ಹಲವು ಶತಮಾನಗಳಿಂದ ಹಂದಿಯನ್ನೇ ನೆಚ್ಚಿಕೊಂಡು ಹಂದಿಜೋಗಿ ಸಮುದಾಯ ಬದುಕುತ್ತಿದೆ. ಅವರು ಏಕಕಾಲಕ್ಕೆ ದಲಿತರೂ ಹೌದು. ಅಲೆಮಾರಿಗಳೂ ಹೌದು. ವಿಮುಕ್ತ ಕೂಡ ಬುಡಕಟ್ಟು ಹೌದು. ಸಾಮಾಜಿಕ ಸ್ಥಿತ್ಯಂತರದ ನಡುವೆಯೇ ಈ ಸಮುದಾಯ ಈಗೀಗ ಒಂದೆಡೆ ನೆಲೆನಿಲ್ಲಲು ಆರಂಭಿಸಿದೆ. ಈ ಜನಾಂಗದಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆ. ಆದರೆ, ಮೊದಲ ತಲೆಮಾರಿನ ಅಕ್ಷರಸ್ಥರು ಸಮಾಜದ ಮುಖ್ಯವಾಹಿನಿಗೆ ಬರಲು ಹಾತೊರೆಯುತ್ತಿರುವುದು ದಿಟ.
ದಿನೇಶ್ ಕುಮಾರ್ ಎಸ್.ಸಿ. ಬರೆದಿರುವ ಈ ಹೊತ್ತಿಗೆ ಹಂದಿಜೋಗಿಗಳ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ.
ಈ ಅಲಕ್ಷಿತ ಸಮುದಾಯದ ಬವಣೆ, ಬೇಡಿಕೆಗಳು, ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಕುರಿತು ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.
ಎಚ್. ಡುಂಡಿರಾಜ್ ಅವರ ಭಾಷೆಯಲ್ಲಿ ಪ್ರಾಸಾನು ಪ್ರಾಸಗಳ ಅನಿರೀಕ್ಷಿತ ತಿರುವುಗಳು ಉಂಟು. ಅರ್ಥ ಮತ್ತು ಅಪಾರ್ಥಗಳ ಕಣ್ಣಾಮುಚ್ಚಾಲೆಯೂ ಉಂಟು. ಶಬ್ದಗಳ ಹತ್ತಿರ ಬರುತ್ತಾ, ದೂರ ಸರಿಯುತ್ತಾ ಹೊಸ ಅರ್ಥಗಳನ್ನು ತೇಲಿಸುವ ಪರಿ ಅವರಿಗೆ ಕರಗತ.
ಅವರ ಹನಿಗವನಗಳ ಹಿಂದೆ ಸಮಾಜಮುಖಿ ಆಶಯವೂ ಇದೆ. ಹಾಗಾಗಿಯೇ, ಅವರ ವಕ್ರೋಕ್ತಿ ವಿಲಾಸವು ಎಷ್ಟು ಸವೆದರೂ ಸವೆಯುವುದಿಲ್ಲ. ‘ಹನಿ ಮಾರ್ದನಿ‘ ಅವರ 21ನೇ ಕೃತಿ. ಬದುಕಿನ ಅರ್ಥಕ್ಕೆ ಅವರ ಹನಿಗವಿತೆಗಳು ಕನ್ನಡಿ ಹಿಡಿಯುತ್ತವೆ. ಶಬ್ದಮಾಲಿನ್ಯ/ಮಿತಿ ಮಿತಿಮೀರಿದರೆ/ ಪರಿಸರಕ್ಕೆ ಅಪಾಯ/ ಆದ್ದರಿಂದಲೇ / ಪತ್ನಿಯ ಮುಂದೆ/ ತೆಪ್ಪಗಿರುತ್ತಾನೆ/ ಪತಿರಾಯ –ಪುಸ್ತಕದಲ್ಲಿರುವ ಇಂತಹ ಹನಿಗವನಗಳು ಓದುಗರಿಗೆ ನಗುವಿನ ಕಚಗುಳಿ ಇಡುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.