ಇದು ಶ್ರೀ ಅರವಿಂದರ ಮಹಾಕಾವ್ಯ. ಇದನ್ನು ಲೇಖಕ ಡಾ. ಆರ್.ಕೆ. ಕುಲಕರ್ಣಿ ಅವರು ಕನ್ನಡಕ್ಕೆ ತಂದಿದ್ದಾರೆ. ಮೂಲಗ್ರಂಥ ಇಂಗ್ಲಿಷ್ನಲ್ಲಿ ಏಳನೂರು ಪುಟಕ್ಕೂ ಹೆಚ್ಚಿರುವ ಉದ್ಗ್ರಂಥವಾಗಿದೆ. ಮೂಲ ಕಥೆಗೆ ಒಂದಿನಿದು ಊನವಾಗದಂತೆ ಲೇಖಕರು ಕನ್ನಡಕ್ಕೆ ಸಂಕ್ಷಿಪ್ತವಾಗಿ ತಂದಿದ್ದಾರೆ. ಗುರುಲಿಂಗ ಕಾಪಸೆ ಅವರು ಮುನ್ನುಡಿಯಲ್ಲಿ ಹೇಳಿರುವಂತೆ ‘ಇದನ್ನು ಬರೀ ಅನುವಾದ ಎನ್ನುವುದು ಸೂಕ್ತವೆನಿಸುವುದಿಲ್ಲ. ಈ ಅನುವಾದವೂ ಇಂದು ಸೃಷ್ಟಿಯೇ. ಇಂಗ್ಲಿಷಿನಲ್ಲಿ ಹೇಳುವುದಾದರೆ ಟ್ರಾನ್ಸ್ –ಕ್ರಿಯೇಷನ್ ಅನ್ನಬಹುದು’ ಎಂಬ ಮಾತನ್ನು ಈ ಕೃತಿ ಓದಿದಾಗ ನಿರ್ವಿವಾದದಿಂದ ಒಪ್ಪಿಗೆಯಾಗುತ್ತದೆ.
ಈ ಮಹಾಕಾವ್ಯದ ಕೇಂದ್ರಬಿಂದು ‘ಸಾವಿತ್ರಿ’ ಮದ್ರ ದೇಶದ ಅರಸ ಅಶ್ವಪತಿಯ ಮಗಳು. ಅಶ್ವಪತಿ ಹದಿನೆಂಟು ವರ್ಷ ಕಠೋರ ತಪಸ್ಸು ಮಾಡಿ ಮಹಾಯೋಗಿ ಅನಿಸಿಕೊಂಡವನು. ಇಂತಹ ಮಹಾಯೋಗಿಯ ತಪಸ್ಸಿನ ಫಲವಾಗಿ ಜನಿಸಿದ ಮಗಳು ಪ್ರಾಯಕ್ಕೆ ಬಂದ ಮೇಲೆ ಬಾಳಸಂಗಾತಿ ಆಗುವವನನ್ನು ತಾನೆ ಅರಸುತ್ತಾ ಹೊರಡುತ್ತಾಳೆ. ಅವಳು ದಾರಿಯಲ್ಲಿ ಕಾಣುವ ಪ್ರತಿಯೊಂದು ಕಾವ್ಯದಲ್ಲಿ ಅಡಕಗೊಂಡಿದೆ. ಶಾಲ್ವ ದೇಶದ ರಾಜ ದ್ಯುಮತ್ಸೇನನ ಮಗಸತ್ಯವಾನನನ್ನು ಸಾವಿತ್ರಿ ಭೇಟಿಯಾಗುವುದು, ಈ ಇಬ್ಬರ ಪ್ರೇಮ– ಸಲ್ಲಾಪ ಹಾಗೂ ಮೃತ್ಯು ಗೆದ್ದು ಅಮರತ್ವ ಸಂಪಾದಿಸುವುದನ್ನು ಲೇಖಕರು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಸಾವನ್ನು ಗೆಲ್ಲುವ ಸಮಸ್ಯೆಯು ಈ ಕಥೆಯ ಕೇಂದ್ರವಸ್ತುವಾಗಿದೆ. ಸಾವಿತ್ರಿ, ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾಳೆ, ಆತ್ಮೋನ್ನತಿಯಿಂದ ಅಮರತ್ವ ಪಡೆಯುವ ಮಾರ್ಗವನ್ನು ಮನುಕುಲಕ್ಕೆ ಹೇಗೆ ತೋರಿಸಿಕೊಟ್ಟಳು ಎಂಬುದನ್ನು ಈ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಇದರಲ್ಲಿ ಅಧ್ಯಾತ್ಮ ಸೌಂದರ್ಯ ಪ್ರಮುಖವಾಗಿ ಎದ್ದುಕಂಡರೆ, ಉಳಿದೆಲ್ಲವೂ ಅನುಷಂಗಿಕವಾಗಿ ಕಾಣಿಸುತ್ತವೆ.ಓದುಗನಿಗೂ ಅಧ್ಯಾತ್ಮ ಸೌಂದರ್ಯದ ಆಸ್ವಾದಖಂಡಿತ ದಕ್ಕುತ್ತದೆ.
ಸಾವಿತ್ರಿ
ಪುಟ: 250
ಬೆಲೆ: ₹260
ಲೇ: ಕನ್ನಡಕ್ಕೆಡಾ.ಆರ್.ಕೆ. ಕುಲಕರ್ಣಿ
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ
ಮೊ: 94810 42400
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.