕರ್ನಾಟಕ ಪ್ರಕಾಶನ

ಸಂ: 08022161900

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.