ಕಲಾಕ್ಷಿತಿ ಕಲಾ ಶಾಲೆಯ ಆಶ್ರಯದಲ್ಲಿ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸುಚಿತ್ರ ದಿವಾಕರ್ ಅವರ ಭರತನಾಟ್ಯ ರಂಗಪ್ರವೇಶ ನಡೆಯಿತು.
ಎಂ.ಆರ್. ಕೃಷ್ಣಮೂರ್ತಿ ಅವರ ಬಳಿ 8 ವರ್ಷದವರಿದ್ದಾಗಲೇ ನೃತ್ಯಾಭ್ಯಾಸ ಆರಂಭಿಸಿದ ಸುಚಿತ್ರಾ, ರಂಗಪ್ರವೇಶದ ದಿನ ನೃತ್ಯದಲ್ಲಿ ತಮಗಿರುವ ಪರಿಣತಿಯನ್ನು ಪ್ರದರ್ಶಿಸಿದರು. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ `ಮಾರ್ಗಂ~ ಪ್ರಕಾರವನ್ನು ಅವರು ಅಭಿನಯಿಸಿದರು.
ಸಾಂಪ್ರದಾಯಿಕ ಅಲರಿಪ್ಪುವಿನಿಂದ ಕಾರ್ಯಕ್ರಮ ಆರಂಭ. ನೃತ್ಯ ಸಮುದಾಯ ಮರೆಯುತ್ತಿರುವ `ಶಬ್ದಂ~ ಬಹು ಸುಂದರವಾಗಿ ಅಭಿನಯಿಸಿದರು. ಯಮುನಾ ತೀರದಲ್ಲಿ ಗೋಪಿಯರ ಜೊತೆ ಸರಸವಾಡುತ್ತಿರುವ ತುಂಟ ಕೃಷ್ಣನ ಲೀಲೆಗಳ ವರ್ಣನೆಯನ್ನು ಇದು ಒಳಗೊಂಡಿತ್ತು.
18ನೇ ಶತಮಾನದಲ್ಲಿ ಮೈಲಾಪುರ ಗೌರಿಅಮ್ಮಾಳ್ ಸಂಯೋಜಿಸಿದ ಬಹು ಅಪರೂಪದ ಹುಸೈನಿ ರಾಗವನ್ನು `ವರ್ಣಂ~ಗಾಗಿ ಆಯ್ದುಕೊಳ್ಳಲಾಗಿತ್ತು.
ಗುರುವಂದನೆಯ ನಂತರದ ಎರಡನೇ ಭಾಗದಲ್ಲೂ ಸುಚಿತ್ರಾ ಅಪೂರ್ವ ನೃತ್ಯ ಪ್ರದರ್ಶಿಸಿದರು.
ನೃತ್ತ, ಅಭಿನಯ, ಅಂಗಸುಧಾ ಎಲ್ಲ ವಿಭಾಗಗಳಲ್ಲೂ ಅವರು ಮೇಲುಗೈ ಸಾಧಿಸಿದ್ದರು. ಹರಿಪ್ರಸಾದ್ ಅವರ ಸಂಗೀತ ಈ ಕಾರ್ಯಕ್ರಮದ ಚೆಲುವು ಹೆಚ್ಚಿಸಿತು. ಒಟ್ಟಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಸುಚಿತ್ರಾಳ ರಂಗಪ್ರವೇಶದ ಪ್ರತಿ ಕ್ಷಣವೂ ಮನಮೋಹಕವಾಗಿತ್ತು.
ನಟುವಾಂಗದಲ್ಲಿ ಸುಮನಾ ನಾಗೇಶ್, ಮೃದಂಗದಲ್ಲಿ ಅನಿಲ್ ಕುಮಾರ್, ವಯಲಿನ್ನಲ್ಲಿ ಡಾ. ನಟರಾಜ ಮೂರ್ತಿ ಮತ್ತು ಕೊಳಲಿನಲ್ಲಿ ಗಣೇಶ್ ಸಹಕಾರ ಪೂರಕವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.