ADVERTISEMENT

ಗ್ರಂಥಲಕ್ಷ್ಮೀ: ಶ್ರೇಷ್ಠ ಗ್ರಂಥಪಾಲಕನ ಸಂಸ್ಮರಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 6:40 IST
Last Updated 25 ಸೆಪ್ಟೆಂಬರ್ 2021, 6:40 IST

ಗ್ರಂಥಪಾಲಕರಾಗಿ, ಗ್ರಂಥಾಲಯ ಅಧಿಕಾರಿಯಾಗಿ ‘ನುಡಿ ಸೇವೆ’ ಮಾಡಿದ ಎಸ್‌.ಎನ್‌. ಲಕ್ಷ್ಮೀನಾರಾಯಣ ಅವರ ಸಂಸ್ಮರಣಾ ಗ್ರಂಥ ‘ಗ್ರಂಥಲಕ್ಷ್ಮೀ’. ಅಭಿನಂದನಾ ಗ್ರಂಥವಾಗಿ ರೂಪುಗೊಳ್ಳುತ್ತಿದ್ದ ಈ ಕೃತಿ, ಆ ಹಂತದಲ್ಲಿ ಲಕ್ಷ್ಮೀನಾರಾಯಣ ಅವರ ಅಗಲಿಕೆಯಿಂದಾಗಿ ಸಂಸ್ಮರಣಾ ಗ್ರಂಥದ ಸ್ವರೂಪ ತಾಳಿ, ಓದುಗರ ಕೈಸೇರಿದೆ. ಗ್ರಂಥಾಲಯ ಅಧಿಕಾರಿಯ ಸಂಸ್ಮರಣೆ ಗ್ರಂಥ ಇದಾಗಿದ್ದರಿಂದ ಸಹಜವಾಗಿಯೇ ಇಲ್ಲಿ ಪುಸ್ತಕ ಪ್ರಪಂಚವೇ ಅನಾವರಣಗೊಂಡಿದೆ. ಲಕ್ಷ್ಮೀನಾರಾಯಣ ಅವರ ಕಾರ್ಯದಕ್ಷತೆಯಿಂದ ಗ್ರಂಥಾಲಯಗಳು ಹೇಗೆ ಓದುಗಸ್ನೇಹಿಯಾಗಿ ಮಾರ್ಪಟ್ಟವು ಎನ್ನುವುದರ ಚಿತ್ರಣವನ್ನು ಇಲ್ಲಿನ ಲೇಖನಗಳು ಸವಿವರವಾಗಿ ಕಟ್ಟಿಕೊಟ್ಟಿವೆ. ಅಧ್ಯಾಪಕರು, ವಿದ್ಯಾರ್ಥಿಗಳ ಜ್ಞಾನದ ಹಸಿವು ನೀಗಿಸಲು ಅವರು ಹೇಗೆ ಪರಿಶ್ರಮ ಹಾಕುತ್ತಿದ್ದರು ಎನ್ನುವ ಸಂಗತಿ ಇಲ್ಲಿನ ಪ್ರತೀ ಬರಹದಲ್ಲಿ ದಾಖಲಾಗಿದೆ. ಸ್ವಯಂಬಂಧ, ವ್ಯಕ್ತಿಬಂಧ, ಗ್ರಂಥಬಂಧ ಹಾಗೂ ಸಂಕೀರ್ಣ ಬಂಧ– ಹೀಗೆ ಈ ಕೃತಿಯ ಲೇಖನಗಳನ್ನು ನಾಲ್ಕು ಸ್ಥೂಲ ಭಾಗಗಳಲ್ಲಿ ವಿಂಗಡಿಸಲಾಗಿದೆ. ಅಗಲಿಕೆಯ ಮುನ್ನ ಲಕ್ಷ್ಮೀನಾರಾಯಣ ಅವರು ಬರೆದ ಅಪರೂಪದ ಸ್ವ–ದರ್ಶನ ಬರಹವನ್ನೂ ಇಲ್ಲಿನ ಲೇಖನ ಮಾಲೆಯಲ್ಲಿ ಪೋಣಿಸಲಾಗಿದೆ. ಗ್ರಂಥಾಲಯ ಸಂಬಂಧವಾದ ಕಾರ್ಯಕಲಾಪದ ಎಷ್ಟೋ ಸಂಗತಿಗಳನ್ನು ವಸ್ತುನಿಷ್ಠವಾಗಿ ಅವರು ಓದುಗರ ಮುಂದಿಟ್ಟಿದ್ದಾರೆ. ಈ ಗ್ರಂಥಾಲಯ ಅಧಿಕಾರಿಯ ಗ್ರಂಥಪ್ರೀತಿ, ಜ್ಞಾನಶೀಲತೆ ಹಾಗೂ ಶಿಸ್ತಿನ ವ್ಯಕ್ತಿತ್ವವನ್ನು ಅವರನ್ನು ಹತ್ತಿರದಿಂದ ಬಲ್ಲವರು ಕಂಡರಿಸಿದ್ದಾರೆ. ಸಂಸ್ಮರಣೆ ನೆಪದಲ್ಲಿ ಗ್ರಂಥಾಲಯದ ನಾನಾ ಮಗ್ಗಲುಗಳ ಕುರಿತು ಚರ್ಚಿಸಿದ ಬರಹಗಳು ಇದರಲ್ಲಿದ್ದು, ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.

ಗ್ರಂಥಲಕ್ಷ್ಮೀ
ಎಸ್‌.ಎನ್‌. ಲಕ್ಷ್ಮೀನಾರಾಯಣ ಅವರ ಸಂಸ್ಮರಣ ಗ್ರಂಥ
ಪ್ರಧಾನ ಸಂಪಾದಕ: ಡಾ. ಸಿ.ಪಿ. ಕೃಷ್ಣಕುಮಾರ್‌
ಸಂಪಾದಕ: ಡಾ. ಎಸ್‌.ಟಿ. ರಾಮಚಂದ್ರ
ಪ್ರ: ಮಾನಸ ಪ್ರಕಾಶನ
ಸಂ: 9945988388
ಪುಟಗಳು: 296 ಬೆಲೆ: 25

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT