ಬೆಳಗಾವಿ: ಕೋವಿಡ್–19 ಲಾಕ್ಡೌನ್ನಿಂದಾಗಿ ಖಾಸಗಿ ಕಂಪನಿಯಲ್ಲಿನ ಕೆಲಸ ಕಳೆದುಕೊಂಡ ಇಲ್ಲಿನ ಯುವಕನೊಬ್ಬ ಕನ್ನಡದ ಅಭಿಮಾನ ಬಿಂಬಿಸುವ ರ್ಯಾಪ್ ಸಾಂಗ್ ಮಾಡಿ ಪ್ರತಿಭೆ ಪ್ರದರ್ಶಿಸಿ ಗಮನಸೆಳೆದಿದ್ದಾರೆ.
ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಗಡಿ ನಾಡು ಬೆಳಗಾವಿಯ ಮಹತ್ವದ ಕುರಿತು ಅವರು ಚಿತ್ರಿಸಿರುವ ವಿಡಿಯೊ ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಹಬ್ಬು’ತ್ತಿದೆ. ಬೆಳಗಾವಿಯಲ್ಲೇ ಇದ್ದುಕೊಂಡು ಆಗಾಗ ತಗಾದೆ ತೆಗೆಯುವ ‘ಕನ್ನಡ ವಿರೋಧಿ’ಗಳಿಗೆ ‘ಗುದ್ದು’ ಕೊಡುತ್ತಿದೆ!
ಈ ಯುವ ಪ್ರತಿಭೆಯ ಹೆಸರು ಗುರುರಾಜ್ ಯಡಾಲ್. ಖಾನಾಪುರ ತಾಲ್ಲೂಕಿನ ಗಂದಿಗವಾಡದವರು. ಐಟಿಐ ಓದಿರುವ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ನೌಕರಿ ಕಳೆದುಕೊಂಡು ಊರಿಗೆ ಮರಳಿದ ಅವರು ಸಮಯವನ್ನು ರ್ಯಾಪ್ ಸಾಂಗ್ ನಿರ್ಮಾಣಕ್ಕೆ ವಿನಿಯೋಗಿಸಿದ್ದಾರೆ. ಕೆಲಸದಲ್ಲಿದ್ದಾಗ ಕೂಡಿಟ್ಟಿದ್ದ ಹಣದಲ್ಲಿ ₹ 25ಸಾವಿರ ವ್ಯಯಿಸಿ ‘ಗಡಿನಾಡು ಬೆಳಗಾವಿ’ ಎನ್ನುವ ವಿಡಿಯೊಗೆ ಜೀವ ನೀಡಿದ್ದಾರೆ.
ರಾಣಿ ಚನ್ನಮ್ಮ ವೃತ್ತ, ಸುವರ್ಣ ವಿಧಾನಸೌಧ, ಚನ್ನಮ್ಮನ ಕಿತ್ತೂರಿನ ಚನ್ನಮ್ಮ ವೃತ್ತ ಸೇರಿದಂತೆ ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಆಕರ್ಷಕವಾಗಿ ಚಿತ್ರೀಕರಿಸಲಾಗಿದೆ. ಮೊದಲ ಪ್ರಯತ್ನವಾದರೂ ಸಾಹಿತ್ಯ ರಚನೆಯಲ್ಲಿ ಗಮನಸೆಳೆದಿದ್ದಾರೆ. ಕನ್ನಡ ನಾಡು–ನುಡಿಯ ವಿಷಯದಲ್ಲಿ ಆಗಾಗ ತಕರಾರು ತೆಗೆಯುವ, ಮರಾಠಿ ಭಾಷಿಕರಿಗೆ ಪ್ರಚೋದನೆ ನೀಡುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರಿಗೆ ‘ಚುಚ್ಚುಮದ್ದು’ ನೀಡುವ ಕೆಲಸವನ್ನೂ ಮಾಡಿದ್ದಾರೆ. 14ಸಾವಿರಕ್ಕೂ ಹೆಚ್ಚಿನ views ಸಿಕ್ಕಿದ್ದು, ವೀಕ್ಷಿಸಿದವರು ಈ ಗ್ರಾಮೀಣ ಪ್ರತಿಭೆಯ ಬೆನ್ನು ತಟ್ಟಿದ್ದಾರೆ.
ಹಾಡು ಹೀಗಿದೆ...
ಬೆಳಗಾವಿ ಕನ್ನಡಿಗರ ಸ್ವತ್ತು, ಗತ್ತು
ಬಿಡೋದಿಲ್ಲ ನಿಯತ್ತು, ಯಾವತ್ತೂ
ಎಲ್ಲಿಂದನೊ ಬರ್ತೀರಾ
ಕ್ಯಾಬೆ ಗೀಬೆ ಅಂತೀರಾ
ಕನ್ನಡ ಮಾತಾಡು ಅಂತಂದ್ರೆ
ಕನ್ನಡ ಗೊತ್ತಿಲ್ಲ ಅಂತೀರಾ
ಕುಡಿಯೋಕ್ ಬೇಕು ಇಲ್ಲಿ ಜಲ
ನಡೆಯೋಕ್ ಬೇಕು ಇಲ್ಲಿ ನೆಲ
ಕನ್ನಡದ ಬಗ್ಗೆ ಕೇಳಿದ್ರೆ ಗಾಂಚಾಲಿ ತೋರಿಸ್ತೀರ
ರಾಜ್ಯದಲ್ಲೇ ದೊಡ್ಡ ಜಿಲ್ಲೆ ನಮ್ಮದು
ಕರ್ನಾಟಕದ ಎರಡನೇ ರಾಜಧಾನಿ
ಬೆಳಗಾವಿ ನಮ್ ಬೆಳಗಾವಿ
ಕುಂದಾನಗರಿ ಬೆಳಗಾವಿ
ಬೆಳಗಾವಿ ನಮ್ ಬೆಳಗಾವಿ
ಗಡಿ ನಾಡು ಬೆಳಗಾವಿ
ನಮ್ ಬೆಳಗಾವಿ, ನಮ್ ಬೆಳಗಾವಿ
ಗಡಿನಾಡು ಬೆಳಗಾವಿ
ನರಕಕ್ ಕಳ್ಸಿ ನಾಲಿಗೆ ಸೀಳಿದ್ರೂ
ಮೂಗ್ನಲ್ ಮಾತಾಡ್ತೀನಿ ಕನ್ನಡ
ಎದೆ ಸೀಳಿ ನೋಡಿದ್ರೂ
ನಿಂಗ್ ಕಾಣೊದೊಂದೆ ಕನ್ನಡ
ಗಡಿ ನಾಡ ಕನ್ನಡಿಗ ನಾನು
ಬೆಳಗಾವಿ ಕನ್ನಡಿಗನು
ಏನ್ ಮಾಡ್ತಿ ಮಾಡ್ಕೊ ನೀನು
ಬೆಳಗಾವಿ ನಮ್ದೆ ಬರ್ಕೊ ಇನ್ನು
ಕನ್ನಡ ಗೊತ್ತಿಲ್ಲ ಅನ್ನಬೇಡ
ಮಾತಾಡೊ ನೀ ಕನ್ನಡ
ಎಲ್ಲರೂ ಒಂದಾಗಿ ಬಾಳು
ಬಂದು ನಮ್ಮ ಸಂಗಡ
ತಾಯಿ ಭುವನೇಶ್ವರಿಗೆ ಕಟ್ಟಿರುವೆ
ಮನದಲಿ ಒಂದು ಗೋಪುರ
ರಾಜ್ಯೋತ್ಸವದ ಆರ್ಭಟ ನೋಡು
ಬೆಳಗಾವಿಯಲ್ ಭೀಕರ...
ಸರ್ವ ಧರ್ಮಗಳಿಗೂ ಬೆಲೆ ಇಲ್ಲಿದೆ
ಏಕತೆಯ ಮಣ್ಣು ಭಾವ ಬೆಳಗಾವಿ ಕನ್ನಡಿಗರ ಜೀವ
ಬೆಳಗಾವಿ ಕನ್ನಡಿಗರ ಜೀವ
ಇರೋಕಂತ ಜಾಗ ಕೊಟ್ರೆ
ಬೆಳಗಾವಿ ಬೇಕಂತೀರ
ಕಪ್ಪು ಬಟ್ಟೆ ಕಟ್ತೀರಾ
ನೀವು ಬಾಯ್ ಬಾಯ್ ಬಡ್ಕೊಂಡ್ ಉರ್ಕೊತಿರಾ
ಚನ್ನವ್ವ ಆಳಿದಂಥ ರಾಯಣ್ಣ ಬಾಳಿದಂಥ
ನಾಡು ನುಡಿಗೆ ಕೀರ್ತಿ ತಂದ ಬೆಳಗಾವಿ ನಮ್ಮ ಸ್ವಂತ
ಬೆಳಗಾವಿ ನಮ್ ಜೀವ ಕಣೋ
ಬೆಳಗಾವಿ ನಮ್ ಗರ್ವ ಕಣೋ
ಬೆಳಗಾವಿ ನಮ್ ದೈವ ಕಣೋ
ಬೆಳಗಾವಿ ನಮ್ ಅವ್ವ ಕಣೋ
ಕೇಳುಸ್ಕೊಳ್ರೊ ಲೋ
ಬರ್ದಿಟ್ಕೊಳ್ರೋ ಲೋ
ಯಾರಪ್ಪನ್ದೇನೈತಿ ಬೆಳಗಾವಿ ನಮ್ದೈತಿ
ರಾಜ್ಯೋತ್ಸವ ನಮ್ಮ ಹಬ್ಬ
ಫುಲ್ಲು ಗಿಚ್ಚು ಮಾಡ್ತೀವಿ
ಅದನ್ ನೋಡಿ ಉರ್ಕೊಳೊ ನಿಮ್ಗೆ
ಬರ್ನಲ್ ಬೇಕಾದ್ರೆ ಕೊಡಿಸ್ತೀವಿ
ನನ್ ಮಾತ್ ಕೇಳಿ ಉರ್ಕೊಂಡ್ರೆ
ನಾನೇನೂ ಮಾಡಕ್ಕಾಗಲ್ಲ
ಹೊಡಿ ಶಾಂಡಗಿ ಮಜ್ಗಿ
ಜೀವ ಬಿಟ್ರೂ ಬೆಳಗಾವಿ ಬಿಡೋ ಮಾತಿಲ್ಲ
ಜೈ ಕರ್ನಾಟಕ...
ಎಂಬ 4.28 ನಿಮಿಷದ ಹಾಡಿದು. ಅರ್ಜಾಬ್ ಕಿಲ್ಲೇದಾರ್ ಛಾಯಾಗ್ರಹಣ ಹಾಗೂ ಸಾಗರ್ ಭಂಡಾರಿ ಅಸಿಸ್ಟೆಂಡ್ ಡಿಒಪಿ ಆಗಿ ಕೆಲಸ ಮಾಡಿದ್ದಾರೆ. ಮೇಘರಾಜ್ ನಂದಿಕೋಳ್ ಸಂಗೀತ ನೀಡಿದ್ದಾರೆ. ಮಾಸ್ಟರಿಂಗ್ ಹಾಗೂ ಮಿಕ್ಸಿಂಗ್ ಮಾಡಿದ್ದು ಈಶ್ವರ್ ಜಿ.ಪಿ.ಬಿ. ಹಾಡಿದ್ದು ಆರ್.ಎಸ್. ಪ್ರವೀಣ್. ಸಾಹಿತ್ಯ ಹಾಗೂ ನಟನೆ ಗುರುರಾಜ್ ಯಡಾಲ್ ಅವರದು.
‘ಕವನಗಳನ್ನು ಬರೆಯುವ ಹವ್ಯಾಸವಿದೆ. ಬೆಳಗಾವಿಯ ಬಗ್ಗೆ 2019ರಲ್ಲೇ ಹಾಡು ಬರೆದಿದ್ದೆ. ಬೆಂಗಳೂರಿನಲ್ಲಿ ಕೆಲಸದಲ್ಲಿ ಬ್ಯುಸಿ ಇದ್ದಿದ್ದರಿಂದ ರ್ಯಾಪ್ ಮಾಡಲು ಆಗಿರಲಿಲ್ಲ. ಲಾಕ್ಡೌನ್ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪ್ರಾಯೋಜಕರು ಕೂಡ ಸಿಗಲಿಲ್ಲ. ಹೀಗಾಗಿ, ನಾನೇ ಹಣ ಹಾಕಬೇಕಾಯಿತು. ಕಷ್ಟಪಟ್ಟು ಬರೆದ ಹಾಡು ವ್ಯರ್ಥವಾಗಬಾರದೆಂದು ವಿಡಿಯೊ ಮಾಡಿಸಿದೆ’ ಎಂದು ಗುರುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಡಿ ನಾಡಾದ ಬೆಳಗಾವಿ ಕರ್ನಾಟಕದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಎಂಇಎಸ್ನವರು ಆಗಾಗ ಕ್ಯಾತೆ ತೆಗೆಯುತ್ತಿರುತ್ತಾರೆ. ಇದೆಲ್ಲವನ್ನೂ ಚಿಕ್ಕಂದಿನಿಂದಲೂ ನೋಡುತ್ತಾ ಬೆಳೆದಿದ್ದೇನೆ. ಕನ್ನಡದ ಅಭಿಮಾನದಿಂದಾಗಿ ಈ ರ್ಯಾಪ್ ಸಾಂಗ್ ಮಾಡಿದ್ದೇನೆ. ಇಲ್ಲಿ ಕನ್ನಡ ಉಳಿಯಬೇಕು–ಬೆಳೆಯಬೇಕು ಎನ್ನುವುದು ನನ್ನ ಆಶಯ. ಇದಕ್ಕಾಗಿ ನನ್ನದೊಂದು ಕಿರುಕಾಣಿಕೆ ಇದೆಂದು ಭಾವಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ನೋಡಿದವರಿಗೆ ಬೆಳಗಾವಿ ಬಗ್ಗೆ ಅಭಿಮಾನ ಹೆಚ್ಚಾದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಇನ್ನೊಂದು ಕೆಲಸ ಸಿಕ್ಕ ಮೇಲೆ ಮತ್ತೊಂದು ರ್ಯಾಪ್ ಸಾಂಗ್ ಮಾಡುವ ಪ್ಲಾನ್ ಇದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ ಮೊ:9844658063.
ವಿಡಿಯೊ ವೀಕ್ಷಣೆಗೆ ಕೊಂಡಿ: https://youtu.be/h9jh_osh6Ro
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.