
ಲೇಖಕಿಯ ಬಾಲ್ಯದ ನೆನಪು ಕಾಡಿನೊಂದಿಗೆ ಅನಾವರಣ ಆಗುತ್ತ ಹೋಗುತ್ತದೆ. ಕಾಡು ಕಾಡುವ ಪರಿ ಕೇವಲ ಕಾಡಿಗಷ್ಟೇ ಅಲ್ಲ, ಕಾಡಿಗಂಟಿಕೊಂಡಿದ್ದ ನಾಡು ಮತ್ತು ಜೀವನಾಡಿಯಾಗಿದ್ದ ನದಿಗಳ ಸುತ್ತಲೂ ನೆನಪಿನ ಸುಳಿ ಗಿರಕಿಹೊಡೆಯುತ್ತದೆ. ಒಂದೊಂದು ಪ್ರಸಂಗವೂ ಬದುಕಿನ ಒಂದು ಮಜಲನ್ನು ತೆರೆದುಕೊಳ್ಳುತ್ತ ಹೋದಂತೆ ನಗರೀಕರಣ ಕಾಡಿನಂಚಿನ ಜೀವಿಗಳ ಜೀವಗಳ ನಡುವಿನ ಸಂಘರ್ಷವನ್ನೂ ಬಿಚ್ಚಿಡುತ್ತ ಹೋಗುತ್ತದೆ. ಪುಸ್ತಕದ ಬಲುದೊಡ್ಡ ಶಕ್ತಿ ಲೇಖಕಿಯ ಭಾಷೆ. ಪತ್ರಕರ್ತೆಯಾಗಿದ್ದ ರೇಖಾ ಪತ್ರಕರ್ತರಂತೆಯೇ ಹೇಳಬೇಕಿರುವುದನ್ನು ಚಿಕ್ಕದಾಗಿ, ಚೊಕ್ಕದಾಗಿ ಹೇಳುತ್ತ ಹೋಗುತ್ತಾರೆ. ಆದರೆ ಬರವಣಿಗೆ ಓದುಗರನ್ನು ಆರ್ದ್ರಗೊಳಿಸುವುದು ಅವರ ಭಾಷೆಯಿಂದ.
ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಚಿಗರೆ, ಜೇನು, ಕರಡಿ, ಹುಲಿ, ಹಸು, ಕರ, ಆನೆ ಜೊತೆಗೆ ಲೇಖಕಿಯ ಕುಟುಂಬದ ಬದುಕು, ಬವಣೆ ಎಲ್ಲವೂ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಕಾಡು ಆಕರ್ಷಿಸುತ್ತ ಹೋದರೂ ಮನದೊಳಗೆ ಆತಂಕವನ್ನೂ ಸೃಷ್ಟಿಸುತ್ತ ಹೋಗುತ್ತದೆ. ಹುಲಿಗೆ ಬಲಿಯಾಗುವ ಹಸುವಿನ ಸನ್ನಿವೇಶ ಓದುವಾಗಲಂತೂ ಭಾವುಕರಾಗುತ್ತೇವೆ. ನಮ್ಮ ಪರಿಸರ; ನಮ್ಮ ಊರು, ನಮ್ಮೊಳಗೆ ನೆನಪೂರಿ, ನೆನಪಿನ ಮರದ ಮೇಲಿನ ಮಳೆ ಹನಿ ಉದುರಿಸಿದಂತಿದೆ ಪುಸ್ತಕ. ಪ್ರತಿ ಅಧ್ಯಾಯದ ಕೊನೆಯಲ್ಲಿ ಬರುವ ಮಾತು ಚಿಂತನೆಗೆ ಹಚ್ಚುತ್ತವೆ. ಒಂದೆರಡು ಕ್ಷಣ ಪುಸ್ತಕ ಎದೆಮೇಲೆ ವಿರಮಿಸುವಂತೆ ಮಾಡುತ್ತವೆ. ಮತ್ತು ಆ ಮಾತುಗಳು ನಮ್ಮಲ್ಲಿ ಒಂದು ವಿಷಾದವನ್ನೂ, ಕೆಲವೊಮ್ಮೆ ಆಶಾಭಾವವನ್ನೂ ತುಂಬುತ್ತವೆ. ಜೊತೆಗೆ ಮುಂದಿನ ಅಧ್ಯಾಯ ಓದುವಂತೆ ಮಾಡುತ್ತದೆ.
ಕಾಡು ಕಾಡ್ತು
ಲೇ: ರೇಖಾ ಹೆಗಡೆ ಬಾಳೇಸರ
ಪ್ರ: ಬಹುರೂಪಿ
ಸಂ: 7019182729
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.