ಕಲಾವಿದರಾಗಿ, ಕಲಾ ವಿಮರ್ಶಕರಾಗಿರುವ ಗಿರಿಧರ ಖಾಸನೀಸ್ ಅವರ ಚೊಚ್ಚಲ ಕೃತಿ ಇದಾಗಿದೆ. ಅನುಭವ, ಅನುಭಾವಗಳ ಗುಚ್ಛದಂತೆ ತೋರುವ ಸಣ್ಣಕಥೆಗಳು, ಗಪದ್ಯಗಳ ಹೆಣಿಗೆಯನ್ನು ಇಲ್ಲಿ ಕಾಣಬಹುದು.
‘ಯಾರಿಗೆ ಯಾರುಂಟು’, ‘ಜಟಿಲ ಕಾನನದ ಕುಟಿಲ ಪಥಗಳಲಿ’ ಹಾಗೂ ‘ನೀ ಮಾಯೆಯೊಳಗೋ’ ಎಂಬ ಮೂರು ಭಾಗಗಳಲ್ಲಿ ತಮ್ಮ ಬರವಣಿಗೆಯನ್ನು ಈ ಕೃತಿಯಲ್ಲಿ ಲೇಖಕರು ವಿಂಗಡಿಸಿದ್ದಾರೆ. ಒಂದು ರೀತಿಯಲ್ಲಿ ‘ಹೈಕು’ಗಳಂತೆ ಕಾಣುವ ಇಲ್ಲಿನ ಬರವಣಿಗೆಯೊಳಗಿನ ಅರ್ಥದ ಗಾತ್ರ ಹಿರಿದು.
ಕೃತಿಯ ಶೀರ್ಷಿಕೆ ಹೊತ್ತ ‘ಎಲ್ಲಿಂದಲೋ ಹಾರಿ ಬಂದು’ ಇದಕ್ಕೆ ನಿದರ್ಶನ. ಇಲ್ಲಿ ಹೈಕು ಬರೆಯಲೆಂದೇ ಕುಳಿತ ಲೇಖಕನಿಗೆ ಗುಬ್ಬಕ್ಕ ಕೇಳುವ ಪ್ರಶ್ನೆಯೊಂದನ್ನಿಟ್ಟುಕೊಂಡು ಜಗತ್ತಿನ ವಾಸ್ತವ ಸ್ಥಿತಿಯನ್ನು ಉಲ್ಲೇಖಿಸುವಂತೆ ತೋರುತ್ತದೆ. ಪಕ್ಕದ ಮನೆ ಹುಡುಗಿ, ಹೇಳಿ ಮಿ.ಮಾರ್ಕಂಡೇಯ, ಮಂಗಳವಾರ ಮಧ್ಯಾಹ್ನದ ಶೋ, ಚಂಡಮಾರುತದ ಮುನ್ಸೂಚನೆ, ನೀನು ನನ್ನನ್ನು ಕೊಲ್ಲಬೇಕು...ಹೀಗೆ ಒಂದೊಂದು ಸಣ್ಣಕಥೆ, ಗಪದ್ಯಗಳೂ ಭಿನ್ನ ವಿಷಯವನ್ನು ಇಟ್ಟುಕೊಂಡು ಹೆಣೆದ ಆಳವಾದ ಅರ್ಥವುಳ್ಳ ಬರವಣಿಗೆಗಳಾಗಿವೆ. ಅವುಗಳ ಒಳನೋಟ ಹಲವು. ಈ ರಚನೆಗಳನ್ನು ಸಾಹಿತ್ಯದ ಒಂದು ಪ್ರಕಾರಕ್ಕೆ ಸೇರಿಸುವುದು ಅಸಾಧ್ಯ. ಶೀರ್ಷಿಕೆಯೇ ರಚನೆಗಳ ಭಾಗವಾಗಿರುವ ಭಿನ್ನ ಪ್ರಯೋಗ, ನವಿರಾದ ಹಾಸ್ಯ, ಅನಿರೀಕ್ಷಿತ ಅಂತ್ಯ ಈ ರಚನೆಗಳ ವಿಶೇಷತೆ.
ಎಲ್ಲಿಂದಲೋ ಹಾರಿ ಬಂದು
ಲೇ: ಗಿರಿಧರ್ ಖಾಸನೀಸ್
ಪ್ರ: ನವಕರ್ನಾಟಕ ಪ್ರಕಾಶನ
ಸಂ: 080–22161900
ಪುಟ: 160
ದರ: 195
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.