ವಾರಸುದಾರಾ (ನಾಟಕ)
ಲೇ: ಜಯರಾಮ್ ರಾಯಪುರ
ಪ್ರ: ಸಮಾಜಮುಖಿ ಪ್ರಕಾಶನ, ಬೆಂಗಳೂರು
ಮಹಾಭಾರತದ ದಾಯಾದಿ ಕಲಹಕ್ಕೆ ಹತ್ತಿರವೆನಿಸಬಹುದಾದ ಘಟನೆಯೇ ಮೊಗಲ್ ಸಾಮ್ರಾಜ್ಯದಲ್ಲೂ ನಡೆದಿರುವುದು ಚರಿತ್ರೆ. ಮೊಗಲರ ರಾಜ ಶಹಜಹಾನನ ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರ ಮಧ್ಯೆ ನಡೆದ ಕಲಹದ ಚಿತ್ರಣವೇ ‘ವಾರಸುದಾರಾ’ ನಾಟಕ.
ಶಹಜಹಾನನ ಮೊದಲ ಮಗ ದಾರಾ ಶಿಕೋಹ್ಗೆ ಗದ್ದುಗೆ ದೊರಕಬೇಕೋ ಅಥವಾ ಕುಟುಂಬದ ಬೇರೆ ವೀರ, ಚತುರನೊಬ್ಬನಿಗೆ ಸಿಗಬೇಕೋ ಅನ್ನುವ ಜಿಜ್ಞಾಸೆ ಇಲ್ಲಿ ಚರ್ಚೆಗೊಳಗಾಗುತ್ತಲೇ ಇರುತ್ತದೆ. ಕೊನೆಗೂ ಬುದ್ಧಿವಂತ ನಾಯಕತ್ವಕ್ಕೆ ಜಯವಾಗುತ್ತದೆ. ಈ ಜಯ ನಿರ್ಣಾಯಕವಾಗಬೇಕಾದರೆ ಅರಸೊತ್ತಿಗೆಗೆ ಅಧೀನರಾಗಿರುವವರು ಈ ಸಹೋದರರಿಗೆ ಸೇರಿದ ಒಂದೊಂದು ಬಣದಲ್ಲಿ ಗುರುತಿಸಿಕೊಂಡು ಕಾದಾಡುತ್ತಾರೆ. ಆ ಪ್ರಸಂಗಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವಾಗಿದೆ ಈ ನಾಟಕ.
ಧರ್ಮ ಜಿಜ್ಞಾಸೆಯನ್ನೂ ಸರ್ವಧರ್ಮಗಳ ಚಿಂತನೆಯನ್ನೂ ರಾಜನೀತಿಯ ವ್ಯಾವಹಾರಿಕತೆಯನ್ನೂ ಚರ್ಚಿಸುತ್ತಾ ಸಾಗಿದೆ ‘ವಾರಸುದಾರಾ’. ಈ ಚರ್ಚೆಯ ಹೊತ್ತಿನಲ್ಲಿ ನಡೆಯುವ ಸನ್ನಿವೇಶಗಳು ದಾರಾ ಶಿಕೋಹ್ ಅತಿ ಉದಾರಿ ಮಾತ್ರವಲ್ಲ, ಹುಂಬನನ್ನಾಗಿಯೂ ಕಾಣಿಸುತ್ತವೆ. ಮುಸ್ಲಿಂ ಅರಸರ ರಾಜನೀತಿ, ಧರ್ಮಸೂಕ್ಷ್ಮತೆ ಹಾಗೂ ಇತರ ಧರ್ಮಗಳ ಸಾರವನ್ನು ದಾರಾ ಶಿಕೋಹ್ ಮತ್ತು ಸೈಯದ್ ಸರ್ಮದ್ ಪಾತ್ರಗಳು ಇಲ್ಲಿ ವಿವರವಾಗಿ ಚರ್ಚಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.